ಬದುಕಿದ್ದವರು ಮತ ಹಾಕಿದ್ದಿದ್ರೆ ನಾನು ಗೆಲ್ಲುತ್ತಿದ್ದೆ: ಸಿ ಟಿ ರವಿ

7 months ago

ಬೆಂಗಳೂರು: ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಮತಕಳ್ಳತನದ ಬಗ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ.

ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ ಯಾರೋ ಬರೆದುಕೊಟ್ಟಿದ್ದನ್ನು  ಓದಿದ್ದಾರೆ. ಇವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಕಾಮನ್ ಸೆನ್ಸ್ ಇಲ್ಲ. ಯಾರೋ ಬರೆದುಕೊಟ್ಟಿದ್ದನ್ನು ಬಂದು ಓದಿ ಹೇಳುತ್ತಾರೆ. ದೇಶದಲ್ಲಿ ಅತಿ ಹೆಚ್ಚು ಅಪಹಾಸ್ಯಕ್ಕೆ ರಾಹುಲ್ ಈಡಾಗಿದ್ದಾರೆ. ಇತ್ತೀಚೆಗೆ ಮಹಾದೇವಪುರದಲ್ಲಿ ಮತ ಅಕ್ರಮ ಅಂತ ಆರೋಪ ಮಾಡಿದ್ದರು. ಅವರ ಆರೋಪ ಸುಳ್ಳಾಯಿತು. ಈಗ ಆಳಂದ ಕ್ಷೇತ್ರ ಹಿಡಿದುಕೊಂಡಿದ್ದಾರೆ ಎಂದರು.

ಬಿಹಾರದಲ್ಲಿ ಸೋಲುವ ಹತಾಶೆ ರಾಹುಲ್ ಗಾಂಧಿಗೆ ಶುರುವಾಗಿದೆ. ಇದುವರೆಗೆ ಅವರು ಸಿಡಿಸಿದ ಪಟಾಕಿಗಳು ಠುಸ್ ಆಗಿದೆ. ಚುನಾವಣಾ ಆಯೋಗ 45 ಗಂಟೆಗಳ ಸಮಯಾವಕಾಶ ಕೊಟ್ಟಿರುತ್ತಾರೆ. ಆಗ ಏನು ಮಾಡುತ್ತಿದ್ದರು? ಮತ ಅಕ್ರಮಕ್ಕೆ ದಾಖಲೆ ಇದ್ದಿದ್ದರೆ ಯಾಕೆ ಆಕ್ಷೇಪಣೆ ಸಲ್ಲಿಸಲಿಲ್ಲ? ಇದಕ್ಕೆ ಉತ್ತರ ಕೊಡಿ ಎಂದರು.

ಬಿಜೆಪಿಯನ್ನು, ಚುನಾವಣಾ ಆಯೋಗವನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಬೇಕು. ಇದೊಂದೇ ಕಾಂಗ್ರೆಸ್ ಅಜೆಂಡಾ. ಅದಕ್ಕಾಗಿ ಬಾಲಿಶ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ಹಿರಿಯ ನಾಯಕ ಸಿಟಿ ರವಿ ಮಾತನಾಡಿ, ರಾಹುಲ್ ಗಾಂಧಿ ಹಿಟ್ ಅಂಡ್ ರನ್ ಮಾಡಬಾರದು. ತಾವು ಮಾಡಿದ ಆರೋಪಕ್ಕೆ ಅಫಿಡವಿಟ್ ಮೂಲಕ ಆಧಾರ ಸಹಿತ ದೂರು ಸಲ್ಲಿಸಲಿ. ನಿಮಗೆ ಸಂವಿಧಾನಬದ್ಧ ಸಂಸ್ಥೆ ಮೇಲೆ ನಂಬಿಕೆ ಇದ್ರೆ ಆಧಾರಸಹಿತ ದೂರು ಸಲ್ಲಿಸಿ. ಅದು ಬಿಟ್ಟು ಬೀದಿಯಲ್ಲಿ ಮಾತಾಡೋದು ಸರಿಯಲ್ಲ ಎಂದರು.

ಒಂದು ಸುಳ್ಳು ಸಾವಿರ ಬಾರಿ ಹೇಳಿದರೆ ಅದೇ ಸತ್ಯ ಆಗುತ್ತೆ ಅಂತ ಗೊಬೆಲ್ ಅನ್ನೋನು ಹೇಳಿದ್ದಾನೆ. ರಾಹುಲ್ ಗಾಂಧಿ ಎಲ್ಲ ದೇವರುಗಳನ್ನು ಆಚೆ ಇಟ್ಟು ಗೊಬೆಲ್ ನನ್ನೇ ಪೂಜೆ ಮಾಡ್ತಿರಬಹುದು. ಇವಿಎಂ ಮೇಲೂ ಅನುಮಾನ, ಚುನಾವಣಾ ಆಯೋಗದ ಮೇಲೂ ಅಪನಂಬಿಕೆ. ಯಾವುದರ ಮೇಲೂ ನಂಬಿಕೆ ಇಲ್ಲ. ಅರಾಜಕತೆ ಸೃಷ್ಟಿಸಲು ರಾಹುಲ್ ಗಾಂಧಿ ಸುಳ್ಳು ಆರೋಪ ಮಾಡ್ತಿದ್ದಾರೆ. ದಾಖಲೆ ಇದ್ದರೆ ಪ್ರಮಾಣಪತ್ರದೊಂದಿಗೆ ದೂರು ಸಲ್ಲಿಸಿ ಎಂದರು.

ನಾನೂ ಚುನಾವಣೆಯಲ್ಲಿ ಸೋತಿದ್ದೀನಿ. ಪರಿಶೀಲನೆ ಮಾಡಿದಾಗ ಮುಸ್ಲಿಂ ಬಡಾವಣೆಗಳಲ್ಲಿ ಹೆಚ್ಚಿನ‌ ಮತದಾನ ಆಗಿದೆ. ಸತ್ತವರೂ ಕೂಡಾ ಎದ್ದು ಬಂದು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕಿದ್ದಾರೆ. ಸತ್ತವರು ಬಂದು ಮತ ಹಾಕಿದ್ದರಿಂದ ನಾನು ಸೋತೆ. ಬದುಕಿದ್ದವರು ಮತ ಹಾಕಿದ್ದಿದ್ರೆ ನಾನು ಗೆಲ್ಲುತ್ತಿದ್ದೆ. ನಾನು ಇದಕ್ಕೆ ಚುನಾವಣಾ ಆಯೋಗಕ್ಕೆ ದೂರಲು ಆಗುತ್ತಾ? ಎಂದರು.

Leave a Reply