ಸಿದ್ದರಾಮಯ್ಯ ಅವರ ನೇತೃತ್ವದ ಹೊಸ ಸರ್ಕಾರ ರಚನೆಯಾಗಿದೆ. ನಾಡಿನ ಸಮಸ್ತ ಜನರು ಅದರಲ್ಲೂ ವಿಶೇಶವಾಗಿ ತಳಸಮುದಾಯಗಳ ಜನರು ಬಹಳ ನಿರೀಕ್ಷೆ ಇಟ್ಟುಕೊಂಡು ಕುಳಿತಿದ್ದಾರೆ. ಸಿದ್ದರಾಮಯ್ಯ ಅವರನ್ನು ಹಲವರು ಮೆಚ್ಚುವುದು ಸಾಮಾಜಿಕ ನ್ಯಾಯದ ಕುರಿತಾದ ಅವರ ಸ್ಪಷ್ಟ ಗ್ರಹಿಕೆ ಮತ್ತು ತಿಳುವಳಿಕೆಯಿಂದ. ಅವರ ಹಿಂದಿನ ಅವದಿಯಲ್ಲಿ ScSP/TSP ಕಾಯಿದೆ ಜಾರಿಗೊಳಿಸಿದ್ದೇ ಅವರ ಈ ಬದ್ದತೆಗೆ ಸಾಕ್ಷಿ.
ಆದರೆ ಕ್ರಮೇಣ ಆ ಕಾಯಿದೆಯನ್ನು ದುರ್ಬಲಗೊಳಿಸಲಾಯಿತು. ಇದಕ್ಕಾಗಿ ಮೀಸಲಿದ್ದ ಪೂರ್ತಿಹಣವನ್ನು ಸದುಪಯೋಗ ಮಾಡಲು ಮೇಲ್ಜಾತಿ ಅದಿಕಾರಿಗಳು ಸಿದ್ದರಿರಲಿಲ್ಲ. ವಿನಿಯೋಗವಾದ ಹಣವೂ ನಿಜವಾಗಿಯೂ ದಲಿತ ವರ್ಗಗಳನ್ನು ಸಬಲಗೊಳಿಸಲಿಲ್ಲ. ಕೆಲವು ತೀರಾ ಅಸಂಬದ್ದ ಸ್ಕೀಮುಗಳನ್ನೂ ಜಾರಿಗೊಳಿಸಿ ಸಮುದಾಯಗಳ ಮೇಲೆ ದ್ವೇಶ ಹೆಚ್ಚುವಂತೆ ಮಾಡಲಾಯಿತು. ಇಲ್ಲಿ ಒಬ್ಬ ಮುಕ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ದೇಶಕ್ಕೇ ಮಾದರಿಯಾದ ಉತ್ತಮ ಕಾಯಿದೆ ಜಾರಿಗೆ ತಂದರೂ ಅದನ್ನು ಸರಿಯಾಗಿ ಅನುಷ್ಟಾನಗೊಳಿಸುವ ವಿಷಯದಲ್ಲಿ ಫಾಲೋಅಪ್ ಇಲ್ಲದೇ ಹೋಯಿತು.
ಹೀಗೆ ಸಾಮಾಜಿಕ ನ್ಯಾಯ ಪಾಲನೆಯ ಯಾವುದೇ ಯೋಜನೆ ಯಾವುದೇ ಕಾಯಿದೆ ಅನುಷ್ಟಾನದಲ್ಲಿ ಇದೇ ದೊಡ್ಡ ಸಮಸ್ಯೆ. ನಕಲಿ ಜಾತಿ ಪ್ರಮಾಣ ಪತ್ರ ಮಾಡಿಕೊಂಡು ಮೀಸಲಾತಿ ಹೊಡೆದುಕೊಳ್ಳುತ್ತಿರುವುದು ಸಹ ರಾಜ್ಯದ ಒಂದು ದೊಡ್ಡ ಸಮಸ್ಯೆ. ಹಾಗೆಯೇ ಉದ್ಯೋಗ ನೇಮಕಾತಿಯಲ್ಲಿ ಮೀಸಲಾತಿಯ ಅಸಮರ್ಪಕ ಅನುಷ್ಟಾನ, ಸ್ವಜನ ಪಕ್ಷಪಾತಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇವೆಲ್ಲಾ ಸಾಮಾಜಿಕ ನ್ಯಾಯದ ನಡೆಯನ್ನು ಹಿಂದಕ್ಕೆ ಎಳೆಯುತ್ತಲೇ ಇರುತ್ತವೆ.
ಹಾಗಾದರೆ ಇದಕ್ಕೆ ಪರಿಹಾರವೇನು?
ಯಾಕೆ ರಾಜ್ಯ ಸರ್ಕಾರ ಒಂದು ಸಾಮಾಜಿಕ ನ್ಯಾಯ ಪ್ರಾದಿಕಾರ (Social Justice Authority) ರಚಿಸಬಾರದು? ನಮ್ಮ ದೇಶದ ಸಂವಿದಾನದ ಬಹುಮುಕ್ಯ ಆಶಯ ಸಮತೆ, ನ್ಯಾಯ, ಸೋದರತೆಗಳಾದ್ದರಿಂದ ಇದರ ಅನುಷ್ಟಾನಕ್ಕಾಗಿ ಒಂದು ಶಾಸನಬದ್ದ ಅಂಗವಿಲ್ಲದರಿರುವುದು ನಾಚಿಕೆಗೇಡು. ಸಮಾಜ ಕಲ್ಯಾಣ ಇಲಾಕೆ, ಹಿಂದುಳಿದ ವರ್ಗಗಳ ನಿಮಗ ಇತ್ಯಾದಿಗಳು ಸರ್ಕಾರದ ಸ್ಕೀಮ್ ಗಳ ಅನುಷ್ಟಾನಕ್ಕಾಗಿ ಮಾತ್ರ. ಆದರೆ ಸಮಗ್ರವಾಗಿ ಇಡೀ ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಅನುಷ್ಠಾನದ ವಿಚಕ್ಷಣೆಗೆ (ವಿಜಿಲೆನ್ಸ್)ಗೆ ಒಂದು statutory body ಅತ್ಯಗತ್ಯ. ಈ ಕಾರಣದಿಂದ ಒಂದು ಸಾಮಾಜಿಕ ನ್ಯಾಯ ಪ್ರಾದಿಕಾರವನ್ನು ಮಾನ್ಯ ಸಿದ್ದರಾಮಯ್ಯ ಅವರ ಸರ್ಕಾರ ರಚಿಸಲಿ. ಈ ಮೂಲಕ ನಾಡಿನ ಕೋಟ್ಯಂತರ ಜನರಿಗೆ ಆತ್ಮಗೌರವ ದೊರಕಲಿ.
( ಬರಹದಲ್ಲಿ ಉದ್ದೇಶಪೂರ್ವಕವಾಗಿ ಮಹಾಪ್ರಾಣ ಅಕ್ಷರಗಳನ್ನು ಬಳಸಿಲ್ಲ)
- ಹರ್ಶಕುಮಾರ್ ಕುಗ್ವೆ, ಪತ್ರಕರ್ತರು



