ಬೆಂಗಳೂರು: ಪೊಲೀಸ್ ಸಬ್ಇನ್ಸ್ಪೆಕ್ಟರ್ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ದಳ ( ಸಿಐಡಿ) ಆರೋಪಿಗಳಿಂದ 3.11 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಸರ್ಕಾರಿ ಹುದ್ದೆ ಪಡೆಯಲು ಪಿಎಸ್ಐ ನವೀನ್ ಪ್ರಸಾದ್ಗೆ ಹೆಚ್.ಯು. ರಘುವೀರ್ ಎಂಬ ಅಭ್ಯರ್ಥಿ ಅತಿ ಹೆಚ್ಚು ಸಂಭಾವನೆ 85 ಲಕ್ಷ ರೂಪಾಯಿ ನೀಡಿರುವುದಾಗಿ ಸಿಐಡಿ ತಿಳಿಸಿದೆ. ಇದಕ್ಕೆ ಪ್ರತಿಯಾಗಿ ಪ್ರಸಾದ್ ಮತ್ತೊಬ್ಬ ಆರೋಪಿ ಶರೀಫ್ ಕಲ್ಲಿಮನಿಗೆ ಅದೇ ಹಣವನ್ನು ನೀಡಿದ್ದು, ಆತ ಮುಖ್ಯ ಆರೋಪಿ ಹರ್ಷಗೆ ಹಣ ವರ್ಗಾಯಿಸಿದ್ದಾರೆ. ಹರ್ಷ ನೇಮಕಾತಿ ವಿಭಾಗದಲ್ಲಿ ಹುದ್ದೆಯಲ್ಲಿದ್ದಾರೆ. ನಂತರ ಹಣ ನೀಡಿದ ಅಭ್ಯರ್ಥಿ ರಘುವೀರ್ ಗೆ ಒಎಂಆರ್ ಶೀಟ್ ನ ಕಾರ್ಬನ್ ಪ್ರತಿಯನ್ನು ಮತ್ತು ಪರೀಕ್ಷೆಗೆ ಬಳಸಿದ ಪೆನ್ ನ್ನು ನೀಡಲಾಗಿತ್ತು.
ವಶಪಡಿಸಿಕೊಳ್ಳಲಾಗಿರುವ 168 ಅಭ್ಯರ್ಥಿಗಳ ಒಎಂಆರ್ ಶೀಟ್ನಲ್ಲಿ 22 ಅಭ್ಯರ್ಥಿಗಳ ಒಎಂಆರ್ ಶೀಟ್ ನ ಕಾರ್ಬನ್ ಪ್ರತಿಯ ಮಧ್ಯೆ ಹೊಂದಿಕೆಯಾಗುತ್ತಿರಲಿಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಿಂದ ತಿಳಿದುಬಂದಿದೆ ಎಂದು ಸಿಐಡಿ ತಿಳಿಸಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯ 23ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ಹಾಗೂ ವಿಶೇಷ ನ್ಯಾಯಾಧೀಶ ಕೆ ಲಕ್ಷ್ಮೀನಾರಾಯಣ ಭಟ್ ಸಲ್ಲಿಸಿರುವ ಹೇಳಿಕೆಗೆ ಆಕ್ಷೇಪವೆತ್ತಿ ಸಿಐಡಿ ಇದನ್ನು ಬಹಿರಂಗಪಡಿಸಿದೆ.
ಈ ಮಧ್ಯೆ, ಕಳೆದ ಶುಕ್ರವಾರ 12 ಆರೋಪಿಗಳಿಗೆ ಕೋರ್ಟ್ ಜಾಮೀನು ನೀಡಿದ್ದು ಬ್ಯಾಡರಹಳ್ಳಿ ಪಿಎಸ್ಐ ಹರ್ಷಗೆ ಜಾಮೀನು ತಿರಸ್ಕರಿಸಿದೆ. ಈತ ಮಧು ಮತ್ತು ದಿಲೀಪ್ ಕುಮಾರ್ ಎಂಬುವವರಿಂದ ತಲಾ 30 ಲಕ್ಷ ರೂಪಾಯಿ ಸಂಗ್ರಹಿಸಿದ್ದ ಹಾಗೂ ಹರ್ಷಗೆ ಹಣ ನೀಡುವಾಗ 5 ಲಕ್ಷ ರೂಪಾಯಿ ಇಟ್ಟುಕೊಂಡು ಉಳಿದದ್ದನ್ನು ನೀಡಿದ್ದ ಎಂದು ಮಾಹಿತಿ ನೀಡಲಾಗಿದೆ.




