ಜಾತಿ ಹೆಸರಿನಲ್ಲಿ ರಕ್ಷಣೆ ಪಡೆಯುವ ಹತಾಶ ಪ್ರಯತ್ನ: ಆರ್.ಅಶೋಕ

2 years ago

ಬೆಂಗಳೂರು: ₹4,000 ಕೋಟಿ ಮೌಲ್ಯದ ಮುಡಾ ಭೂಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ತಮ್ಮ ಎಂದಿನ ಶೈಲಿಯಲ್ಲಿ ಜಾತಿ ಹೆಸರಿನಲ್ಲಿ ರಕ್ಷಣೆ ಪಡೆಯುವ ಹತಾಶ ಪ್ರಯತ್ನ ಮಾಡುತ್ತಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.

ನಿನ್ನೆ ಮೈಸೂರಿನಲ್ಲಿ ಮಾತಾಡಿದ್ದ ಸಿಎಂ ಸಿದ್ದರಾಮಯ್ಯ, ನಾನು ಒಬಿಸಿ ಎಂಬ ಕಾರಣದಿಂದಾಗಿ ನನ್ನ ವಿರುದ್ಧ ಪಿತೂರಿ ಮಾಡಲಾಗುತ್ತಿದೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಆರ್.ಅಶೋಕ, ಸಿಎಂ @siddaramaiah ನವರೇ, ತಮ್ಮ ನಾಯಕ @RahulGandhi ಅವರು ‘ಮೋದಿ’ ಉಪನಾಮದ ಬಗ್ಗೆ ನಿಂದನೆ ಮಾಡಿ ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಂಡರಲ್ಲ, ಹಿಂದುಳಿದ ವರ್ಗದ ವ್ಯಕ್ತಿಯೊಬ್ಬ ಎರಡು ಬಾರಿ ಪ್ರಧಾನ ಮಂತ್ರಿ ಆದರಲ್ಲ ಅನ್ನುವ ಹೊಟ್ಟೆ ಉರಿಯಿಂದ ನಿಂದಿಸಿದ್ದಾ? ಎಂದು ಪ್ರಶ್ನಿಸಿದ್ದಾರೆ.

ತಾವು ಮತ್ತು ತಮ್ಮ ಪಟಾಲಂ ದಿನ ಬೆಳಗಾದರೆ ಪ್ರಧಾನಿ ಮೋದಿ ಅವರನ್ನ ಪದೇ ಪದೇ ವೈಯಕ್ತಿಕ ನಿಂದನೆ ಮಾಡುತ್ತೀರಲ್ಲ, ಅದು ಕೂಡ ಹಿಂದುಳಿದ ಸಮುದಾಯಕ್ಕೆ ಸೇರಿದ ಒಬ್ಬ ಚಹಾ ಮಾರುವ ವ್ಯಕ್ತಿ ಮೂರು ಭಾರಿ ಸತತವಾಗಿ ದೇಶದ ಪ್ರಧಾನಿ ಆದರಲ್ಲ ಎನ್ನುವ ದ್ವೇಷದಿಂದಲೇ? ಎಂದು ಕೇಳಿದ್ದಾರೆ.

ತಮ್ಮ ಇಡೀ ಜೀವನವೆಲ್ಲಾ ಅಹಿಂದ ಸಮುದಾಯಗಳ ಬೆನ್ನಿನ ಮೇಲೆ ಸವಾರಿ ಮಾಡಿ ಅಧಿಕಾರ ಅನುಭವಿದ ತಾವು ದಲಿತರಿಗೆ, ಹಿಂದುಳಿದವರಿಗೆ ಮಾಡಿದ್ದಾದರೂ ಏನು? ದಲಿತರ ದುಡ್ಡು ಲೂಟಿ ಹೊಡೆದಿದ್ದು, ದಲಿತರ ಕುರ್ಚಿ ಕಿತ್ತುಕೊಂಡು ಅವರಿಗೆ ಮೋಸ ಮಾಡಿದ್ದು, ಇದಿಷ್ಟೇ ನಿಮ್ಮ ಸಾಧನೆ ಎಂದಿದ್ದಾರೆ.

ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತಮ್ಮ ಪಾಪದ ಕೊಡ ತುಂಬಿದೆ. ಪ್ರಾಯಶ್ಚಿತ ಕಾದಿದೆ ಎಂದಿದ್ದಾರೆ.

Leave a Reply