ಬೆಂಗಳೂರು: ಸರ್ಕಾರದ ಸುಳ್ಳಿನ ಕಂತೆಗೆ ರಾಜ್ಯಪಾಲರು ಧ್ವನಿಯಾಗಬೇಕು ಎಂಬ ಯಾವುದೇ ಕಡ್ಡಾಯ ನಿಯಮ ಭಾರತದ ಸಂವಿಧಾನದಲ್ಲಿ ಇಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಅಭಿವೃದ್ಧಿ ಶೂನ್ಯ ಆಡಳಿತ, ಸಾಲು ಸಾಲು ಭ್ರಷ್ಟಾಚಾರ ಹಗರಣಗಳು ಮತ್ತು ಆಡಳಿತಾತ್ಮಕ ವೈಫಲ್ಯವನ್ನು ಮರೆಮಾಚಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು ರಾಜ್ಯಪಾಲರ ಭಾಷಣವನ್ನೇ ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ. ಇದು ರಾಜಕೀಯ ಹತಾಶೆಯಿಂದ ಮಾಡುತ್ತಿರುವ ಸಂವಿಧಾನಾತ್ಮಕ ಸಂಸ್ಥೆಗಳ ಮೇಲಿನ ನೇರ ದಾಳಿ ಎಂದರು.
ರಾಜ್ಯಪಾಲರು ಯಾವುದೇ ಪಕ್ಷದ ಪ್ರತಿನಿಧಿಗಳಲ್ಲ. ಅವರು ಸಂವಿಧಾನದ ಘನತೆಯನ್ನು ಮತ್ತು ಒಕ್ಕೂಟ ವ್ಯವಸ್ಥೆಯ ಸಮತೋಲನವನ್ನು ಕಾಪಾಡುವ ಉನ್ನತ ಸಂವಿಧಾನಾತ್ಮಕ ಸಂಸ್ಥೆ. ಅವರ ಘನತೆಗೆ ಧಕ್ಕೆ ತರುವ ಮೂಲಕ ಕಾಂಗ್ರೆಸ್ ಸರ್ಕಾರ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ಚ್ಯುತಿ ತರುವ ದುಸ್ಸಾಹಸ ಮಾಡುತ್ತಿದೆ ಎಂದರು.
ಭಾರತದ ಸಂವಿಧಾನದ ವಿಧಿ 175 ಮತ್ತು 176 ರಾಜ್ಯಪಾಲರಿಗೆ ವಿಧಾನಸಭೆ ಹಾಗೂ ವಿಧಾನಪರಿಷತ್ತನ್ನು ಉದ್ದೇಶಿಸಿ ಭಾಷಣ ಮಾಡುವ ಅಧಿಕಾರ ನೀಡುತ್ತವೆ. ಆದರೆ ಸರ್ಕಾರ ತಯಾರಿಸಿದ ಪಠ್ಯದ ಪ್ರತಿಯೊಂದು ಪದವನ್ನೂ ರಾಜ್ಯಪಾಲರು ಯಾಂತ್ರಿಕವಾಗಿ ಯಥಾವತ್ತಾಗಿ ಓದಲೇಬೇಕು ಎಂಬ ನಿಯಮ ಸಂವಿಧಾನದಲ್ಲೂ ಇಲ್ಲ, ವಿಧಾನಸಭೆ ಅಥವಾ ವಿಧಾನಪರಿಷತ್ತಿನ ನಿಯಮಗಳಲ್ಲೂ ಇಲ್ಲ ಎಂದರು.
ವಿಧಿ 163ರ ಪ್ರಕಾರ ರಾಜ್ಯಪಾಲರು ಸಾಮಾನ್ಯವಾಗಿ ಸಚಿವ ಸಂಪುಟದ ಸಲಹೆಯಂತೆ ಕಾರ್ಯನಿರ್ವಹಿಸಿದರೂ, ಸಂವಿಧಾನವೇ ಅವರಿಗೆ ನಿರ್ದಿಷ್ಟ ವಿವೇಚನಾಧಿಕಾರ ನೀಡಿದೆ. ಸರ್ಕಾರ ತಯಾರಿಸಿದ ಭಾಷಣದಲ್ಲಿ ಅಸಂಬದ್ಧ, ಅಸಹ್ಯಕರ, ದ್ವೇಷಪೂರಿತ ಅಥವಾ ಸಂವಿಧಾನ ವಿರೋಧಿ ಅಂಶಗಳಿದ್ದರೆ, ಅವನ್ನು ಓದದೇ ಬಿಡುವುದು ರಾಜ್ಯಪಾಲರ ಸಂವಿಧಾನಾತ್ಮಕ ಹಕ್ಕು ಎಂದರು.
ಸರ್ಕಾರದ ಸುಳ್ಳಿನ ಕಂತೆಗೆ ರಾಜ್ಯಪಾಲರು ಧ್ವನಿಯಾಗಬೇಕು ಎಂಬ ನಿಯಮ ಕಾಂಗ್ರೆಸ್ನ ರಾಜಕೀಯ ಕೈಪಿಡಿಯಲ್ಲಿ ಇರಬಹುದು ಅಥವಾ ರಾಹುಲ್ ಗಾಂಧಿ ಅವರು ಹಿಡಿದುಕೊಂಡು ಅಡ್ಡಾಡುವ ಪುಸ್ತಕದಲ್ಲಿ ಇರಬಹುದು, ಆದರೆ ಭಾರತದ ಸಂವಿಧಾನದಲ್ಲಿ ಇಲ್ಲ ಎಂದರು.
ನೀತಿ ಆಯೋಗದ ಸಭೆಗಳಿಗೆ ಗೈರು, ಜಿಎಸ್ಟಿ ಕೌನ್ಸಿಲ್ನಿಂದ ದೂರ, ಹಣಕಾಸು ಆಯೋಗದ ಮುಂದೆ ರಾಜ್ಯದ ಹಿತಾಸಕ್ತಿಯನ್ನು ಸಮರ್ಥವಾಗಿ ಮಂಡಿಸದ ಕಾಂಗ್ರೆಸ್ ಸರ್ಕಾರ ರಾಜ್ಯದ ಹಿತಾಸಕ್ತಿ ಕಾಪಾಡಲು ಆಸಕ್ತಿ ತೋರದೆ ವಿಫಲವಾಗಿ, ಈಗ ಕೇಂದ್ರ ಸರ್ಕಾರದ ಮೇಲೆ ರಾಜಕೀಯ ಪ್ರೇರಿತ ಆರೋಪ ಮಾಡುವ ನಾಟಕವಾಡುತ್ತಿದೆ ಎಂದರು.
ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಗುತ್ತಿಗೆದಾರರಿಗೆ ಪಾವತಿಸಲು ಹಣವಿಲ್ಲ. ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಣ ವರ್ಗಾವಣೆ, 60% ಕಮಿಷನ್ ಆರೋಪಗಳು ಸರ್ಕಾರವನ್ನು ಜನರ ಮುಂದೆ ಬೆತ್ತಲಾಗಿಸಿವೆ. ಈ ಎಲ್ಲ ಹಗರಣಗಳಿಂದ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು, ರಾಜ್ಯಪಾಲರ ಭಾಷಣವನ್ನು ವಿವಾದಕ್ಕೆ ಎಳೆದು ತರುವುದು ಕಾಂಗ್ರೆಸ್ನ ಕುತಂತ್ರ ಎಂದರು.
ಚುನಾಯಿತ ಸರ್ಕಾರಕ್ಕೆ ಜನರ ಸೇವೆ ಮಾಡುವ ಮ್ಯಾಂಡೇಟ್ ಇದೆಯೇ ಹೊರತು, ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸುವ ಅಧಿಕಾರವಿಲ್ಲ. ಎನ್ಇಪಿ, ತೆರಿಗೆ ಹಂಚಿಕೆ ಮತ್ತು ಅನುದಾನ ವಿಚಾರಗಳಲ್ಲಿ ಹಸಿ ಸುಳ್ಳುಗಳನ್ನು ಪಠ್ಯದಲ್ಲಿ ಸೇರಿಸಿ, ಅದನ್ನು ರಾಜ್ಯಪಾಲರು ಓದಲಿಲ್ಲವೆಂದು ವಿವಾದ ಸೃಷ್ಟಿ ಮಾಡುವುದು ಕಾಂಗ್ರೆಸ್ ನಾಯಕರ ರಾಜಕೀಯ ಹತಾಶೆಯನ್ನು ತೋರಿಸುತ್ತದೆ ಎಂದರು.
ಈ ಸರ್ಕಾರ ಇಂದು ದಿವಾಳಿಯ ಅಂಚಿನಲ್ಲಿ ನಿಂತಿದೆ. ಜನರ ಮುಂದೆ ಹೋಗಲು ಮುಖವಿಲ್ಲದೆ, ರಾಜ್ಯಪಾಲರ ಉನ್ನತ ಹಾಗೂ ಗೌರವಾನ್ವಿತ ಹುದ್ದೆಯನ್ನು ರಾಜಕೀಯ ಜಿದ್ದಾಜಿದ್ದಿಗೆ ಎಳೆದು ತರುತ್ತಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಅವಮಾನ. ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ಬಳಸಿರುವುದು ಸಂಪೂರ್ಣವಾಗಿ ಸಂವಿಧಾನಸಮ್ಮತ. ಇದನ್ನು ಪ್ರಶ್ನಿಸುವ ಮೊದಲು ಕಾಂಗ್ರೆಸ್ ಸರ್ಕಾರ ಸಂವಿಧಾನವನ್ನು ಓದಿ, ಅರ್ಥಮಾಡಿಕೊಳ್ಳಲಿ ಎಂದರು.




