ಬೆಂಗಳೂರು: ಕೆರೆಗೆ ತ್ಯಾಜ್ಯ ನೀರು ಸೇರಬಾರದೆಂಬ ನಿಟ್ಟಿನಲ್ಲಿ ಸುಮಾರು 1.4 ಕೋಟಿ ವೆಚ್ಚದಲ್ಲಿ ಕೆಂಚನಕುಂಟೆ ಬಳಿ ಕೊಳಚೆ ನೀರು ಶುದ್ದೀಕರಣ ಘಟಕ ನಿರ್ಮಾಣ ಮಾಡಲಾಗುವುದೆಂದು ಶಾಸಕ, ಮಾಜಿ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಹುಣಸಮಾರನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಭಾರತೀನಗರ ಗ್ರಾಮದಿಂದ ಕೊಡಗಲಹಟ್ಟಿ ಕೆರೆಗೆ ಸಂಪರ್ಕ ಕಲ್ಪಿಸುವ ಮಳೆ, ಚರಂಡಿ ನೀರು ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆರೆಗೆ ಕಲುಷಿತ ನೀರು ಸೇರಬಾರದೆಂಬ ನಿಟ್ಟಿನಲ್ಲಿ ಕೊಳಚೆ ನೀರು ಶುದ್ದೀಕರಣ ಘಟಕ ಸ್ಥಾಪಿಸಲಾಗುವುದು ಎಂದರು.
ಸುಮಾರು ವರ್ಷಗಳಿಂದ ಮನೆಮನೆಗೆ ಸಂಪರ್ಕ ಕಲ್ಪಿಸಿ ಪ್ರತ್ಯೇಕ ಪೈಪ್ ಲೈನ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಕಲುಷಿತ ನೀರು ಸೇರಿಕೊಂಡು ಹೊರಹೋಗಲು ಜಾಗವಿಲ್ಲದೆ ಕಟ್ಟಿಕೊಂಡು ದುರ್ವಾಸನೆ ಬೀರುತ್ತಿತ್ತು. ಕಾಮಗಾರಿ ಮಳೆ ನೀರು, ಕಲುಷಿತ ನೀರನ್ನು ಹರಿಸಲು ಬೇರೆ ಬೇರೆ ಪೈಪ್ ಲೈನ್ ಕಾಮಗಾರಿ ಮಾಡಲು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಭೂಮಿಪೂಜೆ ನೆರವೇರಿಸಲಾಗಿದೆ. ಭಾರತಿ ನಗರದ ಸರ್ವತೋಮುಖ ಅಭಿವೃದ್ದಿಗಾಗಿ ಸದಾ ನಮ್ಮ ಸಹಕಾರ ಇರುತ್ತದೆ ಎಂದರು.
ಜಿ.ಪಂ. ಮಾಜಿ ಉಪಾಧ್ಯಕ್ಷ ಕೆ.ಅಶೋಕನ್ ಮಾತನಾಡಿ, ಭಾರತಿನಗರದಿಂದ ಕೊಡಗಲಹಟ್ಟಿವರೆಗೆ ಹೊಂದಿಕೊಂಡಂತಿರುವ ಬಡಾವಣೆಗಳಲ್ಲಿ ಒಳಚರಂಡಿ ನೀರು ಕಟ್ಟಿಕೊಂಡು ತುಂಬಾ ಸಮಸ್ಯೆಯಾಗಿತ್ತು. ರಕ್ಷಣೆ ಇಲಾಖೆಯಿಂದ ಅನುಮತಿ ಪಡೆಯುವುದು ಕಷ್ಟದ ಕೆಲಸವಾಗಿತ್ತು. ಈ ಸಮಸ್ಯೆ ಬಗ್ಗೆ ಹಲವಾರು ಬಾರಿ ಮನವಿ ಮಾಡಿದ್ದೆವು. ಆದರೆ ಭದ್ರತಾ ದೃಷ್ಟಿಯಿಂದ ನಿರಾಕರಿಸುತ್ತಿದ್ದರು. ಮೋಹನ್ ಕುಮಾರ್ ಅಧಿಕಾರಿಯಾಗಿ ಬಂದ ನಂತರ ಪರಿಶೀಲಿಸಿ ಅನುಮತಿ ನೀಡಿದ್ದಾರೆ ಎಂದರು.
ಈ ವೇಳೆ ಜಿ.ಪಂ. ಸದಸ್ಯೆ ಸಜಿತಾ ಅಶೋಕನ್, ತಾ.ಪಂ. ಉಪಾಧ್ಯಕ್ಷೆ ಸುಜಾತ ಶ್ರೀನಿವಾಸ್, ಬ್ಯಾಟರಾಯನಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಗೋಪಾಲಗೌಡ, ಡೆಪ್ಯೂಟಿ ಕೆಡರ್ ಮೊಹನ್ ಕುಮಾರ್ ಮಾಜಿ ಅಧ್ಯಕ್ಷರಾದ ಹರೀಶ್, ದಯಾನಂದ್, ಶರಣ್ ಕುಮಾರ್ ಸೇರಿದಂತೆ ಇನ್ನಿತರು ಹಾಜರಿದ್ದರು.




