ಗದಗ: ಕೌಟುಂಬಿಕ ಕಲಹಕ್ಕೆ ಒಂದೇ ಕುಟುಂಬದ ಮೂವರು ಬಲಿಯಾಗಿರುವ ದಾರುಣ ಘಟನೆ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ.
ಗೋನಾಳ ಗ್ರಾಮದ ರೇಣುಕಾ ತೇಲಿ (49), ಮಂಜುನಾಥ್ (22), ಸಾವಕ್ಕ ತೇಲಿ (47) ಮೃತಪಟ್ಟವರು. ಸಾಲದ ವಿಷಯಕ್ಕೆ ಮನಸ್ತಾಪ ಉಂಟಾಗಿ ಮನನೊಂದ ರೇಣುಕಾ ತೇಲಿ ರೈಲು ಹಳಿಗೆ ತಲೆಕೊಟ್ಟು ಬಲಿಯಾದರು. ತಾಯಿಯನ್ನು ಹಿಂಬಾಲಿಸಿ ಬಂದಿದ್ದ ಮಂಜುನಾಥ್ ತಾಯಿಯನ್ನು ಕಾಪಾಡಲು ಹೋಗಿ ಹಳಿಗೆ ಬಿದ್ದಿದ್ದರು. ಈ ವೇಳೆ ವೇಗವಾಗಿ ಬಂದ ರೈಲು ಇವರಿಬ್ಬರ ಪ್ರಾಣ ತೆಗೆದಿದೆ.
ಅಕ್ಕ ರೇಣುಕಾಳ ಸಾವಿನ ವಿಷಯ ತಿಳಿದು ಸಾವಕ್ಕ ತೇಲಿ (47) ಎಂಬುವವರು ಹಾವೇರಿ ಜಿಲ್ಲೆಯ ಎಲವಿಗಿಯಲ್ಲಿ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾರೆ. ಒಂದೇ ಕುಟುಂಬದ ಮೂವರನ್ನು ಕಳೆದುಕೊಂಡು ಕುಟುಂಬಸ್ಥರು ಕಂಗಲಾಗಿದ್ದಾರೆ.
ಸಾವಕ್ಕ, ರೇಣುಕಾ ಮಧ್ಯೆ ಟ್ರ್ಯಾಕ್ಟರ್ ಸಾಲ ಕಟ್ಟುವ ವಿಷಯವಾಗಿ ಜಗಳವಾಡಿಕೊಂಡಿದ್ದರು. ಬ್ಯಾಂಕ್ನಿಂದ 4 ಲಕ್ಷ ರೂ. ಸಾಲ ಪಡೆದು ಟ್ರ್ಯಾಕ್ಟರ್ ಖರೀದಿ ಮಾಡಿದ್ದರು. ಟ್ರ್ಯಾಕ್ಟರ್ ಕಂತು ವಿಚಾರ ಕೂಡು ಕುಟುಂಬದಲ್ಲಿ ಗಲಾಟೆಗೆ ಕಾರಣವಾಗಿತ್ತು ಎನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.




