ಬೆಂಗಳೂರು: ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಕಾರ್ಯಾಚರಣೆ ಕೈಗೊಂಡು ದಾಖಲೆಯ 5 ಗಂಟೆಗಳಲ್ಲಿ ಮೂರು ವಿಭಿನ್ನ ಪ್ರಕರಣಗಳಲ್ಲಿ 9 ಕೆಜಿಗೂ ಹೆಚ್ಚು ಕಳ್ಳಸಾಗಣೆ ಮಾಡಲಾಗುತ್ತಿದ್ದ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಮಹಿಳೆ ಸೇರಿದಂತೆ ಆರು ಭಾರತೀಯರನ್ನು ಬಂಧಿಸಲಾಗಿದೆ. ಫೆಬ್ರವರಿ 1ರಂದು ಶಾರ್ಜಾದಿಂದ ಹೊರಟಿದ್ದ ವಿಮಾನ ಶೋಧಿಸಿದ ವೇಳೆಗ 3.75 ಕೆಜಿ ವಿದೇಶಿ ಮೂಲದ ಚಿನ್ನದ ಗಟ್ಟಿಯನ್ನು ಡಿ ಆರ್ ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆಸನಗಳ ಮೇಲಿನ ಲಗೇಜ್ ಕ್ಯಾಬಿನ್ನಲ್ಲಿ ಬ್ಯಾಗ್ನಲ್ಲಿ ಚಿನ್ನದ ಗಟ್ಟಿಯನ್ನು ಸಾಗಿಸಲಾಗುತ್ತಿತ್ತು.
ಎರಡನೇ ಪ್ರಕರಣದಲ್ಲಿ, ಮಲೇಷ್ಯಾ ಏರ್ಲೈನ್ಸ್ ವಿಮಾನದಲ್ಲಿ ಕೌಲಾಲಂಪುರದಿಂದ ಬಂದ ಇಬ್ಬರು ಪ್ರಯಾಣಿಕರನ್ನು ತಡೆದ ಡಿಆರ್ಐ ಅಧಿಕಾರಿಗಳು ಅವರಿಂದ 1.55 ಕೋಟಿ ಮೌಲ್ಯದ 2,854 ಗ್ರಾಂ ತೂಕದ ಪೇಸ್ಟ್ ರೂಪದ ಚಿನ್ನವನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳು ಶೂ ಸಾಕ್ಸ್ ನಲ್ಲಿ ಚಿನ್ನ ಸಾಗಿಸುತ್ತಿದ್ದರು. ಇಬ್ಬರನ್ನೂ ಬಂಧಿಸಲಾಗಿದೆ.
ಮೂರನೇ ಪ್ರಕರಣದಲ್ಲಿ, ಅದೇ ಮಲೇಷ್ಯಾ ಏರ್ಲೈನ್ಸ್ ವಿಮಾನದಲ್ಲಿ ಕೌಲಾಲಂಪುರದಿಂದ ಬಂದಿಳಿದ ನಾಲ್ವರು ಪ್ರಯಾಣಿಕರನ್ನು ಡಿಆರ್ಐ ಅಧಿಕಾರಿಗಳು ತಡೆದಿದ್ದು, ಒಳ ಉಡುಪಿನಲ್ಲಿ ಸಾಗಿಸಲಾಗುತ್ತಿದ್ದ 1.42 ಕೋಟಿ ಮೌಲ್ಯದ 2,632 ಗ್ರಾಂ ತೂಕದ ಚಿನ್ನ ವಶಕ್ಕೆ ಪಡೆದಿದ್ದಾರೆ. ಚಿನ್ನಾಭರಣಗಳಲ್ಲದೆ, 73.7 ಲಕ್ಷ ರೂಪಾಯಿ ಮೌಲ್ಯದ 3,510 ಇ-ಸಿಗರೇಟ್ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.




