ಬೆಂಗಳೂರು: ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುವವರನ್ನು ಅಧಿಕಾರದಿಂದ ಕಿತ್ತೊಗೆಯಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಕರೆನೀಡಿದರು.
ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನ ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾಗಿದೆ. ಸಾಮಾಜಿಕ, ಆರ್ಥಿಕ ವ್ಯವಸ್ಥೆಯನ್ನು ಒಳಗೊಂಡಂತೆ ಸಮಗ್ರ ಸುಧಾರಣೆ ಹಾಗೂ ಆಡಳಿತಾತ್ಮಕ ದೃಷ್ಟಿಯನ್ನು ಒಳಗೊಂಡು ಸಂವಿಧಾನ ರಚನೆಯಾಗಿದೆ. ಅದರಲ್ಲಿ ಸಮಾನತೆ, ಭ್ರಾತೃತ್ವ, ರಾಷ್ಟ್ರೀಯತೆಯನ್ನು ಪ್ರತಿಪಾದಿಸಲಾಗಿದೆ ಎಂದರು.
ಸಂವಿಧಾನದ ವಿರೋಧಿಗಳು ಅನಗತ್ಯವಾಗಿ ಅಪಪ್ರಚಾರ ನಡೆಸಿದ್ದಾರೆ. ಸಂವಿಧಾನ ಜಾರಿಗೆ ಬಂದ ದಿನದಿಂದಲೂ ಅದರ ವಿರುದ್ಧ ಷಡ್ಯಂತ್ರಗಳು ನಡೆಯುತ್ತಲೇ ಇವೆ. ಸಂವಿಧಾನಕ್ಕೆ ಅಪಾಯವಾಗುವ ಸನ್ನಿವೇಶವನ್ನು ಯಾರೂ ಸಹಿಸಬಾರದು. ಸಂವಿಧಾನದ ರಕ್ಷಣೆಯಿಂದ ಮಾತ್ರ ನಾವು ಉಳಿಯಲು ಸಾಧ್ಯ. ಅದಕ್ಕೆ ಅಪಾಯವಾದರೆ ನಾವು ಎಲ್ಲರೂ ಕಷ್ಟಕ್ಕೆ ಸಿಲುಕುತ್ತೇವೆ ಎಂಬುದನ್ನು ಯುವಜನರಾದಿಯಾಗಿ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಭಾರತ ಹಲವು ಧರ್ಮ, ಜಾತಿ, ಭಾಷೆ, ಸಂಸ್ಕøತಿಯ ವೈವಿಧ್ಯತೆಯ ನಾಡು. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದೆ. ಸಂವಿಧಾನ ರಚನೆ ಕರಡು ಸಮಿತಿಯಲ್ಲಿ ಭಾಷಣ ಮಾಡಿದ ಅಂಬೇಡ್ಕರ್ ಅವರು ವೈವಿಧ್ಯತೆಯ ವೈರುಧ್ಯದ ವ್ಯವಸ್ಥೆಗೆ ನಾವು ಕಾಲಿಡುತ್ತಿದ್ದೇವೆ. ಸಂವಿಧಾನದಿಂದ ರಾಜಕೀಯ ಅವಕಾಶಗಳು ಸಿಗಬಹುದು. ಆದರೆ ಆರ್ಥಿಕ, ಸಾಮಾಜಿಕ ಸಮಾನತೆ ಸೃಷ್ಟಿಯಾಗದೇ ಇದ್ದರೆ ಸಂಕಟಕ್ಕೆ ಒಳಗಾದವರು ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಯನ್ನು ಧ್ವಂಸ ಮಾಡುತ್ತಾರೆ ಎಂದು ಎಚ್ಚರಿಸಿದ್ದರು ಎಂದರು.
ಸಂವಿಧಾನದ ಆಶಯಗಳನ್ನು ಪಾಲಿಸುವುದು ಪ್ರತಿಯೊಂದು ಸರ್ಕಾರಗಳ ಕರ್ತವ್ಯ. ಸಂವಿಧಾನವನ್ನು ಬದಲಾವಣೆ ಮಾಡಲಿಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳುವವರಿಂದ ಅದರ ಆಶಯಗಳನ್ನು ಜಾರಿಗೆ ತರಲು ಸಾಧ್ಯ ಇಲ್ಲ ಎಂದರು.
ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಸಂಸತ್ ಮತ್ತು ನ್ಯಾಯ ವ್ಯವಸ್ಥೆಗೆ ಪ್ರಜೆಗಳು ಮಾಲೀಕರು. ಒಂದು ವೇಳೆ ಅದು ವೈಪಲ್ಯವಾದರೆ ಸಂವಿಧಾನವನ್ನು ಕಿತ್ತೊಗೆಯುವುದಕ್ಕೆ ಆಸಕ್ತಿ ತೋರಿಸಬಾರದು. ಸಂವಿಧಾನಕ್ಕೆ ವಿರುದ್ಧವಾಗಿರುವವರನ್ನು ಕಿತ್ತೊಗೆಯುವ ಸಂಕಲ್ಪ ಮಾಡಬೇಕು ಎಂದರು.
ನಮ್ಮ ದೇಶದಲ್ಲೂ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವ ಜನರಿಂದ ಸಂವಿಧಾನದ ಆಶಯಗಳು ಈಡೇರಲು ಸಾಧ್ಯವೇ? ಸಾಮಾಜಿಕ ಅಸಮಾನತೆ, ವರ್ಗ ಸಂಘರ್ಷಗಳು ನಿವಾರಣೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಜ.26ರಿಂದ ಆರಂಭಗೊಂಡ ಸಂವಿಧಾನದ ಜಾಥಾ ರಾಜ್ಯದ 5,600ಕ್ಕೂ ಹೆಚ್ಚು ಪಂಚಾಯತ್ಗ್ಳಲ್ಲಿ ಸಂಚರಿಸಿದೆ. ಜನರಿಂದ ಅಭೂತಪೂರ್ವ ಸ್ಪಂದನೆ ದೊರೆತಿದೆ ಎಂದರು.
ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರೂ ಅದರ ಪೂರ್ಣ ಆಶಯಗಳು ಈಡೇರಿಲ್ಲ. ಕೃಷಿಕರು, ಕಾರ್ಮಿಕರು ಈಗಲೂ ಅವಕಾಶಕ್ಕಾಗಿ ಆಕಾಶದತ್ತ ನೋಡುವ ಪರಿಸ್ಥಿತಿ ಇದೆ. ಸಂವಿಧಾನವನ್ನು ಒಪ್ಪದ ವ್ಯಕ್ತಿಗಳ ಕೈಲಿ ರಾಜಕೀಯ ವ್ಯವಸ್ಥೆ ಇದ್ದಿದ್ದರಿಂದಾಗಿ ಅದು ಪೂರ್ಣ ಪ್ರಮಾಣದ ಸಾಕಾರಗೊಂಡಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಉತ್ತಮ ಸ್ತಬ್ಧ ಚಿತ್ರಕ್ಕೆ ಪ್ರಶಸ್ತಿ ನೀಡಲಾಯಿತು. ಅತ್ಯುತ್ತಮ ಚಟುವಟಿಕೆಗಾಗಿ ತುಮಕೂರು, ದಾವಣಗೆರೆ, ಮೈಸೂರು, ಕೊಡಗು, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲಾಕಾರಿಗಳಿಗೆ ನಗದು ಪುರಸ್ಕಾರ ನೀಡಲಾಯಿತು ಹಾಗೂ ಸಂವಿಧಾನ ಪೀಠಿಕೆ ವಾಚನದಲ್ಲಿ ಭಾಗವಹಿಸಿದ್ದ ಮಕ್ಕಳಿಗೂ ಪ್ರಶಸ್ತಿ ನೀಡಲಾಯಿತು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ವಾಚಿಸಿದರು.




