ಜೆಎನ್ಯು ವಿದ್ಯಾರ್ಥಿ ಒಕ್ಕೂಟ ಚುನಾವಣೆಯಲ್ಲಿ ಗೆದ್ದುಬೀಗಿದ ಎಡಪಂಥೀಯರು

2 years ago

JNUSU ಚುನಾವಣೆಯಲ್ಲಿ ತನ್ನ ಸಮೀಪದ ಪ್ರತಿಸ್ಪರ್ಧಿ ಸಂಘಪರಿವಾರ ಬೆಂಬಲಿತ ABVP ಯನ್ನು ಸೋಲಿಸಿ ಅಧಿಕಾರ ಸ್ಥಾಪಿಸಿತು.

ಎಡಪಂಥೀಯ ಸಮಿತಿ ಚುನಾವಣೆಯಲ್ಲಿ ಜಯಭೇರಿ ಬಾರಿಸುವುದರೊಂದಿಗೆ, JNU ಎಡ ಭದ್ರಕೋಟೆ ಎಂಬ ಖ್ಯಾತಿಯನ್ನು ಮುಂದುವರೆಸಿದೆ. ಈ ಮೈತ್ರಿಕೂಟ AISA, DSF, SFI AISF ಅನ್ನು ಒಳಗೊಂಡಿದೆ. ಶುಕ್ರವಾರ ನಡೆದ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಕಳೆದ 12 ವರ್ಷಗಳಲ್ಲಿ ಅತಿ ಹೆಚ್ಚು ಶೇಕಡಾ 73 ರಷ್ಟು ಮತದಾನವಾಗಿತ್ತು.

ದೆಹಲಿ: ನಾಲ್ಕು ವರ್ಷಗಳ ಸುದೀರ್ಘ ಬಿಡುವಿನ ನಂತರ ನಡೆದ ಜೆ.ಎನ್.ಯು ವಿದ್ಯಾರ್ಥಿ ಒಕ್ಕೂಟ ಚುನಾವಣೆಯಲ್ಲಿ ಎಬಿವಿಪಿ ನೆಲಕಚ್ಚಿದ್ದು, ಎಡಪಂಥೀಯರು ಮೇಲುಗೈ ಸಾಧಿಸಿದ್ದಾರೆ. ಎಬಿವಿಪಿಯ ಉಮೇಶ್ ಸಿ ಅಜ್ಮೀರಾ ವಿರುದ್ಧ 1,676 ಮತಗಳನ್ನು ಗಳಿಸಿದ ಎ.ಐ.ಎಸ್.ಎಯ ಧನಂಜಯ್ 2,598 ಮತಗಳನ್ನು ಪಡೆಯುವ ಮೂಲಕ ಜೆ ಎನ್ ಯು ಎಸ್ ಯು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಮೂಲಕ ರಾಷ್ಟ್ರ ರಾಜಧಾನಿಯ ಪ್ರಮುಖ ವಿಶ್ವವಿದ್ಯಾಲಯದಲ್ಲಿ ಆಡಳಿತಾರೂಢ ಪಕ್ಷಕ್ಕೆ ಹಿನ್ನಡೆಯಾದಂತಾಗಿದೆ.

ಗೆದ್ದವರ ಸಂಭ್ರಮಾಚರಣೆ

ಜೊತೆಗೆ, ಧನಂಜಯ್ ಅವರ ಆಯ್ಕೆಯ ಮೂಲಕ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟವು (ಜೆಎನ್ಯುಎಸ್ಯು) ಸುಮಾರು ಮೂರು ದಶಕಗಳ ನಂತರ ಎಡ ಬೆಂಬಲಿತ ಗುಂಪುಗಳಿಂದ ತನ್ನ ಮೊದಲ ದಲಿತ ಅಧ್ಯಕ್ಷರನ್ನು ಆಯ್ಕೆ ಮಾಡಿದಂತಾಗಿದೆ. ಧನಂಜಯ್ ಮೂಲತಃ ಬಿಹಾರದ ಗಯಾದವರಾಗಿದ್ದು, 1996-97ರಲ್ಲಿ ಚುನಾಯಿತರಾದ ಬಟ್ಟಿ ಲಾಲ್ ಬೈರ್ವಾ ನಂತರ ಎಡಪಕ್ಷದಿಂದ ಮೊದಲ ದಲಿತ ಅಧ್ಯಕ್ಷರಾಗಿದ್ದಾರೆ.

ಬಲಪಂಥೀಯರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಸುಳ್ಳು ಪೋಸ್ಟರ್

ಗೆಲುವಿನ ಕುರಿತು ಪ್ರತಿಕ್ರಿಯಿಸಿದ ಧನಂಜಯ್, ಈ ಗೆಲುವು ಜೆಎನ್ಯು ವಿದ್ಯಾರ್ಥಿಗಳು ದ್ವೇಷ ಮತ್ತು ಹಿಂಸಾಚಾರದ ರಾಜಕೀಯವನ್ನು ತಿರಸ್ಕರಿಸುವ ಜನಾಭಿಪ್ರಾಯವಾಗಿದೆ. ವಿದ್ಯಾರ್ಥಿಗಳು ಮತ್ತೊಮ್ಮೆ ನಮ್ಮ ಮೇಲೆ ವಿಶ್ವಾಸ ತೋರಿಸಿದ್ದಾರೆ. ನಾವು ಅವರ ಹೋರಾಟ ಮುಂದುವರಿಸುತ್ತೇವೆ. ಹಕ್ಕುಗಳು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಕೆಲಸ ಮಾಡುತ್ತೇವೆ ಎಂದರು.

ಜೆ ಎನ್ ಯು ವಿದ್ಯಾರ್ಥಿ ಸಂಘಟನೆ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಗೆಲುವು ಸಾಧಿಸಿದ ಬಾಪ್ಸದ ಪ್ರಿಯಾಂಶಿ ಆರ್ಯ. ಇವರು ಎಬಿವಿಪಿ ಅಭ್ಯರ್ಥಿಯನ್ನು 926 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಕ್ಯಾಂಪಸ್ನಲ್ಲಿ ಮಹಿಳೆಯರ ಸುರಕ್ಷತೆ, ನಿಧಿ ಕಡಿತ, ವಿದ್ಯಾರ್ಥಿವೇತನ ಹೆಚ್ಚಳ, ಮೂಲಸೌಕರ್ಯ ಮತ್ತು ನೀರಿನ ಬಿಕ್ಕಟ್ಟು ವಿದ್ಯಾರ್ಥಿಗಳ ಒಕ್ಕೂಟದ ಪ್ರಮುಖ ಆದ್ಯತೆಗಳಲ್ಲಿ ಸೇರಿವೆ ಎಂದರು.

ಲಾಲ್ ಸಲಾಂ ಮತ್ತು ಜೈ ಭೀಮ್ ಘೋಷಣೆಗಳ ನಡುವೆ ವಿಜೇತ ವಿದ್ಯಾರ್ಥಿಗಳನ್ನು ಬೆಂಬಲಿಗರು ಅಭಿನಂದಿಸಿದರು. ಅಭ್ಯರ್ಥಿಗಳ ಗೆಲುವಿಗಾಗಿ ವಿದ್ಯಾರ್ಥಿಗಳು ಕೆಂಪು, ಬಿಳಿ ಮತ್ತು ನೀಲಿ ಬಾವುಟಗಳನ್ನು ಬೀಸುವ ಮೂಲಕ ಸಂತಸ ವ್ಯಕ್ತಪಡಿಸಿದರು.

ಎಸ್.ಎಫ್.ಐ ನ ಅವಿಜಿತ್ ಘೋಷ್ ಅವರು ಎಬಿವಿಪಿಯ ದೀಪಿಕಾ ಶರ್ಮಾ ಅವರನ್ನು 927 ಮತಗಳಿಂದ ಸೋಲಿಸಿ ಉಪಾಧ್ಯಕ್ಷ ಸ್ಥಾನಕ್ಕೇರಿದರು. ಶರ್ಮಾ 1,482 ಮತಗಳನ್ನು ಗಳಿಸಿದರೆ, ಘೋಷ್ 2,409 ಮತಗಳನ್ನು ಪಡೆಯುವ ಮೂಲಕ ಪಾರಮ್ಯ ಮೆರೆದರು.

ಎಡಪಕ್ಷಗಳ ಬೆಂಬಲಿತ ಬಿರ್ಸಾ ಅಂಬೇಡ್ಕರ್ ಫುಲೆ ವಿದ್ಯಾರ್ಥಿಗಳ ಸಂಘದ (ಬಾಪ್ಸಾ) ಅಭ್ಯರ್ಥಿ ಪ್ರಿಯಾಂಶಿ ಆರ್ಯ ಅವರು ಎಬಿವಿಪಿಯ ಅರ್ಜುನ್ ಆನಂದ್ ಅವರನ್ನು 926 ಮತಗಳಿಂದ ಸೋಲಿಸುವ ಮೂಲಕ ಪ್ರಧಾನ ಕಾರ್ಯದರ್ಶಿ ಸ್ಥಾನ ಅಲಂಕರಿಸಿದರು. ಆರ್ಯ 2,887 ಮತಗಳನ್ನು ಪಡೆದರೆ, ಆನಂದ್ 1961 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು.

ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎಡಪಕ್ಷಗಳ ಮೊಹಮ್ಮದ್ ಸಾಜಿದ್, ಎಬಿವಿಪಿಯ ಗೋವಿಂದ ಡಾಂಗಿ ಅವರನ್ನು 508 ಮತಗಳಿಂದ ಸೋಲಿಸಿದರು. ನಾಲ್ಕು ವಿಜೇತರ ಪೈಕಿ ಅತ್ಯಂತ ಕಡಿಮೆ ಅಂತರದ ಗೆಲುವು ಇವರದಾಗಿದೆ.

Leave a Reply