ಬೆಂಗಳೂರು: ಕಮ್ಯೂನಿಸ್ಟ್ ಸಂಘಟನೆಗಳ ವಿಘಟನೆ, ವಿಭಜನೆಯ ಕುರಿತು ನೊಂದು ಮಾತನಾಡುತ್ತಿದ್ದ ಪ್ರಗತಿಪರ, ಜಾತ್ಯತೀತ ಹಾಗೂ ಜನಪರ ಸ್ನೇಹಿತರಿಗೆ ಸಂತೋಷ ಹಾಗೂ ಭರವಸೆದಾಯಕ ಸುದ್ದಿಯನ್ನು ತಿಳಿಸಲು ಬಯಸುತ್ತೇವೆ ಎಂದು CPIML ಪ್ರಜಾಪಂಥದ ಪ್ರಧಾನ ಕಾರ್ಯದರ್ಶಿ ಪಿ.ರಂಗರಾವ್, PCC-CPIML ಪ್ರಧಾನ ಕಾರ್ಯದರ್ಶಿ ಸುಭಾಷ ದೇವ, CPIML RI ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಿಂಗ್ ಠಾಕೂರ ಮತ್ತು CPIML RI ರಾಜ್ಯ ಕಾರ್ಯದರ್ಶಿ ಕರ್ನಾಟಕ ಡಿ.ಹೆಚ್.ಪೂಜಾರ ಜಂಟಿ ಹೇಳಿಕೆ ನೀಡಿದ್ದಾರೆ.
CPI (ML) ಪ್ರಜಾಪಂಥ, PCC-CPI(ML) ಮತ್ತು CPI (ML) RI ಮೂರು ಸಂಘಟನೆಗಳ ಜಂಟಿ ಸಭೆ ಕಳೆದ ವಾರ ಹೈದರಾಬಾದ್ನಲ್ಲಿ ಜರುಗಿತು. ಭಾರತದ ಕಮ್ಯೂನಿಸ್ಟ್ ಕ್ರಾಂತಿಕಾರಿ ಗುಂಪುಗಳ ಜಂಟಿ ಸಭೆಯಲ್ಲಿ ಒಂದೇ ಕಮ್ಯೂನಿಸ್ಟ್ ಪಕ್ಷವಾಗಿ ವಿಲೀನಗೊಳ್ಳಲು ನಿರ್ಧರಿಸಿತು.
ಭಾರತದ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸಿ ಈ ಕೆಳಗಿನಂತೆ ತೀರ್ಮಾನಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಕೋಮುವಾದಿ ಪ್ಯಾಸಿಸ್ಟ್ ಶಕ್ತಿಗಳ ಜನ ವಿರೋಧಿ, ದೇಶ ವಿರೋಧಿ ಅಜೆಂಡಗಳನ್ನು ಬಯಲಿಗೆಳೆಯಲು ಮತ್ತು ಒಗ್ಗೂಡಿ ಹೋರಾಡಲು ನಾವು ಎಲ್ಲಾ ಕ್ರಾಂತಿಕಾರಿ, ಪ್ರಜಾಸತ್ತಾತ್ಮಕ ಮತ್ತು ಜಾತ್ಯಾತೀತ ಶಕ್ತಿಗಳಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ I.N.D.I.A ಯ ಹೊರಹೊಮ್ಮುವಿಕೆಯು ಆಶಾದಾಯಕ ಬೆಳವಣಿಗೆಯಾಗಿದೆ. ಈ ನಿರ್ಣಾಯಕ ಘಟ್ಟದಲ್ಲಿ ಫ್ಯಾಸಿಸ್ಟ್-ಕೋಮುವಾದಿ ಬಿಜೆಪಿ-ಸಂಘ ಪರಿವಾರದ ವಿರುದ್ಧ ಹೋರಾಡಲು ಭಾರತದ ವಿರೋಧ ಪಕ್ಷಗಳ ರಾಜಕೀಯ ವಿಶಾಲ ಮೈತ್ರಿಯಾಗಿ ಹೊರ ಹೊಮ್ಮಿರುವುದನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.
2024 ರ ಚುನಾವಣೆಯಲ್ಲಿ ಫ್ಯಾಸಿಸ್ಟ್-ಕೋಮುವಾದಿಗಳ ವಿರುದ್ಧ ದಂಗೆ ಏಳಲು ನಾವು ಭಾರತದ ಜನರಿಗೆ ಕರೆ ನೀಡುತ್ತೇವೆ. I.N.D.I.A ಈ ರಾಜಕೀಯ ಮೈತ್ರಿಯು ಕೇವಲ ಚುನಾವಣಾ ಕೇಂದ್ರಿತವಾಗಬಾರದು ಎಂದು ನಾವು ಬಯಸುತ್ತೇವೆ, ಬದಲಿಗೆ ಜನರ ಮೂಲಭೂತ ಹಕ್ಕುಗಳು ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳ ಪರಿಹಾರದ ಆಧಾರದ ಮೇಲೆ ಸಾಗಬೇಕೆಂದು ಆಶಿಸುತ್ತೇವೆ ಎಂದಿದ್ದಾರೆ.
ಆದರೆ ನಮ್ಮ ಐಕ್ಯತೆಯ ಆಂದೋಲನವು 2024ರ ಚುನಾವಣೆ ಮತ್ತು ನಂತರವೂ ತೀವ್ರಗೊಳ್ಳುತ್ತದೆ ಮತ್ತು ಮುಂದುವರಿಯುತ್ತದೆ. ಸಂಸತ್ತಿನ ಹೊರತಾಗಿ, ದೇಶಾದ್ಯಂತ ಜನಾಂದೋಲನವನ್ನು ಪ್ರಾರಂಭಿಸಲು ಅಂತಿಮವಾಗಿ ಆಳುವ ವ್ಯವಸ್ಥೆಗೆ ಸವಾಲೊಡ್ಡುತ್ತದೆ.
ಮಣಿಪುರದಲ್ಲಿ ನಡೆದಿರುವ ಮಾನವ ವಿರೋಧಿ ಕೃತ್ಯಗಳ ಮತ್ತು ಜನಾಂಗೀಯ ರಾಜಕೀಯ ದಾಳಿಯನ್ನು ನಾವು ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ನಮ್ಮ ಸಂಘಟನೆಗಳು ಅಲ್ಲಿನ ಎಲ್ಲಾ ಧರ್ಮಗಳ ಶೋಷಿತ ಜನರ ಹಾಗೂ ಪ್ರಜಾತಂತ್ರವಾದಿಗಳ ಬಗ್ಗೆ ಆಳವಾದ ಕಾಳಜಿಯನ್ನು ಹೊಂದಿವೆ. ಮಣಿಪುರದಲ್ಲಿ ನಡೆದಿರುವ ಭೀಕರ ಹತ್ಯಾಕಾಂಡಗಳು, ಅತ್ಯಾಚಾರಗಳು ಮತ್ತು ಮಹಿಳೆಯರ ಬೆತ್ತಲೆ ಮೆರವಣಿಗೆಗಳು, ಕೇಂದ್ರ ಮತ್ತು ಮಣಿಪುರ ರಾಜ್ಯ ಸರ್ಕಾರದ ಧೋರಣೆಗಳನ್ನು ಅನಾವರಣಗೊಳಿವೆ ಎಂದಿದ್ದಾರೆ.
ಮೈತೇಯಿ ಜನಾಂಗೀಯ ಹಿಂಸಾಚಾರ, “ಹಿಂದುತ್ವ ಕೋಮುವಾದಿ ಸಿದ್ಧಾಂತದ ಪ್ರಾಯೋಜಿತ ಭಯೋತ್ಪಾದನೆಯ ಅಪಾಯವನ್ನು ಬಿಚ್ಚಿಟ್ಟಿದೆ. ಕ್ರಿಶ್ಚಿಯನ್ ಕುಕಿ ಬುಡಕಟ್ಟು ಜನಾಂಗೀಯ ಶುದ್ಧೀಕರಣದ ನೆಪವು ಕಾರ್ಪೋರೇಟ್ ಕಂಪನಿಗಳ ಗುಪ್ತ ಅಜೆಂಡಾವಾಗಿದೆ. ಕುಕಿ ಬುಡಕಟ್ಟು ಜನಾಂಗದವರ ಮಾಲಿಕತ್ವದಲ್ಲಿರುವ ಭೂಮಿಯನ್ನು ಕಿತ್ತುಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರ ಇತ್ತೀಚಿಗೆ ಕಾಯ್ದೆಗೆ ತಿದ್ದುಪಡಿ ತಂದಿದೆ. ಮೈತೇಯಿ ಜನಾಂಗ ವ್ಯಾಪಾರ ವ್ಯವಹಾರ ಮತ್ತು ರಾಜಕೀಯದಲ್ಲಿ ಬಲಿಷ್ಠವಾಗಿದೆ. ಬುಡಕಟ್ಟು ಕುಕಿ ಜನಾಂಗದ ಭೂಮಿಯನ್ನು ಖರೀದಿಸಲು ಈ ಹಿಂದಿನ ಕಾಯ್ದೆಯಲ್ಲಿ ಅವಕಾಶ ಇರಲಿಲ್ಲ. ಮೈತೇಯಿ ಜನಾಂಗದ ಮೂಲಕ ಕುಕಿ ಜನಾಂಗವನ್ನು ಬಗ್ಗು ಬಡೆಯುವ ಉದ್ದೇಶದ, ಹಿಂದೆ ಕಾರ್ಪೋರೇಟ್ ಕಂಪನಿಗಳ ಗುಪ್ತ ಅಜೆಂಡಾಗಳು ಮರೆ ಮಾಚಿವೆ ಎಂದು ಹೇಳಿದ್ದಾರೆ.
ಅದಾನಿಯವರ 66,000 ಎಕರೆ (ಕುಕಿ ಬುಡಕಟ್ಟು ಜನರ ಪ್ರದೇಶ) ತಾಳೆ ಎಣ್ಣೆ ಕೃಷಿ ಮತ್ತು ತೈಲ ಮತ್ತು ನೈಸರ್ಗಿಕ ಅನಿಲ, ಪ್ಲುಟೋನಿಯಂ (ಮತ್ತು ಬಹುಶಃ ಯುರೇನಿಯಂ) ದ ಹಿತಾಸಕ್ತಿಗಳಿಂದ ಕೂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇಂತಹ ಯೋಜನೆಗಳಿಗೆ ಅಧ್ಯಕ್ಷತೆ ವಹಿಸುತ್ತದೆ ಎಂದು ದೇಶದ ಜನರು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಕಾರ್ಪೊರೇಟ್ ಕೋಮುವಾದಿಗಳನ್ನು ಸೋಲಿಸೋಣ ದೇಶದ ಬಹುಸಂಖ್ಯಾತ ಜನರ ಎಲ್ಲಾ ಹಕ್ಕುಗಳನ್ನು ರಕ್ಷಿಸೋಣ ಎಂದು ಕರೆನೀಡಿದ್ದಾರೆ.
