ಬೆಂಗಳೂರು: ಕಬ್ಬನ್ ಉದ್ಯಾನವನ ಎನ್.ಜಿ.ಓ. ಸಭಾಂಗಣದಲ್ಲಿ ಯುವಚೇತನ ಯುವಜನ ಕೇಂದ್ರದ ವತಿಯಿಂದ ಸ್ವಾಮಿ ವಿವೇಕನಂದರ 160ನೇ ಜಯಂತ್ಯೋತ್ಸವದ ಪ್ರಯುಕ್ತ ಸ್ವಾಮಿ ವಿವೇಕಾನಂದ ಸಮಾಜ ಪರಿವರ್ತನಾ ಸೇವಾ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು.
ನೆಹರೂ ಯುವ ಕೇಂದ್ರ ಪ್ರಾದೇಶಿಕ ನಿರ್ದೇಶಕ ನಟರಾಜ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಂದಿದುರ್ಗ ಬಾಲುಗೌಡರು, ಪ್ರಧಾನ ಕಾರ್ಯದರ್ಶಿ ಕಾಡಿನ ಮಿತ್ರ ನಿಸರ್ಗ, ವೃತ್ತ ನಿರೀಕ್ಷಕ ಪಿ.ಎಸ್.ಐ.ಬಸವರಾಜ್ ಉದ್ಘಾಟನೆ ಮಾಡಿದರು. ಸಮಾಜದ ಅಭಿವೃದ್ದಿಗೆ ಶ್ರಮಿಸಿದ ಗಣ್ಯ ಮಹನೀಯರುಗಳಿಗೆ ಸ್ವಾಮಿ ವಿವೇಕಾನಂದ ಸಮಾಜ ಪರಿವರ್ತನಾ ಸೇವಾ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪ್ರಾದೇಶಿಕ ನಿರ್ದೇಶಕ ನಟರಾಜ್ ಮಾತನಾಡಿ, ಸ್ವಾಮಿ ವಿವೇಕಾನಂದರು ತತ್ವಗಳು ಇಂದು ಮುಖ್ಯವಾಗಿದೆ. ಸ್ವಾತಂತ್ರ್ಯ ಬಂದ 75 ವರ್ಷಗಳ ಅಮೃತ ಮಹೋತ್ಸವ ಆಚರಿಸುತ್ತಿದೆ. ದೇಶದ ಜನಸಂಖ್ಯೆ 135 ಕೋಟಿಯಾಗಿದೆ. ಅಗಾಧ ಯುವ ಶಕ್ತಿ ಇದೆ. 15 ವರ್ಷದಿಂದ 29 ವರ್ಷದ ಒಳಗಿರುವ ಯುವಕ, ಯುವತಿಯರ ಜನಸಂಖ್ಯೆ 45ಕೋಟಿ ಇದೆ. ಇಡಿ ವಿಶ್ವದಲ್ಲಿ ಅತ್ಯಂತ ಹೆಚ್ಚು ಯುವ ಸಮೂಹ ಇರುವ ದೇಶ ಭಾರತ ಎಂದರು.
ಅಗಾಧವಾದ ಯುವ ಶಕ್ತಿ ಸಮರ್ಪಕವಾಗಿ ದೇಶದ ಅಭಿವೃದ್ದಿಗೆ ಬಳಸಿಕೊಂಡರೆ ದೇಶ ಅಭಿವೃದ್ದಿ ಸಾಧ್ಯ. ಸಮಾಜದಲ್ಲಿ ಲಿಂಗತಾರತಮ್ಯ ಹೋಗಲಾಡಿಸಬೇಕು. ಯುವ ಸಮೂಹ ನಗರ ಪ್ರದೇಶಗಳಿಗೆ ಬರುತ್ತಿದ್ದಾರೆ, ಗ್ರಾಮೀಣ ಭಾಗದಲ್ಲಿ ಯುವಕರ ಸಂಖ್ಯೆ ಕಡಿಮೆ ಇದೆ. ಕೃಷಿ ಕ್ಷೇತ್ರ ಆಧುನಿಕತೆ ಆಳವಡಿಸಿಕೊಂಡು, ತಂತ್ರಜ್ಞಾನ ಮೂಲಕ ಉತ್ತಮ ಲಾಭದಾಯಕ ಕೃಷಿ ಉದ್ಯಮವಾಗಿದೆ. ಕೃಷಿ ಉದ್ಯಮದಲ್ಲಿ ಇಂದಿನ ಯುವ ಸಮೂಹ ತೊಡಗಬೇಕು ಎಂದು ಕರೆ ನೀಡಿದರು.
ಪೊಲೀಸ್ ಅಧಿಕಾರಿ ಬಸವರಾಜ್ ಮಾತನಾಡಿ, ಇಂದು ಯುವ ಸಮುದಾಯಕ್ಕೆ ಸರಿಯಾದ ಮಾರ್ಗದರ್ಶನದಲ್ಲಿ ಸಿಗುತ್ತಿಲ್ಲ. ಸ್ವಾಮಿ ವಿವೇಕಾನಂದರ ಆದರ್ಶ ಸಿದ್ದಾಂತಗಳನ್ನು ಇಂದಿನ ಯುವಕರು ಸಾಗಬೇಕು . ಚಿಕಾಗೋಗೆ ಹೋಗಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ಇಡಿ ವಿಶ್ವವೆ ಭಾರತದ ಕಡೆ ನೋಡುವಂತೆ ಮಾಡಿದರು. ವಿವೇಕಾನಂದರ ಸ್ಪೂರ್ತಿಯ ಚಿಲುಮೆ, ಭಾರತ ದೇಶ ವಿಶ್ವಗುರುವಾಗಿ ಹೊರಹೊಮ್ಮಬೇಕು ಕನಸು ಕಂಡಿದ್ದರು. ಭಾರತ ದೇಶ ಅರ್ಥ ಮಾಡಿಕೊಳ್ಳಬೇಕು ಎಂದರೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು ರವೀಂದ್ರನಾಥಠಾಗೋರ್ ರವರು ಹೇಳಿದ್ದರು. ಸಮಾಜದಲ್ಲಿ ಉತ್ತಮ ಪ್ರಜೆಯಾಗಿ,
ದೇಶಭಿಮಾನಿಯಾಗಿ ಬದುಕಬೇಕು ಎಂದರು.
ನಂದಿದುರ್ಗದ ಬಾಲುಗೌಡರವರು ಮಾತನಾಡಿ, 160 ವರ್ಷವಾದರು ಸ್ವಾಮಿ ವಿವೇಕಾನಂದರ ಹೆಸರು ಇನ್ನು ಭಾರತೀಯ ಹೃದಯದಲ್ಲಿ ನೆಲಸಿದ್ದಾರೆ. ಸ್ವಾಮಿ ವಿವೇಕಾನಂದರು ದೇಶದ ಸ್ವಾಭಿಮಾನ ಪೇತಿಕರಾಗಿದ್ದಾರೆ. ಸಮಾಜ ಬದಲಾವಣೆಯಾಗಬೇಕಾದರೆ ಪ್ರತಿಯೊಬ್ಬರು ಸ್ವಾಮಿ ವಿವೇಕಾನಂದರ ಸಿದ್ದಾಂತವನ್ನು ಆಳವಡಿಕೊಳ್ಳಬೇಕು. ಪರಿಸರ, ಸ್ವಚ್ಛತೆ ಮುಖ್ಯ, ಎರಡು ಇಲ್ಲದಿದ್ದರೆ ಮನುಷ್ಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ಉತ್ತಮ ಪರಿಸರ ಎಲ್ಲರ ಬಾಳಿನಲ್ಲಿ ಸಿಕ್ಕರೆ ಉತ್ತಮ ಪ್ರಜೆಯಾಗಿ ಬದುಕಬಹುದು ಎಂದರು.




