ಚುನಾವಣಾ ಅಖಾಡ ಸಜ್ಜುಗೊಳಿಸಲು ಚುನಾವಣಾ ಆಯೋಗ ಕ್ರಮ

3 years ago

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಿರುವ ಕೇಂದ್ರ ಚುನಾವಣಾ ಆಯೋಗ ಅಧಿಕಾರಿಗಳ ವರ್ಗಾವಣೆಗೆ ಬ್ರೇಕ್ ಹಾಕಿದೆ. ಅಲ್ಲದೆ ಅಧಿಕಾರಿಗಳ ನಿಯೋಜನೆ ಕುರಿತಂತೆ ಕೆಲವು ನಿಯಮಗಳನ್ನು ಪ್ರಕಟಿಸಿದ್ದು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ಕೇಂದ್ರ ಚುನಾವಣಾ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಸ್ಪಷ್ಟ ನಿಯಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದೆ. ಯಾವುದೇ ಒಬ್ಬ ಅಧಿಕಾರಿಯನ್ನು ಅವರ ಸ್ವಂತ ಜಿಲ್ಲೆಗೆ ನಿಯೋಜನೆ ಮಾಡಬಾರದೆಂದು ನಿರ್ದೇಶನ ನೀಡಿದೆ.

ಕಳೆದ ಮೂರು ವರ್ಷಗಳಿಂದ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರೆ ಇಲ್ಲವೇ ನಾಲ್ಕು ವರ್ಷ ಪೂರೈಸಿದ್ದರೆ 2026, ಮೇ 31ಕ್ಕೆ ಕೊನೆಗೊಳ್ಳುವಂತೆ ಬೇರೊಂದು ಜಿಲ್ಲೆಗೆ ವರ್ಗಾವಣೆ ಮಾಡಬೇಕೆಂದು ಆಯೋಗ ತಿಳಿಸಿದೆ.

ಜಿಲ್ಲಾ ಹಂತದ ಅಧಿಕಾರಿಗಳಾದ ಡಿಇಒ, ಡೆಪ್ಯುಟಿ ಡಿಇಒ, ಆರ್‍ಒ/ಎಆರ್‍ಒ, ಇಆರ್‍ಒ, ಎಇಆರ್‍ಒ, ನೋಡಲ್ ಅಧಿಕಾರಿಗಳು ಜೊತೆಗೆ ಎಡಿಎಂ, ಎಸ್‍ಡಿಎಂ, ಎಸಿ, ಜಂಟಿ ಆಯುಕ್ತರು, ತಹಸೀಲ್ದಾರ್, ಬಿಡಿಒ ಸೇರಿದಂತೆ ಮತ್ತಿತರ ಅಧಿಕಾರಿಗಳನ್ನು ಕೂಡ ಅವರವರವ ಜಿಲ್ಲೆಗೆ ನಿಯೋಜನೆ ಮಾಡಬಾರದೆಂದು ಹೇಳಿದೆ.

ಡಿಜಿ, ಡಿಐಜಿ, ಎಸ್‍ಎಸ್‍ಪಿ, ಎಸ್‍ಪಿ, ಹೆಚ್ಚುವರಿ ಎಸ್‍ಪಿ, ಡಿವೈಎಸ್ಪಿ, ಸಿಪಿಐ, ಪಿಎಸ್‍ಐ, ಎಚ್‍ಸಿ, ಪಿಸಿ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಕೂಡ ಈ ನಿಯಮ ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದೆ.

ಪೊಲೀಸ್ ಸಬ್‍ಇನ್‍ಸ್ಪೆಕ್ಟರ್‍ಗಳನ್ನು ಯಾವುದೇ ಕಾರಣಕ್ಕೂ ಅವರ ತವರು ಜಿಲ್ಲೆಗೆ ನಿಯೋಜನೆ ಮಾಡಬಾರದು. ಒಂದು ವೇಳೆ ಅದೇ ಜಿಲ್ಲೆಯಲ್ಲಿ ಮೂರು ವರ್ಷ ಪೂರ್ಣಗೊಂಡಿದ್ದರೆ, ಇಲ್ಲವೇ 4ನೇ ವರ್ಷ ಚಾಲ್ತಿಯಲ್ಲಿದ್ದರೆ ತಕ್ಷಣವೇ ಅವರನ್ನು ಬೇರೊಂದು ಜಿಲ್ಲೆಗೆ ವರ್ಗಾವಣೆ ಮಾಡಬೇಕು.

ಒಂದು ವೇಳೆ ಚಿಕ್ಕ ಜಿಲ್ಲೆಗಳಿದ್ದರೆ ಅಂತಹ ಅಧಿಕಾರಿಯನ್ನು ಪಕ್ಕದ ಜಿಲ್ಲೆಗೂ ವರ್ಗಾವಣೆ ಮಾಡುವಂತೆ ಆಯೋಗ ಸೂಚಿಸಿದೆ. ಆಯಾ ಇಲಾಖೆಯ ಮುಖ್ಯಸ್ಥರು ತಮ್ಮ ತಮ್ಮ ಇಲಾಖೆಯ ಅಧಿಕಾರಿಗಳು ಎಲ್ಲೆಲ್ಲಿ ನಿಯೋಜನೆಗೊಂಡಿದ್ದಾರೆ ಮತ್ತು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು.

ಮೂರು ವರ್ಷ ತವರು ಜಿಲ್ಲೆಯಲ್ಲೇ ಇದ್ದರೆ ಇಲ್ಲವೇ 4ನೇ ವರ್ಷಕ್ಕೆ ಕಾಲಿಟ್ಟಿದ್ದರೆ ಕೇಂದ್ರ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಅಧಿಕಾರಿಗೆ ಮಾಹಿತಿ ಒದಗಿಸಬೇಕೆಂದು ಸೂಚಿಸಿದೆ.

ಚುನಾವಣಾ ವೀಕ್ಷಕರು, ಸಿಇಒ, ಡಿಇಒ, ಆರ್‍ಒಗಳು ವಿಭಾಗವಾರು ಅಕಾರಿಗಳ ನಿಯೋಜನೆ ಕುರಿತಂತೆ ಪರಿಶೀಲನೆ ನಡೆಸಬೇಕು. ಒಂದು ವೇಳೆ ಆಯೋಗದ ನಿರ್ದೇಶನದ ಹೊರತಾಗಿಯೂ ಯಾವುದೇ ಅಧಿಕಾರಿಗಳು ತವರು ಜಿಲ್ಲೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುವುದು ಆಯೋಗದ ಗಮನಕ್ಕೆ ಬಂದರೆ ಅಂಥವರ ಮೇಲೆ ತಕ್ಷಣವೇ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ಟಿದೆ.

ಯಾವುದೇ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದರೆ ಅಂಥವರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲೇಬಾರದೆಂದು ತಾಕೀತು ಮಾಡಿದೆ. ಸೇವಾವಧಿ ಮುಗಿದು 6 ತಿಂಗಳಾಗಿದ್ದರೆ ಅಂಥವರನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಬಹುದು. ಕೇಂದ್ರ ಆಯೋಗದ ಎಲ್ಲ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸೂಚಿಸಿದೆ.

Leave a Reply