ಬೆಂಗಳೂರು: ಅಧ್ಯಾಪಕ ಡಾ.ರಾಜಪ್ಪ ದಳವಾಯಿ ಅವರು ಅಂದು ಇಂದುಗಳ ಬಂಧು ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಡಾ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಡಾ.ರಾಜಪ್ಪ ದಳವಾಯಿಯವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಪ್ಪ ದಳವಾಯಿಯವರು ಸಾಂಸ್ಕೃತಿಕ ಶ್ರಮಜೀವಿ ಎಂದು ಅವರ ವ್ಯಕ್ತಿತ್ವವನ್ನು ಬಣ್ಣಿಸಿದರು.

ನಾನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದ ಅವಧಿಯಲ್ಲಿ 125 ಪುಸ್ತಕಗಳನ್ನು ಏಕಕಾಲಕ್ಕೆ ಮುದ್ರಿಸಿ ಬಿಡುಗಡೆಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದೆ. ಆ ಸಮಯದಲ್ಲಿ ಹಗಲು, ರಾತ್ರಿ ಎನ್ನದೆ ಒಪ್ಪಿಕೊಂಡ ಕೆಲಸವನ್ನು ನಿರಂತರವಾಗಿ ನಿರ್ವಹಿಸಿದರು. ಎಷ್ಟೋ ಸಂದರ್ಭದಲ್ಲಿ ಪ್ರಿಂಟಿಗ್ ಪ್ರೆಸ್ ನಲ್ಲಿ ರಾತ್ರಿವರೆಗೆ ಕೆಲಸ ಮಾಡಿ, ಪೇಪರ್ ಮೇಲೆ ಮಲಗಿ, ಬೆಳಿಗ್ಗೆ ಮತ್ತೆ ಎದ್ದು ಪ್ರೂಫ್ ರೀಡಿಂಗ್ ಕೆಲಸವನ್ನು ನಿರ್ವಹಿಸಿ ಯೋಜನೆ ಯಶಸ್ಸಾಗಲು ಕಾರಣರಾದರು ಎಂದು ನೆನಪಿಸಿಕೊಂಡರು.

ರಾಜಪ್ಪ ದಳವಾಯಿಯವರಿಗೆ ಸಿಗಬೇಕಾದ ಸ್ಥಾನಮಾನಗಳು ಸಿಗಲಿಲ್ಲ. ಅವರದು ನಿರಂತರವಾಗಿ ಅಲೆಮಾರಿತನವಾಗಿತ್ತು. ಬಹಳ ಸಂದರ್ಭಗಳಲ್ಲಿ ರಾಜಪ್ಪ ದಳವಾಯಿಯವರು ತಮ್ಮ ಕೆಲಸಕ್ಕಿಂತ ಬೇರೆಯವರ ಕೆಲಸಗಳಿಗೆ ಒತ್ತು ಕೊಟ್ಟು ನನ್ನ ಬಳಿ ಬರುತ್ತಿದ್ದರು ಎಂದರು.

ನನಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬೀಳ್ಕೊಡುಗೆಯನ್ನೆ ಮಾಡಲಿಲ್ಲ. ಆದರೆ ರಾಜಪ್ಪ ದಳವಾಯಿ ಅವರಿಗೆ ಬೀಳ್ಕೊಡುಗೆ ನೀಡಿರುವುದು ನನಗೆ ಸಂತಸ ತಂದಿದೆ. ಇಂತಹ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿರುವುದಕ್ಕೆ ಕನ್ನಡ ಅಧ್ಯಯನ ಕೇಂದ್ರಕ್ಕೆ ಅಭಿನಂದನೆ ಎಂದರು.
ರಾಜಪ್ಪ ದಳವಾಯಿಯವರು ಪುರಾಣ ಮತ್ತು ಐತಿಹಾಸಿಕ ವಿಷಯಗಳನ್ನು ಸಮಕಾಲೀನಗೊಳಿಸುವ ಮಾದರಿಯಲ್ಲಿ ನಾಟಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕುಲಂ, ಸುಯೋಧನ, ಒಂದು ಬೊಗಸೆ ನೀರು, ಪ್ರೀತಿಯ ಹುಡುಕುತ್ತಾ, ಮುಖ್ಯಮಂತ್ರಿ ಅರಸು ನಾಟಕಗಳು ಇದಕ್ಕೆ ಉದಾಹರಣೆಗಳು ಎಂದರು.
ಕಾರ್ಯಕ್ರಮದಲ್ಲಿ ಮಾತಾಡಿದ ಕರ್ನಾಟಕ ಲೇಖಕಿಯ ಸಂಘದ ಅಧ್ಯಕ್ಷೆ ಮತ್ತು ಕವಿ, ನಾಟಕಕಾರ್ತಿ ಡಾ.ಎಚ್.ಎಲ್.ಪುಷ್ಪ, ಕನ್ನಡದ ಮಹತ್ವದ ನಾಟಕಕಾರರ ಸಾಲಿನಲ್ಲಿ ರಾಜಪ್ಪ ದಳವಾಯಿ ಅವರಿಗೆ ಸ್ಥಾನವಿದೆ. ಅವರು ಸಂಘಟನೆಯಲ್ಲಿ ತೊಡಗಿಕೊಂಡೇ ಮಹತ್ವದ ನಾಟಕಗಳನ್ನು ರಚಿಸಿದ್ದಾರೆ. ಅವುಗಳು ಯಶಸ್ವಿ ನಾಟಕಗಳು ಎಂದರು.
ಬಂಡಾಯ ಸಂಘಟನೆಯ ಒಡನಾಡಿಯಾಗಿ ನಾನು ಅವರೊಂದಿಗೆ ಕಾಲ ಕಳೆದಿದ್ದೇನೆ. ಪಂಪನ ಕುರಿತ ನಾಟಕಗಳ ರಚನಾ ಶಿಬಿರದಲ್ಲಿ ನಾವಿಬ್ಬರೂ ಒಟ್ಟಿಗೆ ನಾಟಕ ರಚಿಸಿದೆವು. ಅನಂತರ ಕೂಡ ರಾಜಪ್ಪ ದಳವಾಯಿಯವರು ನಾಟಕ ರಚನೆಯನ್ನು ಗಂಭೀರವಾಗಿ ಪರಿಗಣಿಸಿದರು. ಅವರದು ವಿಶಿಷ್ಟ ವ್ಯಕ್ತಿತ್ವ ಮತ್ತು ಮನೋಧರ್ಮ. ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡೇ ಸಂಘಟನೆಯಲ್ಲಿ ಸಕ್ರಿಯರಾಗಿರುವುದು ಮಹತ್ವದ ಸಂಗತಿ ಎಂದರು.
ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಡಾಮಿನಿಕ್ ಮಾತನಾಡಿ, ವಿದ್ಯಾರ್ಥಿಗಳೊಡನೆ ಸಹಜವಾಗಿ ಬೆರೆಯುವ ಮತ್ತು ಅವರ ಬದುಕನ್ನು ಕಟ್ಟಿಕೊಡುವಲ್ಲಿ ರಾಜಪ್ಪ ದಳವಾಯಿ ಅವರ ಪಾತ್ರ ಬಹುದೊಡ್ಡದು ಎಂದರು.
ಕಾರ್ಯಕ್ರಮದಲ್ಲಿ ಮಾತಾಡಿದ ರಾಜಪ್ಪ ದಳವಾಯಿಯವರ ಪತ್ನಿ ಮಂಜುಳಾ ಬಿ.ಸಿ., ನಮ್ಮಿಬ್ಬರ ಬದುಕಿನಲ್ಲಿ ಪರಸ್ಪರ ಗೌರವಿಸಿಕೊಂಡು ಬಂದಿದ್ದೇವೆ. ಅವರು ಮಾಡುವ ಕೆಲಸಕ್ಕೆ ನಾನು, ನನ್ನ ಕೆಲಸಕ್ಕೆ ಅವರು ಎಂದಿಗೂ ಅಡ್ಡಗಾಲು ಹಾಕಿಲ್ಲ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ರಾಜಪ್ಪ ದಳವಾಯಿ ಅವರು, ನಾನು ಇಂದು ಏನಾಗಿದ್ದೇನೆಯೋ ಅದರಲ್ಲಿ ವಿದ್ಯಾರ್ಥಿಗಳು ಮತ್ತು ನನ್ನ ಒಡನಾಡಿಗಳ ಪಾತ್ರ ಮಹತ್ವವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ, ಒಡನಾಡಿಯಿಂದಲು ನಾನು ಬಹಳಷ್ಟು ಕಲಿತಿದ್ದೇನೆ ಎಂದರು.

ಪ್ರತಿ ತಿಂಗಳು ನನಗೆ ಸಂಬಳ ಬಂದಾಗ ನಾನು ಈ ತಿಂಗಳು ನನ್ನ ವಿದ್ಯಾರ್ಥಿಗಳಿಗೆ ಎಷ್ಟು ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ಬೋಧಿಸಿದ್ದೇನೆ ಎಂದು ಯೋಚಿಸುತ್ತೇನೆ. ನಾನು ಬೋಧಿಸುವ ವೇಳೆ ವಿದ್ಯಾರ್ಥಿ ನನ್ನ ಮಾತುಗಳನ್ನು ಕೇಳಿ ಬೇರೆಡೆ ಮುಖ ತಿರುಗಿಸಿದರೆ ನಾನು ಅವನಿಗೆ ನ್ಯಾಯ ಒದಗಿಸಿಲ್ಲ ಎಂದು ಅರ್ಥವಾಗಬೇಕು. ಈ ಹಿನ್ನೆಲೆಯಲ್ಲಿ ಪ್ರತಿ ತರಗತಿಗಳಲ್ಲು ಬೋಧಿಸುವ ಯತ್ನವನ್ನು ನಾನು ಮಾಡಿದ್ದೇನೆ ಎಂದರು.
ನನ್ನ ಅಲೆಮಾರಿತನಕ್ಕೆ ಕಾರಣ ಸ್ವಲ್ಪ ಸಂಬಳ ಹೆಚ್ಚಾದರೆ ಇನ್ನೂ ನಾಲ್ಕು ಜನಕ್ಕೆ ನೆರವು ನೀಡಬಹುದು ಎಂಬ ಉದ್ದೇಶವಾಗಿತ್ತು. ಅದೇ ಕಾರಣಕ್ಕೆ ತಾತ್ಕಾಲಿಕ ಉಪನ್ಯಾಸಕನಿಂದ ಖಾಯಂ ಅಧ್ಯಾಪಕನಾದ ನಂತರ ಕೂಡ ರಾಜ್ಯದ ಬೇರೆಬೇರೆ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಮತಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ, ಡಾ.ಜಯಕರ್ ಎಸ್.ಎಂ., ಕನ್ನಡ ವಿಭಾಗದಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳು ಜೆ.ಆರ್.ಎಫ್ ಪಾಸ್ ಆಗುತ್ತಿದ್ದರು. ಬೇರೆ ವಿಭಾಗಗಳಲ್ಲಿ ಅವರ ಸಂಖ್ಯೆ ಬಹಳ ಕಡಿಮೆ ಇತ್ತು. ಯಾಕೆ ಎಂಬ ಸಂಗತಿ ನನಗೆ ಗೊತ್ತಿರಲಿಲ್ಲ. ಅದಕ್ಕೆ ಕಾರಣ ರಾಜಪ್ಪ ದಳವಾಯಿಯವರು ಎಂಬ ಸಂಗತಿ ಈಗ ನನಗೆ ಗೊತ್ತಾಯಿತು ಎಂದರು.
ನಿವೃತ್ತಿಯ ನಂತರ ಕೂಡ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಿಮಗೆ ಕೆಲಸ ಮಾಡಲು ಅವಕಾಶವಿದೆ. ಅದಕ್ಕೆ ನೀವು ಸಹಮತ ವ್ಯಕ್ತಪಡಿಸಿ. ನಮ್ಮೊಂದಿಗೆ ಇನ್ನಷ್ಟು ಕಾಲ ಕೆಲಸ ಮಾಡಿ. ನಿಮ್ಮ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಪ್ರದೀಪ್ ಮಾಲ್ಗುಡಿ, ವಿದ್ಯಾರ್ಥಿಗಳೇ ಸೇರಿ ಡಾ.ರಾಜಪ್ಪ ದಳವಾಯಿಯವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಸಿದ್ದೇವೆ. ಇದಕ್ಕೆ ವಿದ್ಯಾರ್ಥಿಗಳಿಂದಲೇ ಹಣ ಸಂಗ್ರಹಿಸಲಾಗಿದೆ. ಹೀಗೆ ಸಂಗ್ರಹಿಸಲಾದ ಹಣವನ್ನು ಪಾರದರ್ಶಕವಾಗಿ ವಿನಿಯೋಗಿಸಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಟ್ರಸ್ಟ್ ವತಿಯಿಂದ ರಾಜಪ್ಪ ದಳವಾಯಿಯವರ ಹೆಸರಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿರುವ ಗಣ್ಯರಿಗೆ ಬಹುಮಾನವನ್ನು ನೀಡಲಾಗುವುದು. ಈ ಕಾರ್ಯಕ್ರಮಗಳನ್ನು ರಾಜಪ್ಪ ದಳವಾಯಿಯವರು ಕೆಲಸ ನಿರ್ವಹಿಸಿರುವ ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು, ಕಲಬುರ್ಗಿ, ಬೆಳಗಾವಿ, ಕೋಲಾರ, ಶಿವಮೊಗ್ಗ ಮತ್ತು ಇತರೆಡೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಡಾ. ಎ.ಬಿ. ಉಮೇಶ್, ಡಾ.ಸೋಮಶೇಖರ್ ಶಿವಮೊಗ್ಗಿ,, ಡಾ.ಸಿದ್ದಪ್ಪ ಬೆಳಗಟ್ಟ, ಡಾ.ನಾಗಭೂಷಣ, ಡಾ.ಪ್ರದೀಪ್ ಮಾಲ್ಗುಡಿ, ಡಾ.ಕನಕರಾಯ ನಾಯಕ, ಡಾ.ಬಾಳಕೃಷ್ಣ ನಾಯಕ, ಶ್ರೀನಿವಾಸ ಎನ್., ಡಾ.ಲಕ್ಷ್ಮಿ ಕೆ ಮತ್ತು ಪವಿತ್ರ ಅವರು ವಿದ್ಯಾರ್ಥಿಗಳ ಪರವಾಗಿ ಪ್ರಾತಿನಿಧಿಕವಾಗಿ ಮಾತನಾಡಿದರು.
ಎಳೆಯ ವಯಸ್ಸಿನಲ್ಲೇ ಆಕಸ್ಮಿಕವಾಗಿ ಮತ್ತು ಆರೋಗ್ಯ ಸಮಸ್ಯೆಯಿಂದ ನಿಧನ ಹೊಂದಿದ ರಾಜಪ್ಪ ದಳವಾಯಿಯವರ ವಿದ್ಯಾರ್ಥಿಗಳು ಯುವ ವಿದ್ವಾಂಸರಾದ ಶಂಭು, ಡಾ.ಸ್ವಾಮಿ, ಡಾ.ಮಲ್ಲಪ್ಪ ಕುರಿ ಮತ್ತು ಡಾ.ಪ್ರಕಾಶ್ ಬಡವನಹಳ್ಳಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬೆಂಗಳೂರು, ಶಿವಮೊಗ್ಗ, ಮೈಸೂರು, ಕಲಬುರಗಿ, ಬೆಳಗಾವಿ, ಮಂಡ್ಯ, ದಾವಣಗೆರೆ ಮೊದಲಾದ ಜಿಲ್ಲೆಗಳಿಂದ ರಾಜಪ್ಪ ದಳವಾಯಿಯವರ ಶಿಷ್ಯರು ಮತ್ತು ಸ್ನೇಹಿತರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಡಾ.ಸುಂದರ್ ರಾಜ್ ಅರಸ್, ಪ್ರೊ.ವೈ.ಬಿ.ಹಿಮ್ಮಡಿ, ಡಾ.ಕೆ.ಸಿ.ಶಿವಾರೆಡ್ಡಿ, ಡಾ. ಕರೀಗೌಡ ಬಿಚನಹಳ್ಳಿ, ಡಾ.ಬಿ.ಗಂಗಾಧರ್, ಡಾ.ಸಿ.ಪಿ.ನಾಗರಾಜ್, ಡಾ.ಚಿತ್ತಯ್ಯ ಪೂಜಾರ್, ಡಾ. ಹೊನ್ನು ಸಿದ್ಧಾರ್ಥ, ಭಕ್ತರಹಳ್ಳಿ ಕಾಮರಾಜ್, ಬೆಳಗಾವಿ ವಿಶ್ವವಿದ್ಯಾಲಯ ಕುಲಪತಿ ಡಾ. ತ್ಯಾಗರಾಜ್, ಡಾ.ರವಿಕುಮಾರ್ ನೀಹ, ಡಾ.ಸುಮತಿ, ನಳಿನ, ಡಾ.ರುದ್ರೇಶ್ ಅದರಂಗಿ, ಡಾ.ಕೈಲಾಶ್ ಡೋಣಿ, ಡಾ.ವೆಂಕಟೇಶ್ ಮೂರ್ತಿ, ಡಾ.ರಾಜೇಂದ್ರ ಮುದ್ನಾಳ, ಡಾ.ಎಂ.ಜಿ.ಹೆಗಡೆ, ನಟ ಸಂಪತ್ ಮೈತ್ರೇಯ, ಪತ್ರಕರ್ತ ದಿಲಾವರ್ ರಾಮದುರ್ಗ, ಕಲಾವಿದ ಕೃಷ್ಣಾ ರಾಯಚೂರು, ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್, ಪ್ರಕಾಶಕರಾದ ಅವಿರತ ಹರೀಶ್, ರವೀಂದ್ರನಾಥ್ ಸಿರಿವರ, ಸೃಷ್ಟಿ ನಾಗೇಶ್, ಧನಂಜಯ ಜಿ ವಿ, ನಿರ್ದೇಶಕ ವಿಷ್ಣು, ಕನ್ನಡ ಅಧ್ಯಾಪಕರಾದ ಯೋಗೀಶ ಪಿ., ದಾಕ್ಷಾಯಿಣಿ, ರಮೇಶ್ ವಿ, ನಟರಾದ ವಿಶಾಲ್, ಶಿವಕುಮಾರ್, ರಂಗಕರ್ಮಿಗಳಾದ ಶಂಕರಯ್ಯ ಘಂಟಿ, ಗುಂಡಣ್ಣ ಕಲಬುರ್ಗಿ ಮೊದಲಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಡಾ.ಅಖ್ತರ್ ನಿರೂಪಿಸಿದರು.



