ಬೆಳಗಾವಿ: ಸ್ಯಾಂಡಲ್ವುಡ್ ನಲ್ಲಿ ಸದ್ದು ಮಾಡುತ್ತಿರುವ ಇನಾಮ್ದಾರ್ ಚಿತ್ರ ಇದೀಗ ಸವದತ್ತಿ ಎಲ್ಲಮ್ಮ ಗುಡ್ಡದಲ್ಲಿ ನಟ ರಂಜಿನ್ ಛತ್ರಪತಿ, ನಿರ್ದೇಶಕ ಸಂದೇಶ ಶೆಟ್ಟಿ ಹಾಗೂ ನಿರ್ಮಾಪಕ ನಿರಂಜನ್ ಶೆಟ್ಟಿ ತಲ್ಲೂರು ಸೇರಿದಂತೆ ಚಿತ್ರತಂಡದ 45 ಜನ ಉರುಳು ಸೇವೆ ಮಾಡುವುದರ ಮೂಲಕ ಚಿತ್ರದ ಯಶಸ್ವಿಗೆ ಶ್ರೀ ದೇವರ ಮೊರೆ ಹೋಗಿದ್ದಾರೆ.

ಮೂಲತಃ ಉತ್ತರ ಕರ್ನಾಟಕದ ಗಟ್ಟಿ ನೆಲದ ಯುವಕ ರಂಜನ್ ಚತ್ರಪತಿ ಮೊದಲ ಬಾರಿಗೆ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಉತ್ತರ ಕರ್ನಾಟಕದ ಸವದತ್ತಿಯ ಶಕ್ತಿ ಕೇಂದ್ರವಾದ ಸವದತ್ತಿ ಎಲ್ಲಮ್ಮ ಗುಡ್ಡದಲ್ಲಿ ಉರುಳು ಸೇವೆ ಮಾಡಿ ಸಿನಿಮಾದ ಬಿಡುಗಡೆ ದಿನಾಂಕವನ್ನು ನಿರ್ಧಾರ ಮಾಡಲು ಇನಾಮ್ದಾರ್ ಚಿತ್ರತಂಡ ನಿರ್ಧರಿಸಿದೆ.

ಬೆಳಗಾವಿಯಲ್ಲಿ ಅಕ್ಟೋಬರ್ 15ರಂದು ಅದ್ದೂರಿ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಚಿತ್ರತಂಡ ಬೆಂಗಳೂರಿನಲ್ಲಿ ಅಕ್ಟೋಬರ್ ಆರನೇ ತಾರೀಕು ಪಂಚಭಾಷೆಯಲ್ಲಿ ಟ್ರೈಲರ್ ಬಿರುಡುಗಳಿಗೆ ಸಿದ್ಧತೆಯನ್ನು ನಡೆಸಿಕೊಂಡಿದೆ. ಇನ್ನೇನು ಕೆಲವೇ ದಿನದಲ್ಲಿ ಚಿತ್ರ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಿಸಲಿದೆ.

ಒಟ್ಟಾರೆಯಾಗಿ ಶಕ್ತಿ ದೇವತೆಯ ಆಶೀರ್ವಾದ ಪಡೆದ ಇನಾಮ್ದಾರ್ ಚಿತ್ರತಂಡ ಇದೀಗ ತಮ್ಮ ಎಲ್ಲಾ ಪ್ರಮೋಷನ್ ಆಕ್ಟಿವಿಟೀಸ್ ಅನ್ನು ಉತ್ತರ ಕರ್ನಾಟಕದ ನೆಲದಿಂದಲೇ ಪ್ರಾರಂಭ ಮಾಡಿದೆ.

ಕುಂತಿ ಅಮ್ಮ ಪ್ರೊಡಕ್ಷನ್ ಹಾಗೂ ತಸ್ಮಯ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದ ಈ ಸಿನಿಮಾಕ್ಕೆ ನಿರಂಜನ್ ಶೆಟ್ಟಿ ತಲ್ಲೂರ್ ಬಂಡವಾಳ ಹೂಡಿದ್ದಾರೆ.

ರಂಜನ್ ಚಿತ್ರಪತಿ ಖಡಕ್ ಲುಕ್ ನಲ್ಲಿ ಇನಾಮ್ದಾರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಒಟ್ಟಾರೆಯಾಗಿ ವಿಭಿನ್ನ ವಸ್ತು ಉಳ್ಳ ಈ ಸಿನಿಮಾ ಆಯಾ ಪ್ರಾದೇಶಿಕ ಭಾಷೆಯನ್ನು ಒಳಗೊಂಡು ವಿಭಿನ್ನವಾದ ಶೈಲಿಯಲ್ಲಿ ಮೂಡಿಬಂದಿದೆ ಎಂದು ನಿರ್ದೇಶಕ ಸಂದೇಶ ಶೆಟ್ಟಿ ಹೇಳಿದ್ದಾರೆ.

ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಅವಿನಾಶ್, ಥ್ರಿಲ್ಲರ್ ಮಂಜು, ಎಸ್ತಾರ್ ನೆರೋನಾ ಪ್ರಶಾಂತ್ ಸಿದ್ದಿ, ಸಂಜು ಬಸಯ್ಯ, ಮಹಾಬಲೇಶ್ವರ ಭಟ್, ಯಶ್ ಆಚಾರ್ಯ, ಕರಣ್ ಕುಂದರ್, ರಘು ಪಾಂಡೇಶ್ವರ್, ಎಂಕೆ ಮಠ ಬಣ್ಣ ಹಚ್ಚಿದ್ದಾರೆ.




