ವಿತ್ತೀಯ ಕೊರತೆ (ಆದಾಯ ಮತ್ತು ವೆಚ್ಚದ ನಡುವಿನ ವ್ಯತ್ಯಾಸ) ಯನ್ನು ಕಡಿಮೆ ಮಾಡಬೇಕು ಎನ್ನುವುದು ಮೇಲ್ನೋಟಕ್ಕೆ ನಿಜವೆನಿಸಿದರೂ ಸಹ ಅದು ಸರಳವಲ್ಲ.
ಏಕೆಂದರೆ ಮುಕ್ತ ಮಾರುಕಟ್ಟೆಯನ್ನು ಸಮರ್ಥಿಸುವ ಆರ್ಥಿಕ ತಜ್ಞರು ವೆಚ್ಚವನ್ನು ಕಡಿಮೆ ಮಾಡಿ, ಆ ಮೂಲಕ ವಿತ್ತೀಯ ಕೊರತೆ ಕಡಿಮೆ ಮಾಡಿ ಎಂದು ಸೂಚಿಸುತ್ತಾರೆ.
ಆದರೆ ಜನಕಲ್ಯಾಣ ಯೋಜನೆಗಳ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ವಿತ್ತೀಯ ಕೊರತೆ ಕಡಿಮೆ ಮಾಡುವುದು ಜೀವವಿರೋಧಿ ಎನಿಸಿಕೊಳ್ಳುತ್ತದೆ. ವಿತ್ತೀಯ ಕೊರತೆಗೆ ಜನರಿಗಾಗಿ ಮಾಡುವ ವೆಚ್ಚ ಮುಖ್ಯ ಕಾರಣವಲ್ಲ.
ಬದಲಿಗೆ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು.
ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಆದಾಯ ಹೆಚ್ಚಿಸುವ ಮೂಲಗಳಾದ ಸಂಪತ್ತು ತೆರಿಗೆ ರದ್ದು ಮಾಡಿದೆ. ಕಾರ್ಪೋರೇಟ್ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಕಡಿತ ಮಾಡುತ್ತಾರೆ. ಶ್ರೀಮಂತರ ಆದಾಯದ ಮೇಲಿನ ಸರ್ ಜಾರ್ಜ್ ನ್ನು
ಶೇ.12ರಷ್ಟು ಕಡಿಮೆ ಮಾಡುತ್ತಾರೆ.
ಎನ್ ಪಿಎ 11 ಲಕ್ಷ ಕೋಟಿಯಾಗಿದೆ.
ಈಗ ಹೇಳಿ ವಿತ್ತೀಯ ಕೊರತೆಗೆ ಯಾರು ಹೊಣೆ?
ಮತ್ತೊಂದೆಡೆ ಈ ಬಜೆಟ್ ನಲ್ಲಿ ಮನರೇಗ, ಪಡಿತರ ವಿತರಣೆ, ಅಂಗನವಾಡಿ ಮುಂತಾದ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿಮೆ ಮಾಡಿದ್ದಾರೆ. ಆದರೂ ವಿತ್ತೀಯ ಕೊರತೆ
ಶೇ.5.9 ಎಂದು ಹೇಳುತ್ತಾರೆ. ಯಾಕೆ?

2014ರಲ್ಲಿ 54 ಲಕ್ಷ ಕೋಟಿಯಷ್ಟಿದ್ದ ಸಾಲದ ಪ್ರಮಾಣ 2022ರಲ್ಲಿ 152 ಲಕ್ಷ ಕೋಟಿಯಷ್ಟಿದೆ. ಒಂಬತ್ತು ವರ್ಷಗಳಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ 100 ಲಕ್ಷ ಕೋಟಿ ಸಾಲ ಮಾಡಿದೆ. ಬಜೆಟ್ ವೆಚ್ಚದ ಶೇ.22ರಷ್ಟು ಬಡ್ಡಿ ಕಟ್ಟುತ್ತಿದ್ದಾರೆ.
ಆದರೆ ನಿರುದ್ಯೋಗ ಶೇ. 8.9ರಷ್ಟಿದೆ. 30 ಕೋಟಿ ಜನಸಂಖ್ಯೆ ಬಡವರಿದ್ದಾರೆ. 80 ಕೋಟಿ ಜನಸಂಖ್ಯೆ ಪಡಿತರ ಮೂಲಕ ಆಹಾರ ಧಾನ್ಯ ಪಡೆಯುತ್ತಿದ್ದಾರೆ. ಮೂಲಭೂತ ಸೌಕರ್ಯಗಳಿಲ್ಲ.
ಶಿಕ್ಷಣಕ್ಕೆ ಜಿಡಿಪಿಯ ಶೇ.6ರಷ್ಟು ಹಣ ಕೊಡುತ್ತಿಲ್ಲ
ಹಾಗಿದ್ದಲ್ಲಿ ಸಾಲ ಮಾಡಿದ ಕೋಟಿಗಟ್ಟಲೆ ರೊಕ್ಕ ಏನಾಯಿತು?
ಕೇಳುವವರಿಲ್ಲ.
ಇಂತಹ ಗಂಭೀರ ಸಮಸ್ಯೆಗಳನ್ನು ಹೈಲೈಟ್ ಮಾಡಬೇಕಾದ ಮಾಧ್ಯಮಗಳು ಈ ಬಜೆಟ್ ನ್ನು ಅಭೂತಪೂರ್ವ ಎಂದು ಬಣ್ಣಿಸುತ್ತಿವೆ
ಈ ದೇಶ ಉದ್ಧಾರವಾಗುವ ಯಾವುದೇ ಸಾಧ್ಯತೆಗಳಿಲ್ಲ
– ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು



