ಸತೀಶ್ ಜಾರಕಿಹೊಳಿ ಅವರಿಂದ ಭೋಜನಕೂಟ

4 months ago

ಬೆಳಗಾವಿ: ಅಧಿಕಾರ ಹಸ್ತಾಂತರ ವಿಚಾರವಾಗಿ ಸಿಎಂ ಮತ್ತು ಡಿಸಿಎಂ ಬಣದಲ್ಲಿ ಚಟುವಟಿಕೆಗಳು ತೀವ್ರಗೊಂಡಿರುವ ನಡುವೆಯೇ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕಳೆದ ರಾತ್ರಿ ಸಮಾನ ಮನಸ್ಕ ಹಾಗೂ ವಾಲ್ಮೀಕಿ ಸಮುದಾಯದ ಶಾಸಕರ ಜೊತೆ ಭೋಜನಕೂಟ ನಡೆಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕೆ ಎನ್ ರಾಜಣ್ಣ, ಈ ಭೋಜನಕೂಟ ಕೇವಲ ಸಮುದಾಯದ ಚಟುವಟಿಕೆಗಳ ಬಗ್ಗೆ ಮಾತನಾಡಲು ಆಯೋಜಿಸಿದ್ದ ಸಭೆ ಅಲ್ಲ; ಹಲವಾರು ರಾಜಕೀಯ ವಿಚಾರಗಳನ್ನು ಈ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಸದ್ಯದಲ್ಲಿಯೇ ಅವುಗಳ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಅವರೇ ವಿವರಣೆ ನೀಡಲಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷರ ಅಧಿಕಾರಾವಧಿ ಕುರಿತಂತೆ ಕಳೆದ 2023ರ ಮೇ 18ರಂದು ಎಐಸಿಸಿ ಬಿಡುಗಡೆ ಮಾಡಿರುವ ಪತ್ರವೊಂದನ್ನು ಪ್ರದರ್ಶಿಸಿದ ಅವರು, ಹೈಕಮಾಂಡ್ ಈ ಪತ್ರದಲ್ಲಿ ಹೇಳಿರುವಂತೆ ನಡೆದುಕೊಳ್ಳಬೇಕು ಎಂದರು.

ಅಂದು ಎಐಸಿಸಿ ಬಿಡುಗಡೆ ಮಾಡಿರುವ ಪತ್ರದಲ್ಲಿ ಮುಂದಿನ ಲೋಕಸಭೆ ಚುನಾವಣೆ ಮುಗಿಯುವವರೆಗೆ ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿತ್ತು.ಇದೀಗ ಅದು ಮುಕ್ತಾಯಗೊಂಡಿದ್ದು ಹೈಕಮಾಂಡ್ ಪತ್ರದಲ್ಲಿ ತಿಳಿಸಿರುವಂತೆ ನಿರ್ಧಾರ ಕೈಗೊಳ್ಳಬೇಕು ಎಂದರು.

Leave a Reply