ಕೆಪಿಎಸ್ಸಿ ನಾಮನಿರ್ದೇಶನ: ರಾಜ್ಯ ಸರ್ಕಾರವನ್ನು ಶ್ಲಾಘಿಸಿದ ಹೈಕೋರ್ಟ್

12 months ago

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ( ಕೆಪಿಎಸ್ಸಿ)ಕ್ಕೆ ಅಧ್ಯಕ್ಷ ಮತ್ತು ಸದಸ್ಯರ ನಾಮನಿರ್ದೇಶನಕ್ಕೆ ಶೋಧನಾ ಸಮಿತಿ ರಚಿಸಲಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ತಿಳಿಸಿದೆ.

ಆಯೋಗದ ಸುಧಾರಣೆ ಸಂಬಂಧ ರಚಿಸಲಾಗಿದ್ದ ಪಿ.ಸಿ.ಹೋಟಾ ಸಮಿತಿ ನೀಡಿರುವ ಶಿಫಾರಸಿನ ಅನುಗುಣವಾಗಿ ಶೋಧನಾ ಸಮಿತಿ ರಚಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿರುವುದನ್ನು ಹೈಕೋರ್ಟ್ ಶ್ಲಾಘಿಸಿದೆ.

ಎಂಜಿನಿಯರ್‌ಗಳ ನೇಮಕಾತಿಗೆ ಸಂಬಂಧಿಸಿದ ಪ್ರಕರಣದಲ್ಲಿ, ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ಎಂಜಿನಿಯರ್‌ಗಳಾದ ವಿಶ್ವಾಸ್‌ ಮತ್ತಿತರರು ಸಲ್ಲಿಸಿರುವ ರಿಟ್‌ ಅರ್ಜಿಗಳ ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್ ಕೆ.ಶಶಿಕಿರಣ ಶೆಟ್ಟಿ ಸರ್ಕಾರದ ನಿಲುವು ತಿಳಿಸಿದರು.

ಈ ಹೇಳಿಕೆಯನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ತನ್ನ ದೈನಂದಿನ ಆದೇಶದಲ್ಲಿ ಉಲ್ಲೇಖಿಸಿದೆ.

ಶೋಧನಾ ಸಮಿತಿಯಲ್ಲಿ ತಲಾ ಒಬ್ಬರು ಮಹಿಳೆ ಮತ್ತು ತುಳಿತಕ್ಕೊಳಗಾದ ಸಮುದಾಯದ ವ್ಯಕ್ತಿಯನ್ನು ಸದಸ್ಯರನ್ನಾಗಿ ಮಾಡಬೇಕೆಂಬ ನ್ಯಾಯಪೀಠದ ಸಲಹೆಯನ್ನು ಸಂಪುಟ ಸಭೆಯ ಮುಂದೆ ಇರಿಸಲಾಗುವುದು. ಇದನ್ನು ಸಚಿವ ಸಂಪುಟ ಪರಿಶೀಲಿಸಲಿದೆ’ ಎಂಬ ಅಡ್ವೊಕೇಟ್‌ ಜನರಲ್‌ ಅವರ ಹೇಳಿಕೆಯನ್ನೂ ನ್ಯಾಯಪೀಠ ಶ್ಲಾಘಿಸಿದೆ.

ಇದೇ ವೇಳೆ ನ್ಯಾಯಪೀಠಕ್ಕೆ ಮುಚ್ಚಿದ ಲಕೋಟೆಯೊಂದನ್ನು ಸಲ್ಲಿಸಿರುವ ರಾಜ್ಯ ಸರ್ಕಾರ, ಒಂದು ವೇಳೆ ನ್ಯಾಯಾಲಯ ಕೆಪಿಎಸ್‌ಸಿ ಹಗರಣದ ತನಿಖೆ ನಡೆಸಲು ವಿಶೇಷ ತನಿಖಾ ದಳ ರಚಿಸಿದರೆ ಅದಕ್ಕಾಗಿ ಮೂವರು ಐಪಿಎಸ್‌ ಅಧಿಕಾರಿಗಳನ್ನು ಪರಿಗಣಿಸಬಹುದು ಎಂದು ಮೂವರು ಅಧಿಕಾರಿಗಳ ಹೆಸರುಗಳನ್ನು ಹೇಳಿದೆ.

Leave a Reply