ಮೇಕೆದಾಟು ವಿಚಾರದಲ್ಲಿ ಬಿಜೆಪಿಗರು ಸುಳ್ಳು ಹೇಳುತ್ತಿದ್ದಾರೆಯೇ?: ಎಚ್.ಡಿ.ಕೆ

5 years ago

ಬೆಂಗಳೂರು: ‘ಮೇಕೆದಾಟು ಯೋಜನೆ ಆರಂಭವಾಗದು’ ಎಂದು ಪ್ರಧಾನಿ, ಜಲಶಕ್ತಿ ಸಚಿವ ಭರವಸೆ ಕೊಟ್ಟಿರುವುದಾಗಿ ತಮಿಳುನಾಡು ಸಿಎಂ @mkstalin ಹೇಳಿದ್ದಾರೆ. ಹಾಗಿದ್ದರೆ, ಯೋಜನೆ ವಿಚಾರದಲ್ಲಿ ಕೇಂದ್ರವು ಕರ್ನಾಟಕಕ್ಕೆ ಅಭಯ ನೀಡಿದೆ ಎಂಬ ಸಿಎಂ, ಬಿಜೆಪಿ ನಾಯಕರ ಹೇಳಿಕೆಗಳು ಸುಳ್ಳೇ? ಕೇಂದ್ರ–ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಆಗುವ ಲಾಭ ಇದೇನಾ ?  ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮೇಕೆದಾಟು ವಿಚಾರದಲ್ಲಿ ರಾಜ್ಯ ಸರ್ಕಾರ ಬಿಜೆಪಿ ಹೈಕಮಾಂಡ್‌ ಹೇಳಿದಂತೆ ಕೇಳುತ್ತಿದೆ. ಬಿಜೆಪಿ ಯೋಜನೆಯ ವಿರುದ್ಧವಿದೆ. ಯೋಜನೆ ತಡೆಯಲು  ತಮಿಳುನಾಡು ನಡೆಸುತ್ತಿರುವ ಸಾಂಘಿಕ ಹೋರಾಟದಂತೆ, ಯೋಜನೆ ಜಾರಿಗೆ ರಾಜ್ಯ ಸರ್ಕಾರ ಕಾರ್ಯತಂತ್ರ ರೂಪಿಸುತ್ತಿಲ್ಲ. ಆದರೆ, ‘ಯೋಜನೆ ಜಾರಿ ಶತಸಿದ್ಧ’ ಎನ್ನುವ ಮೂಲಕ ಕನ್ನಡಿಗರ ಮೂಗಿಗೆ ತುಪ್ಪ ಸವರುತ್ತಿದೆ ಎಂದು ಅವರು ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮೇಕೆದಾಟಿನ ಡ್ಯಾಂನಿಂದ ತಮಿಳುನಾಡಿಗೆ ಯಾವ ನಷ್ಟವೂ ಇಲ್ಲ. ಆದರೂ ಡ್ಯಾಂ ನಿರ್ಮಾಣ ಆಗದಂತೆ ತಡೆಯಲು ಶತಪ್ರಯತ್ನ ಮಾಡುತ್ತಿದೆ. ಸರ್ವಪಕ್ಷ ಸಭೆ ಮಾಡಿ ಮುಂದಿನ ಕಾರ್ಯತಂತ್ರ ರೂಪಿಸಿದೆ, ಪ್ರಧಾನಿ, ಸಚಿವರ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ದು ಒತ್ತಡ ಹಾಕಿದೆ. ಆದರೆ, ಯೋಜನೆಯಿಂದ ಅನುಕೂಲ ಪಡೆಯಲಿರುವ ರಾಜ್ಯ ಸರ್ಕಾರ ಈವರೆಗೆ ಏನೇನು ಮಾಡಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಹೆಚ್ಚುವರಿ ನೀರಿನ ಮೇಲೆ ಕಣ್ಣಿಟ್ಟು ತಮಿಳುನಾಡು 6 ತಿಂಗಳ ಹಿಂದೆ ನದಿ ಜೋಡಣೆ ಆರಂಭಿಸಿತು. ತಮಿಳುನಾಡಿನ ಈ ಯೋಜನೆ ವಿರುದ್ಧ ಕರ್ನಾಟಕ ಆಕ್ಷೇಪಣೆ ಸಲ್ಲಿಸಿದ್ದು ಮಾತ್ರ ನೆನ್ನೆ. ಈ ಹೆಚ್ಚುವರಿ ನೀರು ಈಗ ಡ್ಯಾಂ ನಿರ್ಮಾಣಕ್ಕೆ ತೊಡಕಾಗಿದೆ. ಇದರ ಆಧಾರದಲ್ಲಿ ರೂಪಿತವಾದ ನದಿ ಜೋಡಣೆ ಯೋಜನೆಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ವಿಳಂಬ ಮಾಡಿತ್ತು ಎಂದಿದ್ದಾರೆ.

ಮೇಕೆದಾಟು ಯೋಜನೆ ವಿಚಾರದಲ್ಲಿ ಸರ್ಕಾರ ತನ್ನಿಷ್ಟದಂತೆ ನಡೆದುಕೊಳ್ಳುವುದನ್ನು ಬಿಟ್ಟು ಎಲ್ಲರ ಅಭಿಪ್ರಾಯ ಸಂಗ್ರಹಿಸಲಿ. ಕಗ್ಗಂಟಾಗುತ್ತಿರುವ ಈ ಯೋಜನೆಯನ್ನು ದಕ್ಕಿಸಿಕೊಳ್ಳಲು ಸಾಂಘಿಕವಾಗಿ ಹೋರಾಡಬೇಕು. ಇಲ್ಲವಾದರೆ ಕಾವೇರಿ ನೀರಿನ ವ್ಯಾಜ್ಯದಂತೇ, ಮೇಕೆದಾಟಿನಲ್ಲಿ ಡ್ಯಾಂ ನಿರ್ಮಾಣ ಮಾಡುವುದೂ ಒಂದು ವ್ಯಾಜ್ಯವಾಗಿ ಉಳಿದು ಹೋಗಲಿದೆ ಎಂದಿದ್ದಾರೆ.

ರಾಜ್ಯದ ಜನರು ಗಮನಿಸಬೇಕಾದ ಒಂದು ಸಂಗತಿ ಇದೆ. ದಶಕಗಳಿಂದಲೂ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಅನುಮೋದನೆ ಸಿಕ್ಕಿದ್ದು ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ. ರಾಷ್ಟ್ರೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಅಲ್ಲ. ಅನುಮೋದನೆ ಸಿಕ್ಕ ಯೋಜನೆಗೆ ವಿವಿಧ ಇಲಾಖೆಗಳ ಅನುಮತಿ ಬೇಕು. ರಾಷ್ಟ್ರೀಯ ಪಕ್ಷವಿದ್ದರೂ ಅನುಮತಿ ಸಿಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಅಧಿಕಾರದಲ್ಲಿರುವ ಬಿಜೆಪಿಗೆ ತಮಿಳುನಾಡಿನಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳುವ ತವಕ. ಹೀಗಾಗಿ ಬಿಜೆಪಿ ತಮಿಳುನಾಡಿನ ಹಿತಾಸಕ್ತಿ ಕಾಯುತ್ತಿದೆ. ಯೋಜನೆ ತಡೆಯುವ ಪ್ರಯತ್ನದ ವಿರುದ್ಧ ಹೋರಾಡಬೇಕಿದ್ದ ಕಾಂಗ್ರೆಸ್‌ ತಮಿಳುನಾಡು ಸರ್ಕಾರದ ಪಾಲುದಾರ ಪಕ್ಷ. ಹೀಗಾಗಿ ಜೆಡಿಎಸ್‌ ಒಂದೇ ಈಗ ಮೇಕೆದಾಟು ಯೋಜನೆಗೆ ಪರಿಹಾರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Leave a Reply