ಸರ್ವಾಧಿಕಾರಿ, ಕೋಮುವಾದಿ ಬಿಜೆಪಿಯನ್ನು ಸೋಲಿಸಿ: ಸುನೀಲ್ ಕುಮಾರ್ ಬಜಾಲ್

3 years ago

ಸರ್ವಾಧಿಕಾರಿ, ಕೋಮುವಾದಿ ಬಿಜೆಪಿಯನ್ನು ಸೋಲಿಸಿ: ಸುನೀಲ್ ಕುಮಾರ್ ಬಜಾಲ್

ಮಂಗಳೂರು: ಅನೈತಿಕ ದಾರಿಯಲ್ಲಿ ಕರ್ನಾಟಕದ ಜನಮತಗಣನೆಯನ್ನು ಧಿಕ್ಕರಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಕುದುರೆ ವ್ಯಾಪಾರ ನಡೆಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷದ ಆಡಳಿತ ಸಂಪೂರ್ಣ ಜನವಿರೋಧಿಯಾಗಿತ್ತು. ಇದು 40% ಕಮಿಷನ್ ವ್ಯವಹಾರವನ್ನು ಕಾನೂನು ಬದ್ದಗೊಳಿಸಿ ಎಲ್ಲಾ ಪ್ರಜಾಪ್ತಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿದ ಸರ್ವಾಧಿಕಾರಿ ಸರಕಾರವಾಗಿದೆ. ಸರಕಾರದ ಎಲ್ಲಾ ಯಂತ್ರಗಳನ್ನು ದುರುಪಯೋಗಪಡಿಸಿದ್ದಲ್ಲದೆ ಕೋಮುವಾದಿಕರಣಗೊಳಿಸಿ ಕೋಮುಗಲಭೆಗಳಿಗೆ ರಾಜಕೀಯ ಬೇಳೆ ಬೇಯಿಸಿದ ಬಿಜೆಪಿ ಸರಕಾರ ಬೆಲೆಏರಿಕೆ ನಿರುದ್ಯೋಗಕ್ಕೆ ಕಾರಣವಾಗಿದೆ. ಆದ್ದರಿಂದ ಸರ್ವಾಧಿಕಾರಿ, ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕೆಂದು ಸಿಪಿಐ(ಎಂ) ದ.ಕ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಕರೆ ನೀಡಿದರು.

ಮಂಗಳೂರಿನ ಎ.ಕೆ.ಜಿ ಭವನದಲ್ಲಿ ಜರುಗಿದ ಸಿಪಿಐಎಂ ಪಕ್ಷದ ಮಂಗಳೂರು ನಗರ ಮಟ್ಟದ ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ ಕೃಷ್ಣಪ್ಪ ಕೊಂಚಾಡಿ ಮಾತಾಡಿ, ಬಿಜೆಪಿ ಡಬಲ್ ಇಂಜಿನ್ ಸರಕಾರದಡಿಯಲ್ಲಿ ಸಾರ್ವಜನಿಕ ಆಸ್ತಿಗಳನ್ನೆಲ್ಲಾ ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟ ಮಾಡುವ ಮೂಲಕ ಆಗರ್ಭ ಶ್ರೀಮಂತರ ಪರವಾದ ಧೋರಣೆಯನ್ನು ತಳೆದಿದೆ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ 7.8ರಷ್ಟು ದಾಖಲಾಗಿದ್ದು ಇದರಿಂದ ಯುವಜನರ ಬದುಕಲ್ಲಿ ಅತಂತ್ರತೆ ಕಾಡಿದೆ. ಭ್ರಷ್ಟಾಚಾರ ವ್ಯಾಪಕಗೊಂಡಿದ್ದು ಬಿಜೆಪಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಿದ ಹೋರಾಟಗಾರರನ್ನು ದೇಶದ್ರೋಹದ ಪ್ರಕರಣದಡಿ ಬಂಧಿಸುವ, ವಿರೋಧ ಪಕ್ಷದ ನಾಯಕರುಗಳ ಮೇಲೆ ಇಡಿ, ಐಟಿ, ಸಿಬಿಐ ದಾಳಿ ನಡೆಸಿ ಸರಕಾರದ ವಿವಿಧ ಇಲಾಖೆಗಳನ್ನು ದುರುಪಯೋಗಪಡಿಸುವ ಮೂಲಕ ಬಿಜೆಪಿ ಸರಕಾರದ ವಿರುದ್ಧದ ಹೋರಾಟಗಳನ್ನು ಹತ್ತಿಕ್ಕುವ ಪಿತೂರಿಯನ್ನು ನಡೆಸಿದೆ. ಈ ಹಿನ್ನಲೆಯಲ್ಲಿ ಜನ ಸಮಾನ್ಯರು, ಬಡವರು ಬದುಕುವ ಹಕ್ಕುಗಳೆನ್ನೆಲ್ಲ ಕಸಿದುಕೊಂಡು ಸರ್ವಾಧಿಕಾರಿ ದೋರಣೆಯನ್ನು ಜಾರಿಗೊಳಿಸಿದೆ. ಇಂತಹ ಜನವಿರೋಧಿ ಆಡಳಿತದ ವಿರುದ್ದ ಪ್ರತಿರೋಧ ದಾಖಲಿಸಲು ಈ ಬಾರಿ ಬಿಜೆಪಿಯನ್ನು ಸೋಲಿಸಲು ತೊಡಗಿಸಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಬಿ.ಕೆ ಇಮ್ತಿಯಾಜ್, ಜಯಂತಿ ಬಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ ಬಾಲಕೃಷ್ಣ ಶೆಟ್ಟಿ ವಹಿಸಿದ್ದರು. ಸಿಪಿಐಎಂ ಮಂಗಳೂರು ನಗರ ಕಾರ್ಯದರ್ಶಿ ಸಂತೋಷ್ ಬಜಾಲ್ ಸಭೆಯಲ್ಲಿ ಪ್ರಾಸ್ತಾವಿಕ ಮಾತನ್ನಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply