ಬೆಳಗಾವಿ: ವಿದ್ಯುತ್ ದರವನ್ನು ಈಗ ತಾನೇ ಏರಿಸಿದ್ದಾರೆ. ಪ್ರತಿ ಸಲ ವಿದ್ಯುತ್ ದರ ಏರಿಸುತ್ತಿದ್ದಾರೆ. ಸರ್ಕಾರದವರಿಗೆ ಬೆಲೆ ಏರಿಸಲು ನಿರ್ದಿಷ್ಟವಾದ ಸಂದರ್ಭ ಇಲ್ಲವೇ ಇಲ್ಲ. ಬೆಲೆ ಹೆಚ್ಚು ಮಾಡುವುದೇ ಅವರಿಗೆ ಒಂದು ಸಂದರ್ಭವಾಗಿದೆ. ಹಿಂದಿನ ಸರ್ಕಾರಗಳು ಅನಿವಾರ್ಯತೆ ಇದ್ದಾಗ ಎರಡು ವರ್ಷಕ್ಕೆ ಮೂರು ವರ್ಷಕ್ಕೊಮ್ಮೆ ವಿದ್ಯುತ್ ದರ ಏರಿಸುತ್ತಿದ್ದವು. ಇವರಿಗೆ ಏನೂ ಲೆಕ್ಕವೇ ಇಲ್ಲ. ಬೆಲೆ ಏರಿಕೆಗೆ ಯಾವುದೇ ನಿರ್ದಿಷ್ಟ ಗೊತ್ತುಗುರಿ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಗೋಕಾಕ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಪೆಟ್ರೋಲ್, ವಿದ್ಯುತ್, ಬೇರೆ ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಸಾಕಷ್ಟು ಹೊರೆಯಾಗಿದೆ. ಇದರಿಂದಾಗಿ ಪಕ್ಷಕ್ಕಿಂತ ಮಿಗಿಲಾಗಿ ಜನ ಸ್ವಯಂಪ್ರೇರಣೆಯಿಂದ ಪ್ರತಿಭಟನೆ ಮಾಡಬೇಕು. ಆಗ ಮಾತ್ರ ಸರ್ಕಾರಗಳು ನಿಯಂತ್ರಣಕ್ಕೆ ಬರುತ್ತವೆ. ಆ ನಿಟ್ಟಿನಲ್ಲಿ ಸಾರ್ವಜನಿಕರಿಂದಲೇ ಅಭಿಯಾನ ನಡೆಯಬೇಕು ಎಂದು ಕರೆನೀಡಿದರು.
ಕಾಂಗ್ರೆಸ್ ಪಕ್ಷ ಕೂಡ ಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದೆ. ಇಡಿ, ಐಟಿ ದುರುಪಯೋಗ, ರಾಜ್ಯ ಸರ್ಕಾರದ 40% ಕಮೀಷನ್ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಇದರ ವಿರುದ್ಧ ಕೂಡ ಜನ ಪ್ರತಿಭಟನೆ ನಡೆಸಬೇಕು ಎಂದರು.
ಮೋದಿಯವರು ಅಧಿಕಾರಕ್ಕೆ ಬಂದಮೇಲೆ ದ್ವೇಷದ ರಾಜಕಾರಣ ಸಾಕಷ್ಟು ಆಗಿದೆ. ಹಿಂದಿನ ಬಿಜೆಪಿ ಸರ್ಕಾರಕ್ಕೆ ಈಗಿನ ಬಿಜೆಪಿ ಸರ್ಕಾರಕ್ಕೆ ಬಹಳ ವ್ಯತ್ಯಾಸ ಇದೆ. ಮುಂದಿನ ಚುನಾವಣೆಯಲ್ಲಿ ಜನ ಬದಲಾವಣೆ ಮಾಡಬೇಕು. ಭಾಷಣದಿಂದ ಬದಲಾವಣೆಯಾಗುವುದಿಲ್ಲ. ಜನರೇ ಬದಲಾವಣೆಯನ್ನು ಬಯಸಬೇಕು ಎಂದು ಅವರು ಅಭಿಪ್ರಾಯಪಟ್ಟರು.




