ಬೆಂಗಳೂರು: ಸರ್ಕಾರಿ ವೆಬ್ಸೈಟ್ಗಳು, ಆನ್-ಲೈನ್ ಸೇವೆಗಳು ಮತ್ತು ದತ್ತಾಂಶಗಳ ಸುರಕ್ಷತೆಗಾಗಿ, ಸೈಬರ್ ತಜ್ಞರು ಮತ್ತು ಆಧುನಿಕ ತಂತ್ರಜ್ಞಾನವನ್ನೊಳಗೊಂಡ ದಿನದ 24 ಗಂಟೆಯೂ ಸೇವೆಯಲ್ಲಿರುವಂತೆ ಸೈಬರ್ ಸೆಕ್ಯುರಿಟಿ ಆಪರೇಷನ್ಸ್ ಸೆಂಟರ್ ಸ್ಥಾಪಿಸಲಾಗುವುದು ಎಂದು ಬಜೆಟ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ವ್ಯಾಪಕವಾಗಿದ್ದು, ಈ ವ್ಯವಸ್ಥೆಯ ಸುರಕ್ಷತೆಯೂ ಅತ್ಯಾದ್ಯತೆಯ ವಿಷಯವಾಗಿರುವ ಹಿನ್ನೆಲೆಯಲ್ಲಿ ಈ ಸೈಬರ್ ಸೆಕ್ಯುರಿಟಿ ಆಪರೇಷನ್ ಸೆಂಟರ್ ಸ್ಥಾಪಿಸಲು ನಿರ್ಧರಿಸಲಾಗಿದೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಕೆ-ಸೇಫ್-2 ಯೋಜನೆ ಅಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 125 ಕೋಟಿ ರೂ. ಒದಗಿಸಲಾಗಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಬಹುದಾದ ಅಗ್ನಿ ಅನಾಹುತ ತಡೆಯಲು ಹಾಗೂ ರಕ್ಷಣಾ ಕಾರ್ಯ ನಿರ್ವಹಿಸಲು 90 ಮೀಟರ್ ಎತ್ತರ ತಲುಪಬಲ್ಲ ಏರಿಯಲ್ ಲ್ಯಾಡರ್ ಪ್ಲಾಟ್ಫಾರಂ ವಾಹನ ಖರೀದಿಸಲಾಗಿದೆ ಎಂದು ವಿವರಿಸಲಾಗಿದೆ.
ಹೊಸ ಬಸ್: ಪ್ರಸಕ್ತ ಸಾಲಿನಲ್ಲಿ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಿಗೆ 3526 ಹೊಸ ಬಸ್ಗಳನ್ನು ಸೇರ್ಪಡೆ ಮಾಡಲಾಗುವುದು. ಹೊಸ ಬಸ್ಗಳ ಸೇರ್ಪಡೆಗಾಗಿ ರಾಜ್ಯ ಸರ್ಕಾರ 5೦೦ ಕೋಟಿಗಳ ದೊಡ್ಡ ಪ್ರಮಾಣದ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಈಗಾಗಲೇ ಸಾರಿಗೆ ನಿಗಮಗಳಲ್ಲಿ ವಿದ್ಯುತ್ ಚಾಲಿತ ಬಸ್ಗಳ ಸಂಚಾರ ಆರಂಭಗೊಂಡಿದ್ದು, ಬಿಎಂಟಿಸಿಯಲ್ಲಿ 1311, ಕೆಎಸ್ಆರ್ಟಿಸಿಯಲ್ಲಿ 50 ಬಸ್ಗಳ ಕಾರ್ಯಾಚಾರಣೆ ಪ್ರಾರಂಭಗೊಂಡಿದೆ ಎಂದು ತಿಳಿಸಲಾಗಿದೆ.



