ಕಾಂಗ್ರೆಸ್ ಸರ್ಕಾರದ ಬೌದ್ಧಿಕ ದಿವಾಳಿತನ

2 years ago

ಒಂದು ರಾಜಕೀಯ ಪಕ್ಷಕ್ಕೆ ತತ್ವ ಮತ್ತು ಸಿದ್ಧಾಂತಗಳು ಎಷ್ಟು ಮುಖ್ಯವೋ, ಸಾಂಸ್ಕೃತಿಕ ರಾಜಕೀಯವು ಅಷ್ಟೇ ಮುಖ್ಯ ಎಂಬುದನ್ನು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೇಸ್ ಸರ್ಕಾರ ಮನಗಾಣಲಿಲ್ಲ.

ಅಧಿಕಾರಕ್ಕೆ ಬಂದು ಹತ್ತು ತಿಂಗಳಾದರೂ ಸಹ ಈವರೆಗೆ ಸಾಹಿತ್ಯ ಅಕಾಡೆಮಿ ಮತ್ತು ಇತರೆ ಪ್ರಾಧಿಕಾರಗಳಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಪ್ರತಿಭಾವಂತರನ್ನು ನೇಮಕ ಮಾಡಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ಈ ನೇಮಕಕ್ಕೆ ಹೈಕಮಾಂಡ್ ನ ಅನುಮತಿ ಪಡೆಯಬೇಕಿಲ್ಲ ಎಂಬ ಕನಿಷ್ಠ ಪ್ರಜ್ಞೆ ನಾಯಕರಿಗೆ ಮತ್ತು ಅವರ ಸಲಹೆಗಾರರಿಗೆ ಇರಬೇಕಿತ್ತು. ಅದು ಇಲ್ಲವಾಗಿದೆ.

ಕಾಂಗ್ರೆಸ್ ಪಕ್ಷವು ಸಂಘಪರಿವಾರ ಅಥವಾ ಬಿ.ಜೆ.ಪಿ.ಯಿಂದ ಏನನ್ನೂ ಕಲಿಯುವುದು ಅಗತ್ಯವಿಲ್ಲ ನಿಜ. ಆದರೆ, ಅವರಿಂದ ಸಂಘಟನಾ ಕೌಶಲ್ಯ ವಿಶೇಷವಾಗಿ ತಳಮಟ್ಟದಲ್ಲಿ ಕಾರ್ಯಕರ್ತರನ್ನು ರೂಪಿಸುವ ಬಗೆ ಹಾಗೂ ಸಾಂಸ್ಕೃತಿಕ ರಾಜಕೀಯವನ್ನು ಕಲಿಯುವ ಅಗತ್ಯವಿದೆ.

ಒಂದು ರಾಜಕೀಯ ಪಕ್ಷಕ್ಕೆ ಹಣ, ಅಧಿಕಾರ ಎಷ್ಟು ಮುಖ್ಯವೋ ಅದೇ ಮಟ್ಟದಲ್ಲಿ ಸಾರ್ವಜನಿಕವಾಗಿ ಸದಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ರಾಜಕೀಯವು ಮುಖ್ಯವಾಗಿದೆ.

ಕಳೆದಬಾರಿ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಸಾಹಿತ್ಯ ಅಕಾಡೆಮಿ, ಅನುವಾದ ಅಕಾಡೆಮಿ, ಮಾಧ್ಯಮ ಅಕಾಡೆಮಿ ಸೇರಿದಂತೆ ಎಲ್ಲಾ ಸಂಸ್ಥೆಗಳಿಗೆ ಸಂಘ ಪರಿವಾರದ ಕಾಲಾಳುಗಳನ್ನು ತಂದು ತಕ್ಷಣ  ನೇಮಕ ಮಾಡಿತು.

ಈ ಸರ್ಕಾರಕ್ಕೆ ಏನಾಗಿದೆ? ಇಂದು ಸಂಘ ಪರಿವಾರವನ್ನು ದ್ವೇಷಿಸುವವರು ಮತ್ತು ಜೆ.ಡಿ.ಎಸ್. ರಾಜಕೀಯ ನಡೆಗಳ ಬಗ್ಗೆ ಅಸಹ್ಯ ಮೂಡಿದವರಿಗೆ ಇಂದಿನ ಸ್ಥಿತಿಯಲ್ಲಿ ಕಾಂಗ್ರೆಸ್ ಅನಿವಾರ್ಯವಾಗಿದೆಯೇ ಹೊರತು ನಾಡಿನ ಪ್ರಜ್ಞಾವಂತರು ಕಾಂಗ್ರೆಸ್ ಭಜನಾ ಮಂಡಳಿಯ ಸದಸ್ಯರಲ್ಲ.

ಮೊನ್ನೆ ಮೈಸೂರು ನಗರದಲ್ಲಿ ನಡೆದ ಪ.ಮಲ್ಲೇಶ್ ಸ್ಮಾರಕ ವಿಚಾರ ಸಂಕಿರಣದಲ್ಲಿ ಮಾಧ್ಯಮಗಳ ಕುರಿತಾಗಿ ಮಾತನಾಡಲು ಆಗಮಿಸಿದ್ದ ದೇಶದ ಹಿರಿಯ ಪತ್ರಕರ್ತ ಹಾಗೂ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಪತ್ರಿಕೆಯ ಮಾಜಿ ಸಂಪಾದಕರಾದ ಪರಂಜೋಯ್ ಗುಹಾ ಅವರು ನನ್ನನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲಬಹುದು? ಎಂದು ಕೇಳಿದರು.

ಅವರ ಬಳಿ ಕಳೆದಬಾರಿ ಬಿ.ಜೆ.ಪಿ. 25 ಸ್ಥಾನ ಗೆದ್ದಿದ್ದ ಮಾಹಿತಿ ಇತ್ತು. ನಾನು ಅವರಿಗೆ ಹೇಳಿದೆ. ಹತ್ತು ಸ್ಥಾನ ಪಡೆದರೆ ಅದು ನನ್ನ ದೃಷ್ಟಿಯಲ್ಲಿ ಸಾಧನೆ ಎಂದು ಹೇಳಿದೆ. ನಂತರ ಕಾಂಗ್ರೆಸ್ ಪಕ್ಷಕ್ಕೆ ತಳಮಟ್ಟದಲ್ಲಿ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ಇಲ್ಲದಿರುವ ಪರಿಸ್ಥಿತಿಯನ್ನು ವಿವರಿಸಿದೆ.

ದೆಹಲಿ ಮೂಲದ ಅವರಿಗೆ ಬೆಂಗಳೂರು ಮೂರು ಕ್ಷೇತ್ರ, ಮಂಗಳೂರು, ಮೈಸೂರು, ಮಂಡ್ಯ, ಖರ್ಗೆಯವರ ಗುಲ್ಬರ್ಗ ಕ್ಷೇತ್ರ ಒಳಗೊಂಡಂತೆ  ಧಾರವಾಡ ಇಂತಹ ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿಗಳಿಲ್ಲ ಎಂದು ವಿವರಿಸುತ್ತಾ, ಕಾಂಗ್ರೆಸ್ ಗೆ ಬೀಳಬಹುದಾದ ಮತಗಳಲ್ಲಿ ಅರ್ಧದಷ್ಟು ಭಾಗ  ಬಿ.ಜೆ.ಪಿ. ಮೇಲಿನ ಸಿಟ್ಟಿನಿಂದ ಬೀಳುವ ಮತಗಳೇ ಹೊರತು, ಕಾಂಗ್ರೆಸ್ ನ  ಅಭಿವೃದ್ಧಿ ಮತ್ತು ಸಾಧನೆಗಾಗಿ ಬೀಳುವ ಮತಗಳಲ್ಲ ಎಂದು ಅಂಕಿ ಅಂಶಗಳ ಸಹಿತ ಅವರಿಗೆ ವಿವರಿಸಿದೆ.

ಒಬ್ಬ ನಾಯಕ ಅಥವಾ ಸಂಘಟನೆಗೆ ಅವಶ್ಯಕವಾಗಿ ಬೇಕಾಗಿರುವುದು ವಸ್ತುನಿಷ್ಠ ಸಲಹೆಗಾರನೇ ಹೊರತು, ತುತ್ತೂರಿ ಊದುವ ಸಲಹೆಗಾರರಲ್ಲ. ಇದನ್ನು ಈ ಸರ್ಕಾರಕ್ಕೆ ನಾವು ತಲುಪಿಸಬೇಕಿದೆ.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply