ದರ್ಶನ್ ಜಾಮೀನು ರದ್ದು ಅರ್ಜಿ: ವಿಚಾರಣೆಗೆ ಸುಪ್ರೀಂ ಕೋರ್ಟ್ ನಲ್ಲಿ ದಿನಾಂಕ ನಿಗದಿ

1 year ago

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಗೆ ನೀಡಿರುವ ಜಾಮೀನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯು ಜನವರಿ 24ರಂದು ನಡೆಯಲಿದೆ. ಒಂದೊಮ್ಮೆ ಜಾಮೀನು ರದ್ದಾದರೆ ದರ್ಶನ್ ಮತ್ತೆ ಜೈಲು ಸೇರಬೇಕಾಗುತ್ತದೆ.

ಜೂನ್ 11ರಂದು ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದರು. ಆ ಬಳಿಕ ಹಲವು ತಿಂಗಳು ಜೈಲಿನಲ್ಲಿ ಇದ್ದರು. ಕೆಳಹಂತದ ಕೋರ್ಟ್ನಲ್ಲಿ ಅವರ ಜಾಮೀನು ಅರ್ಜಿ ವಜಾ ಆಯಿತು. ಆ ಬಳಿಕ ಹೈಕೋರ್ಟ್ನಲ್ಲಿ ಅನಾರೋಗ್ಯದ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದ ಅವರು ನಂತರ ಪೂರ್ಣ ಪ್ರಮಾಣದ ಜಾಮೀನು ಪಡೆದುಕೊಂಡರು. ದರ್ಶನ್ ಜೊತೆ ಪವಿತ್ರಾಗೌಡ, ನಾಗರಾಜ್, ಲಕ್ಷ್ಮಣ್, ಅನುಕುಮಾರ್, ಜಗದೀಶ್ ಮತ್ತು ಪ್ರದೋಶ್ ಕೂಡ ಜಾಮೀನು ಪಡೆದಿದ್ದಾರೆ. ಇದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ.

ಸುಪ್ರೀಂಕೋರ್ಟ್ನಲ್ಲಿ ಜ.24ರಂದು ಅರ್ಜಿ ವಿಚಾರಣೆ ನಡೆಯಲಿದೆ. ದರ್ಶನ್, ಪವಿತ್ರಾ ಸೇರಿ 7 ಆರೋಪಿಗಳ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಜನವರಿ 6ರಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈಗ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ.

ಕಳೆದ ಡಿಸೆಂಬರ್ನಲ್ಲಿ ಹೈಕೋರ್ಟ್ನಿಂದ ಆರೋಪಿಗಳು ಜಾಮೀನು ಪಡೆದಿದ್ದರು. ಪೊಲೀಸರು ಮೇಲ್ಮನವಿ ಸಲ್ಲಿಸಿರುವುದರಿಂದ ಏಳು ಆರೋಪಿಗಳಿಗೆ ಮತ್ತೆ ಕಂಟಕ ಶುರುವಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ಗೆ ರಿಲೀಫ್ ಸಿಗುತ್ತಾ ನೋಡಬೇಕಿದೆ.

ಹೈಕೋರ್ಟ್ನಲ್ಲಿ ಈ ಮೊದಲು ಸರ್ಕಾರಿ ಪರ ವಕೀಲರಾಗಿ ಪ್ರಸನ್ನ ಕುಮಾರ್ ಅವರು ವಾದ ಮಂಡನೆ ಮಾಡಿದ್ದರು. ಸುಪ್ರೀಂ ಕೋರ್ಟ್ಗೆ ವಕೀಲರಾಗಿ ಅನಿಲ್ ಸಿ. ನಿಶಾನಿ ನೇಮಕ ಮಾಡಿ, ರಾಜ್ಯ  ಸರ್ಕಾರ ಆದೇಶಿಸಿದೆ. ಅವರು ದರ್ಶನ್ ವಿರುದ್ಧ ವಾದ ಮಂಡನೆ ಮಾಡಲಿದ್ದಾರೆ.

Leave a Reply