ಅಹಿತಕರ ಘಟನೆಗಳು ಆಗದಂತೆ ನಿಗಾವಹಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಡಾ.ಎಂ.ಎ ಸಲೀಂ

4 months ago

ಬೆಂಗಳೂರು: ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮಾಚರಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ ನಿಗಾವಹಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ರಾಜ್ಯದ ಪೊಲೀಸ್‍ ಮಹಾ ನಿರ್ದೇಶಕ ಡಾ.ಎಂ.ಎ ಸಲೀಂ ಆದೇಶಿಸಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾ ಎಸ್‍ಪಿಗಳು, ವಲಯದ ಐಜಿಪಿಗಳು ಹಾಗೂ ಮಹಾ ನಗರಗಳ ಆಯುಕ್ತರುಗಳಿಗೆ 17 ಅಂಶಗಳುಳ್ಳ ಮಾರ್ಗಸೂಚಿಗಳನ್ನು ಕಳುಹಿಸಿದ್ದಾರೆ .ಈ ಮಾರ್ಗಸೂಚಿಗಳನ್ವಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದ್ದಾರೆ.

ವಾಹನಗಳ ನಿರಂತರ ಗಸ್ತು, ಪೊಲೀಸರ ಕಾಲ್ನಡಿಗೆ ಗಸ್ತು, ಅಶ್ವಾರೋಹಿ, ಬೈಕ್ ಗಸ್ತುಗಳು ಸಾರ್ವಜನಿಕರಲ್ಲಿ ಪೊಲೀಸರ ಗೋಚರತೆಯನ್ನು ಹೆಚ್ಚಿಸುತ್ತದೆ ಹಾಗೂ ತುರ್ತು ಪ್ರತಿಕ್ರಿಯೆ ಸಾಧ್ಯವಾಗಿಸುತ್ತದೆ. ಪೂರ್ವನಿಯೋಜಿತ ಸ್ಥಳಗಳಲ್ಲಿ ಟ್ರಾಫಿಕ್ ಮತ್ತು ಎಸ್‍ಡಬ್ಲೂಎಟಿ ತಂಡಗಳನ್ನು ಒಳಗೊಂಡಂತೆ ಎಲ್ಲಾ ಘಟಕಗಳನ್ನು ನಿಯೋಜಿಸಿಕೊಳ್ಳುವುದು ಹಾಗೂ ಎಲ್ಲಾ ಚೆಕ್ಪೋಸ್ಟ್ಗಳಲ್ಲಿ ವಿಡಿಯೋಗ್ರಾಫಿ ಮಾಡಿಸುವುದು.

ಸಿಸಿಟಿವಿ, ಡ್ರೋನ್ ಮತ್ತು ನೈಜ ಸಮಯದ ಕ್ರೌಡ್ ಟ್ರ್ಯಾಕಿಂಗ್ ವ್ಯವಸ್ಥೆಗಳ ಮೂಲಕ ಜನಸಾಂದ್ರತೆಯ ಮೇಲ್ವಿಚಾರಣೆ, ವರ್ತನೆಯ ಸ್ವರೂಪ ಮತ್ತು ಒತ್ತಡಗಳು ಸಂಭವಿಸುವ ಸಾಧ್ಯತೆಗಳನ್ನು ನಿರ್ಧರಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು. ತರಬೇತಿ ಪಡೆದ ಭದ್ರತಾ ಸಿಬ್ಬಂದಿಯನ್ನು ಚೆಕ್ಪೋಸ್ಟ್ಗಳಲ್ಲಿ ನಿಯೋಜಿಸಿ, ಲೋಹ ಶೋಧಕಗಳು, ಬ್ಯಾಗ್ ತಪಾಸಣೆ ಮತ್ತು ಟಿಕೆಟ್ ಪರಿಶೀಲನೆಯೊಂದಿಗೆ ಪ್ರವೇಶವನ್ನು ನಿಯಂತ್ರಿಸಿ ಅಪಾಯಗಳನ್ನು ಪತ್ತೆ ಹಚ್ಚುವ ಕ್ರಮಗಳನ್ನು ಕೈಗೊಳ್ಳುವುದು ಎಂದಿದ್ದಾರೆ.

ಮಹಿಳೆಯರನ್ನು ಚುಡಾಯಿಸುವುದನ್ನು ತಡೆಯಲು ಮಹಿಳಾ ಪೊಲೀಸ್‍ ತಂಡಗಳನ್ನು ನಿಯೋಜಿಸಿ, ಆಂಬ್ಯುಲೆನ್್ಸ, ಅಗ್ನಿಶಾಮಕ ಮತ್ತು ವೈದ್ಯಕೀಯ ತಂಡಗಳನ್ನು ಸಿದ್ದ ಸ್ಥಿತಿಯಲ್ಲಿ ಇಟ್ಟು ಸ್ಪಷ್ಟ ನಿರ್ಗಮನ ಮಾರ್ಗಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಡ್ರೋನ್ ಮತ್ತು ಸಿಸಿಟಿವಿಗಳ ಮೂಲಕ ನೈಜ ಸಮಯದ ನಿಗಾವಣೆ ಮಾಡುವಂತೆ ಆದೇಶಿಸಿದ್ದಾರೆ. ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

Leave a Reply