ಸಿ.ಟಿ.ರವಿ – ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣ ಇದೀಗ ಮುಗಿದ ಅಧ್ಯಾಯ: ಬಸವರಾಜ ಹೊರಟ್ಟಿ

1 year ago

ಹುಬ್ಬಳ್ಳಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಬಿಜೆಪಿ ಸದಸ್ಯ ಸಿ ಟಿ ರವಿ ನಡುವಿನ ಪ್ರಕರಣದ ಬಗ್ಗೆ ಸ್ಥಳ ಮಹಜರು ನಡೆಸಲು ಸಲ್ಲಿಸಿದ್ದ ಕೋರಿಕೆಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿರಸ್ಕರಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಪೊಲೀಸರು ನಡೆಸುತ್ತಿರುವ ತನಿಖೆಯ ವೈಖರಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಮತ್ತು ಲಕ್ಷಿ ಹೆಬ್ಬಾಳ್ಕರ್ ಪ್ರಕರಣ ಇದೀಗ ಮುಗಿದ ಅಧ್ಯಾಯ. ಡಿ.19ರಂದೇ ಸದನದಲ್ಲಿ ಈ ಬಗ್ಗೆ ರೂಲಿಂಗ್ ಕೊಟ್ಟಿದ್ದೇನೆ. ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆ ಆಗಿದೆ ಎಂದರು.

ಸದನದ ಒಳಗೆ ನಡೆಯುವ ಘಟನೆಗಳಿಗೆ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ. ಹೀಗಾಗಿ ಮಹಜರು ಮಾಡುವುದಾಗಿ ಪೊಲೀಸರು ನನ್ನ ಬಳಿ ಕೇಳಿದರೂ ನಾನು ಅದಕ್ಕೆ ನಾವು ಅನುಮತಿ ಕೊಟ್ಟಿಲ್ಲ ಎಂದರು.

ಸದನವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿ ಬಾಗಿಲು ಹಾಕಿದ ಮೇಲೆ ಪೊಲೀಸರು ಮಹಜರು ಮಾಡಲು ಅವಕಾಶ ನೀಡಿಲ್ಲ. ಘಟನೆಗೆ ಸಂಬಂಧಪಟ್ಟಂತೆ ಹೊರಗಿನ ವಿಚಾರಕ್ಕೆ ದೂರು ಕೊಟ್ಟಿದ್ದರೆ ಅದರ ಬಗ್ಗೆ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಸದನದೊಳಗಿನ ವಿದ್ಯಮಾನಗಳ ಬಗ್ಗೆ ಅವರು ಹಸ್ತಕ್ಷೇಪ ಮಾಡಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಘಟನೆ ನಡೆದ ದಿನ ರಾತ್ರಿ 1 ಗಂಟೆ ತನಕವೂ ಸಿ.ಟಿ.ರವಿ ಜೊತೆ ಸಂಪರ್ಕದಲ್ಲಿ ಇದ್ದೆ. ಪೊಲೀಸ್‍ ಆಯುಕ್ತರ ಜೊತೆಗೆ ಮಾತನಾಡಿ ಸಿ.ಟಿ. ರವಿ ಅವರಿಗೆ ಏನಾದರೂ ಆದರೆ, ಸುಮ್ಮನೆ ಬಿಡುವುದಿಲ್ಲ ಎಂದು ನೇರವಾಗಿಯೇ ಅವರಿಗೆ ಹೇಳಿದ್ದೆ ಎಂದರು.

ಅಂದು ಬೆಳಗ್ಗೆ ತನಕವೂ ನಾನು ಟ್ರ್ಯಾಕ್ ಮಾಡಿದ್ದು ಬೆಳಗ್ಗೆ 5 ಗಂಟೆಗೆ ಎಸ್ಪಿಗೂ ಕೂಡ ಮಾತನಾಡಿದ್ದೆ. ಅಲ್ಲದೇ ಈಗಾಗಲೇ ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್‍ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.

ಸದನದ ಒಳಗೆ ನಡೆದ ಘಟನೆ ಬಗ್ಗೆ ಪೊಲೀಸರು ಹಸ್ತಕ್ಷೇಪ ಮಾಡಬಾರದು. ಅದಕ್ಕೆ ಅವರಿಗೆ ಅಧಿಕಾರ ಮತ್ತು ಹಕ್ಕು ಎರಡೂ ಇಲ್ಲ ಸದನ ಮುಗಿದ ಮೇಲೆ ಯಾವುದೇ ವೀಡಿಯೋ ಚಿತ್ರೀಕರಣ ಆಗಿಲ್ಲ ಎಂದರು.

ಪ್ರಕರಣದಲ್ಲಿ ಮಹಿಳಾ ಆಯೋಗಕ್ಕೆ ಸಭಾಪತಿಗೆ ಕೇಳುವ ಅಧಿಕಾರ ಇಲ್ಲ, ಅವರು ಪತ್ರ ಬರೆಯಲಿ, ಆದ್ರೆ ಅದಕ್ಕೆ ನಾನು ಉತ್ತರ ಕೊಡಬೇಕಾಗಿಯೂ ಇಲ್ಲ. ಬೇಕಾದರೆ ಬೇರೆಯವರಿಗೆ ನೋಟೀಸ್‍ ಕೊಡಲಿ ಎಂದರು.

Leave a Reply