ರೋಹಿಣಿ ಸಿಂಧೂರಿ, ರೂಪ ಮೌದ್ಗಿಲ್ ಎತ್ತಂಗಡಿ

3 years ago

ಬೆಂಗಳೂರು: ಪರಸ್ಪರ ಆರೋಪ- ಪ್ರತ್ಯಾರೋಪಗಳ ಮೂಲಕ ಸರ್ಕಾರಕ್ಕೆ ಮುಜುಗರ ಸೃಷ್ಟಿಸಿದ ಆರೋಪಕ್ಕೆ ಸಿಲುಕಿದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಜಿಪಿ ರೂಪ ಮೌದ್ಗಿಲ್ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ. ವರ್ಗಾವಣೆ ಮಾಡಿದರೂ ಇಬ್ಬರಿಗೂ ಸದ್ಯಕ್ಕೆ ಯಾವುದೇ ಸ್ಥಳಕ್ಕೆ ನಿಯೋಜನೆ ಮಾಡದೆ ರಜೆ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ.

ಜೊತೆಗೆ ಡಿ.ರೂಪಾ ಅವರ ಪತಿ ಭೂ ದಾಖಲೆ ಮತ್ತು ಸರ್ವೆ ಇಲಾಖೆಯ ಆಯುಕ್ತರಾಗಿದ್ದ ಮೌನೀಶ್ ಮೌದ್ಗಿಲ್ ಅವರನ್ನು ವರ್ಗಾವಣೆ ಮಾಡಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿದೆ. ಇವರೊಂದಿಗೆ ಒಟ್ಟು ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ನಿರ್ದೇಶಕಿಯಾಗಿದ್ದ ಐಜಿಪಿ ರೂಪ ಮೌದ್ಗಿಲ್ ಸ್ಥಾನಕ್ಕೆ ಭಾರತಿ.ಡಿ ಅವರನ್ನು ನೇಮಕ ಮಾಡಲಾಗಿದೆ.

ಮುಜರಾಯಿ ಇಲಾಖೆ ಆಯುಕ್ತಯಾಗಿದ್ದ ರೋಹಿಣಿ ಸಿಂಧೂರಿ ಸ್ಥಾನಕ್ಕೆ ಬಸವರಾಜೇಂದ್ರ.ಎಚ್ ನೇಮಕ ಮಾಡಲಾಗಿದೆ. ಮೌನಿಶ್ ಮೌದ್ಗಿಲ್ ಸ್ಥಾನಕ್ಕೆ ಸಿ.ಎನ್.ಶ್ರೀಧರ್ ಅವರನ್ನು ನೇಮಿಸಲಾಗಿದೆ. ತುಮಕೂರು ನಗರ ಮಹಾನಗರ ಪಾಲಿಕೆ ಆಯುಕ್ತರಾಗಿ ದರ್ಶನ್ ಎಚ್.ಪಿ ಅವರನ್ನು ನೇಮಕ ಮಾಡಿದೆ. ರೋಹಿಣಿ ಸಿಂಧೂರಿ ಮತ್ತು ರೂಪ ಮೌದ್ಗಿಲ್ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ.

Leave a Reply