ತಾವು ಆರಂಭಿಸಿರುವ ಹೋರಾಟದಿಂದ ಸರಿಯುವ ಪ್ರಶ್ನೆ ಇಲ್ಲ: ಯತ್ನಾಳ್

1 year ago

ಒಂದು ಕುಟುಂಬದ ವಿರುದ್ಧ ತಾವು ಆರಂಭಿಸಿರುವ ಹೋರಾಟದಿಂದ ಸರಿಯುವ ಪ್ರಶ್ನೆ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್

ದೆಹಲಿ: ಒಂದು ಕುಟುಂಬದ ವಿರುದ್ಧ ತಾವು ಆರಂಭಿಸಿರುವ ಹೋರಾಟದಿಂದ ಸರಿಯುವ ಪ್ರಶ್ನೆ ಇಲ್ಲ. ಬಿಜೆಪಿ ಯಾವುದೇ ಕಾರಣಕ್ಕೂ ಕುಟುಂಬದ ಆಸ್ತಿಯಾಗಬಾರದು ಎಂದು ಬಿಜೆಪಿ ಬಂಡಾಯ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಹೈಕಮಾಂಡ್ ವಿರುದ್ಧ ಸೆಡ್ಡು ಹೊಡೆದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ರಮೇಶ್ ಜಾರಕಿಹೊಳಿ, ಜಿ ಸಿದ್ದೇಶ್ವರ್, ಬಿ ಪಿ ಹರೀಶ್, ಕುಮಾರ್ ಬಂಗಾರಪ್ಪ ಮತ್ತು ಇತರರೊಂದಿಗೆ ಬಂಡಾಯ ಎದ್ದಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ತಮಗೆ ನೀಡಿರುವ ಶೋಕಾಸ್ ನೋಟೀಸ್ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರು ನೀಡಿರುವ ನೋಟಿಸ್‌ಗೆ ನಾನು ಉತ್ತರಿಸುತ್ತೇನೆ ಎಂದಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಯ ಪ್ರಸ್ತುತ ಸ್ಥಿತಿಯ ಬಗ್ಗೆ ವಾಸ್ತವಾಂಶವನ್ನು ಅವರ ಮುಂದೆ ತೆರದಿಡುವೆ. ಹಿಂದುತ್ವದ ಪರ ಹೋರಾಟ, ಭ್ರಷ್ಟಾಚಾರದ ವಿರುದ್ಧದ ಹೋರಾಟ, ವಕ್ಫ್ ಸಂಬಂಧಿತ ಸಮಸ್ಯೆಗಳು ಹಾಗೂ ವಂಶ ರಾಜಕಾರಣದ ವಿರುದ್ಧದ ಹೋರಾಟ ಸಂಬಂಧ ನನ್ನ ಬದ್ಧತೆ ಅಚಲವಾಗಿ ಇರಲಿದೆ ಎಂದರು.

ತಾವು ದೆಹಲಿಯಲ್ಲಿದ್ದು ವರಿಷ್ಠರನ್ನು ಭೇಟಿಯಾಗುತ್ತಿದ್ದೇನೆ. ಈ ವೇಳೆ ರಾಜ್ಯದಲ್ಲಿ ನಡೆದಿರುವ ಹೊಂದಾಣಿಕೆಯ ರಾಜಕಾರಣ ಒಂದು ಕುಟುಂಬ ನಡೆಸುತ್ತಿರುವ ಭ್ರಷ್ಟಾಚಾರ ಪಕ್ಷದ ಹಾದಿ ತಪ್ಪಿರುವ ಹೋರಾಟ ಸೇರಿದಂತೆ ಎಲ್ಲ ಅಂಶಗಳನ್ನು ಅವರಿಗೆ ವಿವರಿಸುತ್ತೇನೆ ಎಂದರು.

Leave a Reply