ಯಾವುದೇ ಕಾರಣಕ್ಕೂ ಕೆರೆ ಅಂಗಳವನ್ನು ಖಾತೆ ಮಾಡಿಕೊಡುವುದಿಲ್ಲ: ಕೃಷ್ಣ ಬೈರೇಗೌಡ

8 months ago

ಬೆಂಗಳೂರು: ಯಾವುದೇ ಕಾರಣಕ್ಕೂ ಕೆರೆ ಅಂಗಳವನ್ನು ಖಾತೆ ಮಾಡಿಕೊಡುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಗೆ ಸ್ಪಷ್ಟಪಡಿಸಿದರು.

ಶಾಸನ ರಚನ ಕಲಾಪದಲ್ಲಿ ನೋಂದಣಿ(ಕರ್ನಾಟಕ ತಿದ್ದುಪಡಿ) ವಿಧೇಯಕ ಮೇಲಿನ ಚರ್ಚೆ  ಸಂದರ್ಭದಲ್ಲಿ ಬಿಜೆಪಿ ಶಾಸಕ ಮುನಿರತ್ನ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಯಾವುದೇ ಕಾರಣಕ್ಕೂ ಕೆರೆ ಅಂಗಳವನ್ನು ಖಾತೆ ಮಾಡಿಕೊಡುವುದಿಲ್ಲ. ಕೆರೆ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದರು.

ಮುನಿರತ್ನ ಮಾತನಾಡಿ, ಬೆಂಗಳೂರಿನಲ್ಲಿ ವಾರ್ಡ್‌ವಾರು ಸರ್ಕಾರಿ ಜಮೀನನ್ನು ಗುರುತಿಸಿ ಬೌಂಡರಿ ನಿಗದಿ ಮಾಡಿ ಒತ್ತುವರಿ ಮಾಡದಂತೆ ಬಂದೋಬಸ್ತ್‌ ಮಾಡಬೇಕು ಎಂದು ಸಲಹೆ ಮಾಡಿದರು.

ಹಲವು ಶಾಸಕರ ಸಲಹೆ ಸೂಚನೆ  ಆಲಿಸಿದ ನಂತರ ಮಾತನಾಡಿದ ಕೃಷ್ಣಭೈರೇಗೌಡ, ನಕಲಿ ವ್ಯಕ್ತಿ, ನಕಲಿ ದಾಖಲೆ ಸೃಷ್ಟಿ ಮಾಡಿ ನೋಂದಣಿ ಮಾಡಿಸಿದ್ದರೆ  ಅದನ್ನು ರದ್ದುಪಡಿಸಲು ಜಿಲ್ಲಾ ನೋಂದಣಾಧಿಕಾರಿಗೆ ಅರ್ಜಿ ಸಲ್ಲಿಸಬಹುದು. ಅಧಿಕಾರಿಗಳು ಪರಿಶೀಲಿಸಿ ರದ್ದುಪಡಿಸುತ್ತಾರೆ. ಈ  ಸಂಬಂಧದ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ದೊರೆತಿದೆ. ನಿಯಮಗಳನ್ನು ರೂಪಿಸಲಾಗುತ್ತಿದ್ದು, ಈ ತಿಂಗಳಲ್ಲಿ  ಅಂತಿಮಗೊಳಿಸಲಾಗುವುದು. ಆನಂತರ ನಕಲಿ ದಾಖಲಿಸಿ ಸೃಷ್ಟಿಸಿ ನೋಂದಣಿ ಮಾಡಿರುವುದಕ್ಕೆ ತಕ್ಷಣಕ್ಕೆ ಪರಿಹಾರ ಸಿಗಲಿದೆ. ಪ್ರಸ್ತುತ ಈ ರೀತಿ ನೋಂದಣಿಯಾದರೆ ಸಿವಿಲ್‌ ಕೋರ್ಟ್‌ ಮೊರೆ ಹೋಗಬೇಕಿದೆ ಎಂದರು.

ಹಳೆಯ ದಾಖಲೆ ಒದಗಿಸಿ ನೋಂದಣಿಯಾಗಿರುವ ಮಾಹಿತಿ ಇದೆ. ತಪ್ಪಿತಸ್ಥರನ್ನು ಹುಡುಕುವುದಕ್ಕಿಂತ ತಪ್ಪಿಗೆ ಅವಕಾಶವಿಲ್ಲದಂತೆ ಕ್ರಮ ವಹಿಸಲಾಗುವುದು. ನಕಲಿ ನೋಂದಣಿಯನ್ನು ತಪ್ಪಿಸುವ ಉದ್ದೇಶದಿಂದ ನೋಂದಣಿ ತಿದ್ದುಪಡಿ ವಿಧೇಯಕವನ್ನು ತರಲಾಗಿದೆ ಎಂದರು.

Leave a Reply