ಬಾಂಬ್ ಇದೆ ಎಂದು ಹೇಳಿ ಆತಂಕ ಸೃಷ್ಟಿಸಿದ ಪ್ರಯಾಣಿಕ

2 years ago

ಬೆಂಗಳೂರು: ಚೆಕ್-ಇನ್ ಬ್ಯಾಗ್‌ನಲ್ಲಿ ಬಾಂಬ್ ಅಡಗಿಸಿಟ್ಟಿರುವುದಾಗಿ ಸುಳ್ಳು ಬೆದರಿಕೆ ಹಾಕಿ ಭೀತಿ ಸೃಷ್ಟಿಸಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಭದ್ರತಾ ತಪಾಸಣೆ ವೇಳೆ ವ್ಯಕ್ತಿಯು ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಹೇಳಿ ಆತಂಕ ಸೃಷ್ಟಿಸಿದ್ದ ಪ್ರಯಾಣಿಕ ರಾಜೇಶ್‌ಕುಮಾರ್ ಬೇನಿವಾಲ್ ಬಂಧಿತ ಆರೋಪಿಯಾಗಿದ್ದಾನೆ.

ಈತ ಬೆಂಗಳೂರಿನಿಂದ  ಪುಣೆಗೆ ಹೊರಟಿದ್ದರು. ಆರೋಪಿಯ ಕೃತ್ಯದ ಬಗ್ಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ವಿಮಾನ ನಿಲ್ದಾಣ ಪೊಲೀಸರಿಗೆ ದೂರು ನೀಡಿದ್ದು, ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ವಿರುದ್ಧ ನಾನ್ ಕಾಗ್ನಿಸಿಬಲ್ ರಿಪೋರ್ಟ್ (ಎನ್ ಸಿಆರ್ ) ದಾಖಲಿಸಲಾಗಿದೆ.

ನಾನ್ ಕಾಗ್ನಿಸಿಬಲ್ ರಿಪೋರ್ಟ್ ಎಂದರೆ, ನ್ಯಾಯಾಲಯವು ನೀಡಿದ ವಾರಂಟ್ ಇಲ್ಲದೆ ಪೊಲೀಸರು ಆರೋಪಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ.

ಕಳೆದ ಮೇ.16ರ ರಾತ್ರಿ 9 ಗಂಟೆ ಸುಮಾರಿಗೆ ಟರ್ಮಿನಲ್ 2 ರಲ್ಲಿ ಕೌಂಟರ್ ಸಂಖ್ಯೆ ಇ 9 ಎದುರು ಈ ಘಟನೆ ಸಂಭವಿಸಿದೆ.

ಹರಿಯಾಣದ ಹಿಸ್ಸಾರ್ ಜಿಲ್ಲೆಯ ನಿವಾಸಿಯಾದ ಬೇನಿವಾಲ್ ವಿಮಾನ ಸಂಖ್ಯೆ 15 821 ರಲ್ಲಿ ಪ್ರಯಾಣಿಸಲು ಮುಂದಾಗಿದ್ದ. ಪ್ರಯಾಣಿಕರು ಬ್ಯಾಗ್‌ಗಳನ್ನು ತಪಾಸಣೆಗಾಗಿ ಏರ್‌ಲೈನ್‌ನ ಚೆಕ್-ಇನ್ ಕೌಂಟರ್‌ನಲ್ಲಿ ಹಸ್ತಾಂತರಿಸುತ್ತಿದ್ದಾಗ ಬೇನಿವಾಲ್ ತನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಗಟ್ಟಿಯಾಗಿ ಹೇಳಿದ್ದಾನೆ. ವಿಮಾನಯಾನ ಸಿಬ್ಬಂದಿ ತಕ್ಷಣವೇ ವಿಮಾನ ನಿಲ್ದಾಣದ ಭದ್ರತಾ ಏಜೆನ್ಸಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಂತರ ಬೇನಿವಾಲ್ ನನ್ನು ಇತರ ಪ್ರಯಾಣಿಕರಿಂದ ಪ್ರತ್ಯೇಕಿಸಿ ತನಿಖೆಗೆ ಒಳಪಡಿಸಲಾಯಿತು. ಆತನ ಬ್ಯಾಗ್‌ಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಲಾಯಿತು. ಈ ವೇಳೆ ಆತನ ಬೆದರಿಕೆ ಹುಸಿ ಎಂಬುದು ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.

Leave a Reply