ಎಎಸ್ಐ ಚಾನ್ ಪಾಷಾ ವಿರುದ್ಧ ಇಲಾಖಾ ತನಿಖೆಗೆ ಸೀಮಂತ್ ಕುಮಾರ್ ಸಿಂಗ್ ಆದೇಶ

9 months ago

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಲಷ್ಕರ್-ಎ-ತೊಯ್ಬಾ ಉಗ್ರ ಟಿ.ನಸೀರ್‌ಗೆ ನೆರವು ನೀಡಿ ರಾಷ್ಟ್ರೀಯ ತನಿಖಾ‌ ದಳ (ಎನ್ಐಎ)ದ ಬಂಧನದಲ್ಲಿರುವ ನಗರ ಸಶಸ್ತ್ರ ಪಡೆಯ ಎಎಸ್ಐ ಚಾನ್ ಪಾಷಾ ವಿರುದ್ಧ ಇಲಾಖಾ ತನಿಖೆಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ.

ಸಾಮಾನ್ಯವಾಗಿ ಈ ರೀತಿಯ ಆರೋಪ ಬಂದಾಗ ಅಮಾನತು ಮಾಡುತ್ತೇವೆ. ಪೊಲೀಸ್ ಇಲಾಖೆಯಲ್ಲಿ ಏನು ಕ್ರಮ ಇದೆಯೋ ಅದನ್ನು ಬಂಧಿತನ ವಿರುದ್ಧ  ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಆರೋಪಿ ವಿರುದ್ಧ ತನಿಖೆ ಕೂಡ ಆಗುತ್ತದೆ. ಆ ಬಳಿಕ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಎನ್ಐಎದಿಂದ ತನಿಖೆ ನಡೆಯುತ್ತಿದೆ. ಮುಂದೆ ನಮ್ಮ ಆಂತರಿಕ ತನಿಖೆಯ ವರದಿಯ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯ ಸೇರಿದಂತೆ ದೇಶದ ಹಲವೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಕೋಲಾರದಲ್ಲಿ ಶೋಧ ನಡೆಸಿದ್ದ ಎನ್‌ಐಎ ಅಧಿಕಾರಿಗಳು, ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ನಾಗರಾಜ್, ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಎಎಸ್ಐ ಚಾನ್ ಪಾಷಾ, ಹಾಗೂ ತಲೆಮರೆಸಿಕೊಂಡಿರುವ ಆರೋಪಿ ಜುನೈದ್ ಖಾನ್‌ನ ತಾಯಿ ಅನೀಸ್ ಫಾತೀಮಾ ಸೇರಿದಂತೆ ಮೂವರನ್ನು ಬಂಧಿಸಿದ್ದರು.

2022ರಿಂದಲೂ ಟಿ.ನಾಸೀರ್ ಪರವಾಗಿ ಕೆಲಸ ಮಾಡುತ್ತಿದ್ದ ಎಎಸ್ಐ ಚಾನ್ ಪಾಷಾ ಆತನನ್ನ ಕೋರ್ಟ್‌ಗೆ ಕರೆದೊಯ್ಯುವ ಮಾಹಿತಿಯನ್ನು ಸಂಘಟನೆಯ ಕೆಲವು ವ್ಯಕ್ತಿಗಳು ಹಾಗೂ ಮುಂಗಡವಾಗಿ ಟಿ.ನಾಸೀರ್‌ಗೂ ನೀಡುತ್ತಿದ್ದ. ಅದಕ್ಕೆ ಪ್ರತಿಯಾಗಿ ಹಣ ಪಡೆಯುತ್ತಿದ್ದ ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

Leave a Reply