ದೇಶದ ಅಭಿವೃದ್ಧಿಗೆ ಸಂಘದ ಕೊಡುಗೆ ಏನು?: ಪ್ರಿಯಾಂಕ್ ಖರ್ಗೆ ಪ್ರಶ್ನೆ

9 months ago

ರಾಷ್ಟ್ರೀಯ ಸ್ವಯಂಸೇವಕ ಸಂಘ ಇಲ್ಲದಿರುತ್ತಿದ್ದರೆ, ಭಾರತ ದೇಶವು ಮುಸ್ಲಿಂ ರಾಷ್ಟ್ರವಾಗುತ್ತಿತ್ತು ಎಂದು  ಹೇಳಿದ್ದ ಜಗದೀಶ್ ಶೆಟ್ಟರ್

ದೇಶದ ಏಳಿಗೆಯಲ್ಲಿ RSS ನೀಡಿದ ಕನಿಷ್ಠ ಹತ್ತು ಕೊಡುಗೆಗಳನ್ನು ಸನ್ಮಾನ್ಯ ಶೆಟ್ಟರ್ ಅವರು ತಿಳಿಸಲಿ

RSS ಅಸ್ತಿತ್ವಕ್ಕೆ ಬಂದಿದ್ದು ಕೇವಲ ನೂರು ವರ್ಷಗಳ ಹಿಂದೆ, ಆದರೆ ಸಾವಿರಾರು ವರ್ಷಗಳಿಂದ ಹಿಂದೂ ಎಂದು ಗುರುತಿಸಿಕೊಂಡಿರುವ ಧರ್ಮಾಚರಣೆ ಅಸ್ತಿತ್ವದಲ್ಲಿದೆ. ಈ ಸತ್ಯ ನಿಮಗೆ ತಿಳಿದಿಲ್ಲವೇ?

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಇಲ್ಲದಿರುತ್ತಿದ್ದರೆ, ಭಾರತ ದೇಶವು ಮುಸ್ಲಿಂ ರಾಷ್ಟ್ರವಾಗುತ್ತಿತ್ತು ಎಂದು ಬೆಳಗಾವಿಯ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ದೇಶದ ಅಭಿವೃದ್ಧಿಗೆ ಸಂಘದ ಕೊಡುಗೆ ಏನು ಎಂದು ಸವಾಲು ಹಾಕಿದ್ದಾರೆ.

ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮುಂತಾದ ನಾಯಕರಿಗೆ ಬಿಜೆಪಿ, ಮೋದಿ ಮತ್ತು ಆರ್‌ಎಸ್‌ಎಸ್‌ ಅನ್ನು ತೆಗಳುವುದು ಒಂದು ಫ್ಯಾಷನ್ ಆಗಿದೆ. ಆರ್‌ಎಸ್‌ಎಸ್‌ ಎನ್ನುವುದು ಮಹಾನ್ ಸಂಘಟನೆ, ಅದರಿಂದಾಗಿಯೇ ದೇಶದಲ್ಲಿ ಏಕತೆ ಉಳಿದಿರುವುದು. ಆರ್‌ಎಸ್‌ಎಸ್‌ ನಿಂದಾಗಿ ಹಿಂದೂಗಳು ಸುರಕ್ಷಿತರಾಗಿದ್ದಾರೆ, ಇಲ್ಲದಿದ್ದರೆ, ಭಾರತವು ಮುಸ್ಲಿಂ ರಾಷ್ಟ್ರವಾಗುತ್ತಿತ್ತು ಎಂದು ಜಗದೀಶ್ ಶೆಟ್ಟರ್ ಹೇಳಿದ್ದರು.

ಇದಕ್ಕೆ ಖಾರವಾಗಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ  ಸಚಿವ ಪ್ರಿಯಾಂಕ್ ಖರ್ಗೆ, ಮಾನ್ಯ ಜಗದೀಶ್ ಶೆಟ್ಟರ್ ಅವರೇ, RSS ಅಸ್ತಿತ್ವಕ್ಕೆ ಬಂದಿದ್ದು ಕೇವಲ ನೂರು ವರ್ಷಗಳ ಹಿಂದೆ, ಆದರೆ ಸಾವಿರಾರು ವರ್ಷಗಳಿಂದ ಹಿಂದೂ ಎಂದು ಗುರುತಿಸಿಕೊಂಡಿರುವ ಧರ್ಮಾಚರಣೆ ಅಸ್ತಿತ್ವದಲ್ಲಿದೆ. ಈ ಸತ್ಯ ನಿಮಗೆ ತಿಳಿದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ನಾಯಕರಿಗೆ RSS ಹೊಗಳುವುದು ಅನಿವಾರ್ಯವಾಗಿದೆ. RSS ಅವರಿಗಂತೂ ಬಸವಣ್ಣನವರ ತತ್ವದಲ್ಲಿ ನಂಬಿಕೆ ಇಲ್ಲ. ತಮಗೂ ಇಲ್ಲವೇ? ನಿಜವಾಗಿಯೂ ಬಸವ ತತ್ವದಲ್ಲಿ ನಂಬಿಕೆ ಇರುವವರು ಆರ್‌ಎಸ್‌ಎಸ್ ಅನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಹಿಂದೆ, ಇಂದು, ಎಂದಿಗೂ ಈ ಭಾರತ ಜಾತ್ಯತೀತ ತತ್ವಗಳ ನೆಲವಾಗಿದೆ, ಮುಂದೆಯೂ ಜಾತ್ಯತೀತ ನೆಲವಾಗಿಯೇ ಇರಲಿದೆ. ಇಷ್ಟಕ್ಕೂ, ಹಿಂದೂ ಧರ್ಮೋದ್ದಾರದಲ್ಲಿ, ಈ ದೇಶದ ಏಳಿಗೆಯಲ್ಲಿ RSS ನೀಡಿದ ಕನಿಷ್ಠ ಹತ್ತು ಕೊಡುಗೆಗಳನ್ನು ಸನ್ಮಾನ್ಯ ಶೆಟ್ಟರ್ ಅವರು ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.

Leave a Reply