ನಾನು ಈಗಲೂ ಜೆಡಿಎಸ್ ರಾಜ್ಯಾಧ್ಯಕ್ಷ: ಸಿ.ಎಂ.ಇಬ್ರಾಹಿಂ

2 years ago

#JDS #StatePresident #CMIbrahim

ಬೆಂಗಳೂರು: ನಾನು ಈಗಲೂ ಜೆಡಿಎಸ್ ರಾಜ್ಯಾಧ್ಯಕ್ಷ. ‌ ಮಗನಿಗಾಗಿ ಈ ತರ ಮಾಡುವುದು ಸರಿಯಲ್ಲ. ಈಗಲೂ ದೇವೇಗೌಡರಲ್ಲಿ ನಿರ್ಣಯ ವಾಪಸ್ ಪಡೆಯಿರಿ ಎಂದು ಮನವಿ ಮಾಡುವುದಾಗಿ ಸಿ.ಎಂ.ಇಬ್ರಾಹಿಂ ಹೇಳಿದರು. ಈ ಮೂಲಕ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಜೆಡಿಎಸ್ ನಿಂದ ತಮ್ಮನ್ನು ಅಮಾನತುಗೊಳಿಸಿರುವ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಸಂವಿಧಾನಕ್ಕೆ ವಿರುದ್ಧವಾಗಿ ಜೆಡಿಎಸ್ ಲೋಕಸಭಾ ಚುನಾವಣೆ ನೆಪದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬೆಳವಣಿಗೆ ಬೇಸರ ತಂದಿದೆ. ಈ ನಿರ್ಧಾರವನ್ನು ಡಿಸೆಂಬರ್ 9ರೊಳಗೆ ವಾಪಸ್ ಪಡೆಯಬೇಕು. ಇಲ್ಲವಾದರೆ ಮುಂದಿನ ಬೆಳವಣಿಗೆ ಗಂಭೀರ ಸ್ವರೂಪದಲ್ಲಿರಲಿದೆ ಎಂದು ಎಚ್ಚರಿಕೆ ನೀಡಿದರು.

ದೇವೇಗೌಡರು ಜೆಡಿಎಸ್ ರಾಷ್ಟ್ರಾಧ್ಯಕ್ಷರಾಗಿ ಇರುತ್ತಾರಾ ಇಲ್ಲವಾ ಎಂಬುದು ರಾಷ್ಟ್ರೀಯ ಕಾರ್ಯಕಾರಣಿ‌ ನಿರ್ಧಾರ ಮಾಡಲಿದೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಸಿ ದೇವೇಗೌಡರನ್ನು ರಾಷ್ಟ್ರಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದರೆ ಏನು ಮಾಡುತ್ತೀರಿ ಎಂದು ಸವಾಲೆಸೆದರು.

ಪಕ್ಷದಿಂದ ನನ್ನನ್ನು ಅಮಾನತು ಮಾಡುವ ಬಗ್ಗೆ ನನಗೆ ನೋಟಿಸ್ ಕೊಟ್ಟಿಲ್ಲ. ನಾನೇನು ಅವರ ಮನೆ ಕೆಲಸದವನಾ? ಏನು ಇವರ ಹುಚ್ಚಾಟ? ಈ ಬಗ್ಗೆ ನಾನು ಕಾನೂನು ಹೋರಾಟ ಮಾಡುತ್ತೇನೆ. ಎಲ್ಲೋ ರೆಸಾರ್ಟ್ ನಲ್ಲಿ 8ರಿಂದ 10 ಜನ ಸಭೆ ಮಾಡುವುದಲ್ಲ ಎಂದು ಕಿಡಿಕಾರಿದರು.

ಮೊದಲು ಆತ್ಮ ಶುದ್ಧವಾಗಿ ಇಟ್ಟುಕೊಳ್ಳಿ. ನಿಮಗೆ ಮತ ಕೊಟ್ಟ ಚನ್ನಪಟ್ಟಣದ ಜನರಿಗೆ ನೀವು ಧನ್ಯವಾದವನ್ನೂ ಹೇಳಿಲ್ಲ ಎನ್ನುವ ಮೂಲಕ ದತ್ತಮಾಲೆ ಹಾಕುತ್ತೇನೆ ಎಂಬ ಮಾಜಿ ಸಿಎಂ ಹೆಚ್ಡಿುಕೆ ಹೇಳಿಕೆಗೆ ತಿರುಗೇಟು ನೀಡಿದರು.

Leave a Reply