ಮಳೆ ನೀರು ಚರಂಡಿಗೆ ತಡೆಗೋಡೆ ನಿರ್ಮಿಸಲು ವಿಳಂಬ ನೀತಿ ಅನುಸರಿಸುವ ಮನಪಾ
ಮಂಗಳೂರು: ಅಳಪೆ ಉತ್ತರ ವಾರ್ಡಿನ ಕೊಡಕ್ಕಲ್ ಪ್ರದೇಶದ ದಲಿತ ಸಮುದಾಯಕ್ಕೆ ಸೇರಿದ ಲೀಲಾರವರ ಮನೆಯ ಎರಡೂ ಭಾಗದಲ್ಲಿ ಮಳೆನೀರು ಹರಿಯುವ ರಾಜಕಾಲುವೆಗೆ ತಡೆಗೋಡೆಯನ್ನು ಕೂಡಲೇ ನಿರ್ಮಿಸಬೇಕೆಂದು ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ ಮನಪಾ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ಜರುಗಿತು._
ಪ್ರತೀ ವರ್ಷವೂ ಸುರಿಯುವ ವಿಪರೀತ ಮಳೆಗೆ ರಾಜಕಾಲುವೆಗಳು ಭರ್ತಿಗೊಂಡು ಕೃತಕ ನೆರೆ ಉಂಟಾಗುತ್ತಿದೆ.ಕಳೆದ ವರ್ಷದ ಮಳೆಗೆ ಲೀಲಾರವರ ಮನೆ ಮುಳುಗಿದ್ದು,ಅಕ್ಕಪಕ್ಕದ ಮನೆಗಳಿಗೂ ಭಾರೀ ಹಾನಿ ಉಂಟಾಗಿತ್ತು. ಆ ಸಂದರ್ಭದಲ್ಲಿ ತಡೆಗೋಡೆ ನಿರ್ಮಿಸುವುದಾಗಿ ಭರವಸೆ ನೀಡಿದ ಮನಪಾ ಇವತ್ತಿನವರೆಗೂ ಚಕಾರ ಶಬ್ದ ಎತ್ತಿಲ್ಲ. ಏತನ್ಮದ್ಯೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕೂಡಲೇ ತಡೆಗೋಡೆ ನಿರ್ಮಿಸದಿದ್ದರೆ ಮುಂದಿನ ಮಳೆಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು DHS ಆತಂಕ ವ್ಯಕ್ತಪಡಿಸಿದೆ.
DHS ನ ಉನ್ನತ ಮಟ್ಟದ ನಿಯೋಗವೊಂದು ಮನಪಾ ಆಯುಕ್ತರನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿ ಗಂಭೀರವಾಗಿ ಚರ್ಚಿಸಿತು.
ಪ್ರತಿಭಟನೆಯಲ್ಲಿ DHS ನ ಮುಖಂಡರಾದ ಕೃಷ್ಣ ತಣ್ಣೀರುಬಾವಿ,ಯೋಗೀಶ್ ಜಪ್ಪಿನಮೊಗರು, ಸುನಿಲ್ ಕುಮಾರ್ ಬಜಾಲ್,ಸಾಮಾಜಿಕ ಹೋರಾಟಗಾರರಾದ ಪ್ರಮೀಳಾ ದೇವಾಡಿಗ,ಆಸುಂತ ಡಿಸೋಜ, ಮಂಜುಳಾ ನಾಯಕ್, ಸಮರ್ಥ ಭಟ್, ಶೋಭಾ ಕೇಶವ್ ಪಡೀಲ್, ಕಾರ್ಮಿಕ ಮುಖಂಡರಾದ ಭಾರತಿ ಬೋಳಾರ, ವಿದ್ಯಾರ್ಥಿ ನಾಯಕರಾದ ವಿನೀತ್ ದೇವಾಡಿಗ, ರೇವಂತ್ ಕದ್ರಿ, ಶಾಹಿದ್ ಮುಂತಾದವರು ಭಾಗವಹಿಸಿದ್ದರು.




