ಬೆಳಗಾವಿ: ಕರಾವಳಿ ಮತ್ತು ಮಲೆನಾಡು ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದಲ್ಲೂ ಮಳೆಯ ಆರ್ಭಟ ಹೆಚ್ಚಾಗಿದೆ. ಈಗಾಗಲೇ ಭಾರೀ ಮಳೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶ, ಕೊಂಕಣ ಭಾಗದಲ್ಲಿ ಮಳೆ ಹೆಚ್ಚಾಗಿದೆ. ಹೀಗಾಗಿ, ಬೆಳಗಾವಿ ಜಿಲ್ಲೆಗೆ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ 1 ವಾರದಿಂದ ಮಳೆ ಸುರಿಯುತ್ತಿದೆ. ಹೀಗಾಗಿ, ಪಂಚಗಂಗಾ, ದೂದ್ಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಕೃಷ್ಣಾ ನದಿಗೆ ಸೇರಲಿರುವ ಪಂಚಗಂಗಾ, ದೂದ್ಗಂಗಾ ನದಿ ನೀರು ಹೆಚ್ಚಾಗಿದೆ. ಚಿಕ್ಕೋಡಿ ಉಪವಿಭಾಗದ ಕೃಷ್ಣಾ ನದಿಗೆ ಸೇರಲಿರುವ ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಮಹಾರಾಷ್ಟ್ರದ ಸತಾರಾ, ಕರಾಡ, ಕೊಲ್ಲಾಪುರ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ. ಇನ್ನೊಂದು ವಾರ ಮಹಾರಾಷ್ಟ್ರದಲ್ಲಿ ಹೀಗೇ ಮಳೆ ಮುಂದುವರಿದರೆ ಉತ್ತರ ಕರ್ನಾಟಕದ ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಲಿದೆ. ಬಾಗಲಕೋಟೆ, ಬೆಳಗಾವಿಯಲ್ಲಿ ಪ್ರವಾಹ ಭೀತಿಯಿಂದ ಜನರು ಈಗಲೇ ಚಡಪಡಿಸುತ್ತಿದ್ದಾರೆ. ನದಿ ತೀರಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಬೆಳಗಾವಿ ಜಿಲ್ಲಾಡಳಿತ ಸೂಚನೆ ನೀಡಿದೆ. ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗಿರುವುದರಿಂದ ಮುನ್ನೆಚ್ಚರಿಕೆ ವಹಿಸುವಂತೆ ಕೃಷ್ಣಾ ನದಿ ಪಾತ್ರದ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.
ಈಗಾಗಲೇ ನಾರಾಯಣಪೂರು ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಮಹಾರಾಷ್ಟ್ರದಲ್ಲಿ ಕುಂಭದ್ರೋಣ ಮಳೆಯಿಂದಾಗಿ ನಾರಾಯಣಪೂರು ಜಲಾಶಯದ ಕೆಳ ಭಾಗದ ನಿವಾಸಿಗಳು ಮತ್ತೆ ಪ್ರವಾಹದ ಭೀತಿಗೆ ತುತ್ತಾಗಿದ್ದಾರೆ. ಕಳೆದ 2-3 ದಿನಗಳಿಂದ ನಾರಾಯಣಪೂರು, ಆಲಮಟ್ಟಿ ಮೇಲ್ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ತೀವ್ರವಾಗಿದೆ. ಇದರಿಂದಾಗಿ ಕೃಷ್ಣಾ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ಹರಿವಿನ ಹೆಚ್ಚಳದಿಂದ ನಾರಾಯಣಪೂರು ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ.
492 ಮೀಟರ್ ಎತ್ತರದ ನಾರಾಯಣಪೂರು ಜಲಾಶಯ ಈಗಾಗಲೇ 491 ಮೀಟರ್ ಭರ್ತಿಯಾಗಿದೆ. ಪೂರ್ಣ ಪ್ರಮಾಣದ ಭರ್ತಿಗೆ ಕೇವಲ 1 ಮೀಟರ್ ಮಾತ್ರ ಬಾಕಿಯಿದೆ. ಇದರಿಂದಾಗಿ ಲಿಂಗಸೂಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕಿನ ನದಿ ಪಾತ್ರದ ಜನರು ಭಯಭೀತರಾಗಿದ್ದಾರೆ. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಕೆಲ ಸೇತುವೆಗಳು ಮುಳುಗಿವೆ. ಕೃಷ್ಣಾ ನದಿಯಲ್ಲಿ 2 ರಿಂದ 3 ಲಕ್ಷ ಕ್ಯೂಸೆಕ್ ನೀರು ಹೆಚ್ಚಿದರೆ, ಸುಮಾರು 15 ಹಳ್ಳಿಗಳ ಜನರು ಊರು ಬಿಡಬೇಕಾಗುತ್ತದೆ. ಈಗಾಗಲೇ ರಕ್ಷಣಾ ಕಾರ್ಯಕ್ಕೆ ಎನ್ಡಿಆರ್ಎಫ್ ತಂಡವೂ ಸಿದ್ಧವಾಗಿದೆ. ತುರ್ತು ಸಂದರ್ಭದಲ್ಲಿ ರಕ್ಷಣೆಗಾಗಿ ಬೋಟ್ಗಳನ್ನು ಸಜ್ಜುಗೊಳಿಸಲಾಗಿದೆ. ಪ್ರಸ್ತುತ ಇನ್ನೂ ಜಲಾಶಯದಿಂದ ನೀರು ಬಿಡದಿರುವುದರಿಂದ ಯಾವುದೇ ಆತಂಕವಿಲ್ಲವಾದರೂ, ಜಲಾಶಯದಿಂದ ನದಿಗೆ ನೀರು ಬಿಟ್ಟ ನಂತರ ಜನ ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ವೇದಗಂಗಾ, ದೂದಗಂಗಾ, ಕೃಷ್ಣಾ, ಮಲಪ್ರಭಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಮಹಾರಾಷ್ಟ್ರದ ಪುಣೆ, ಸತಾರಾ ಮತ್ತು ಕೊಲ್ಹಾಪುರದಲ್ಲಿ ಮುಂದಿನ ಮೂರು ದಿನಗಳವರೆಗೆ ರೆಡ್ ಅಲರ್ಟ್ ನೀಡಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದಲ್ಲದೆ ಜುಲೈ 8ರವರೆಗೆ ಸತಾರಾ ಜಿಲ್ಲೆಗೆ ಮತ್ತು ಜುಲೈ 9ರವರೆಗೆ ಕೊಲ್ಹಾಪುರ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಪಂಜಾಬ್ ಮತ್ತು ಹರಿಯಾಣ ಮತ್ತು ಚಂಡೀಗಢದಲ್ಲಿ ಜುಲೈ 9 ರವರೆಗೆ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಟ್ವೀಟ್ ಮಾಡಿದೆ.
ಕೃಷ್ಣಾ ನದಿಗೆ ರಾಜಾಪುರ ಬ್ಯಾರೇಜ್ನಿಂದ ಬುಧವಾರ 37,708 ಕ್ಯುಸೆಕ್, ದೂದಗಂಗಾ ನದಿಯಿಂದ 10560 ಕ್ಯುಸೆಕ್ ನೀರನ್ನು ಹೊರ ಬಿಡಲಾಗಿದ್ದು, ಕೃಷ್ಣಾ ನದಿಯ ನೀರಿನ ಮಟ್ಟ ಹೆಚ್ಚಳವಾಗಿದೆ. ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಪ್ರವಾಹದ ನೀರಿನಲ್ಲಿ 2 ಕೊಚ್ಚಿಹೋಗಿದೆ, ಮನೆ ಕುಸಿದು 1 ಗಾಯಗೊಂಡಿದ್ದಾರೆ. ಮುಂಬೈ, ರತ್ನಗಿರಿ, ಪಣಜಿ ಮತ್ತು ಕೊಂಕಣ-ಗೋವಾದಾದ್ಯಂತ ಹಲವಾರು ಇತರ ಸ್ಥಳಗಳು ಜಲಾವೃತವಾಗಿದ್ದು, ಭೂಕುಸಿತ ಮತ್ತು ಇತರ ಮಳೆ-ಸಂಬಂಧಿತ ಅವಘಡಗಳು ಉಂಟಾಗಿವೆ.




