ಹೈಕೋರ್ಟ್ ಮಧ್ಯಂತರ ಆದೇಶದಂತೆ ವಿದ್ಯಾರ್ಥಿ ವೇತನ ಪಾವತಿ CWFI ಸ್ವಾಗತ

2 years ago

ಕಲ್ಯಾಣ‌ ಮಂಡಳಿಯಲ್ಲಿನ ಭ್ರಷ್ಟಾಚಾರ ಹಾಗೂ ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ ಮುಂದಿನ ಹೋರಾಟಕ್ಕೆ ಸಿದ್ದತೆ

ಬೆಂಗಳೂರು: ಹೈಕೋರ್ಟ್ ‌ಮಧ್ಯಂತರ ಆದೇಶದನ್ವಯ  ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯು, ಕಟ್ಟಡ ನಿರ್ಮಾಣ ಕಾರ್ಮಿಕರ ಇಬ್ಬರು ಮಕ್ಕಳಿಗೆ ದಂಡಸಹಿತ ಶೈಕ್ಷಣಿಕ ಧನಸಹಾಯ ಪಾವತಿ‌ಸಿರುವ ಕ್ರಮವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಸ್ವಾಗತಿಸಿದೆ.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್  (ಸಿಐಟಿಯು) ಮತ್ತು ಇತರೆ ನಾಲ್ಕು ಜನರು  ಹೈಕೋರ್ಟ್ ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ಏಪ್ರಿಲ್ 23 ರಂದು ನಡೆಸಿದ್ದ‌‌ ನ್ಯಾಯಮೂರ್ತಿ ‌ಶ್ರೀ ನಾಗಪ್ರಸನ್ನ ಅವರ ಏಕಸದಸ್ಯ ಪೀಠ   ಎಲ್.ಎಲ್.ಬಿ ಹಾಗೂ ಎಂ.ಬಿ.ಎ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯರಿಗೆ 2021 ರ ಅಧಿಸೂಚನೆ ಅನ್ವಯ ಶೈಕ್ಷಣಿಕ ‌ಧನ ಸಹಾಯ ಪಾವತಿಯಿಸಲು‌‌‌ ಆದೇಶಿಸಿತ್ತು ಮತ್ತು ಮಕ್ಕಳನ್ನು ನ್ಯಾಯಾಲಯ ಮೆಟ್ಟಿಲು ಹತ್ತುವಂತೆ ಮಾಡಿದ‌ ಕಲ್ಯಾಣ ಮಂಡಳಿಗೆ ತಲಾ‌ ರೂ 25 ಸಾವಿರ ದಂಡ ವಿಧಿಸಿ ನಾಲ್ಕು ವಾರದೊಳಗೆ ಪಾವತಿಸಲು ಆದೇಶಿಸಿತ್ತು ಆದರೆ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಕಲ್ಯಾಣ ಮಂಡಳಿ ವಿಳಂಬ ಧೋರಣೆ ಅನುಸರಿಸಿತ್ತು.

ಜೂನ್‌ 7 ರಂದು ಈ ರಿಟ್ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ  ನ್ಯಾಯಮೂರ್ತಿಗಳು  ಬಡ ಕಾರ್ಮಿಕರ‌ ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ ನೀಡಲು ಮಾಡಿದ ಆದೇಶ‌ವನ್ನು ಜಾರಿಗೊಳಿಸದ ಕಲ್ಯಾಣ ಮಂಡಳಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು. ಬಿಸಿಲು ಮಳೆಯಲ್ಲಿ ಶ್ರಮಪಡುವ ಕಟ್ಟಡ ಕಾರ್ಮಿಕರ ದುಡಿಮೆಯಿಂದಾಗಿ ಸಾವಿರಾರು ಕೋಟಿ ಸೆಸ್ ಸಂಗ್ರಹವಾಗುತ್ತಿದೆ ಅದನ್ನು ಅವರ‌ ಮಕ್ಕಳ ವಿದ್ಯಾಬ್ಯಾಸಕ್ಕೆ ಖರ್ಚು‌ಮಾಡಬೇಕೆ ಹೊರತು ಅಧಿಕಾರಿಗಳ ಓಡಾಟ‌ ಮತ್ತು ಐಶಾರಾಮಿ ಜೀವನಕ್ಕಲ್ಲ ಎಂದು‌ ಮಂಡಳಿ ನಡೆಯನ್ನು ಟೀಕಿಸಿದ್ದರು. ಅಲ್ಲದೆ ಮಂಡಳಿಯಲ್ಲಿ ಸಂಗ್ರಹವಿರುವ ರೂ 6700 ಕೋಟಿ ಹಣದ ವಿವರಗಳನ್ನು ಪೀಠದ‌ ಮುಂದೆ ಮಂಡಳಿಸಲು ತಾಕೀತು ಮಾಡಿ ವಿಚಾರಣೆಯನ್ನು ಮೂಂದೂಡಿದ್ದರು

ಪುನಃ ಜೂನ್ 25ರಂದು ವಿಚಾರಣೆ ಆರಂಭಗೊಂಡಾಗ ರಾಜ್ಯ ಸರ್ಕಾರ ಹಾಗೂ ಕಲ್ಯಾಣ ಮಂಡಳಿ ಪ್ರತಿನಿಧಿಸಿ  ಸರ್ಕಾರದ ಅಡ್ವೋಕೇಟ್ ಜನರಲ್  ಶಶಿಕಿರಣ ಶೆಟ್ಟಿ ಹಾಜರಾಗಿದ್ದರು ಅವರು ಕಲ್ಯಾಣ ಮಂಡಳಿಯು ಈಗಾಗಲೇ 6 ಲಕ್ಷ ವಿದ್ಯಾರ್ಥಿಗಳಿಗೆ ರೂ 500 ಕೋಟಿ ಶೈಕ್ಷಣಿಕ ಧನ ಸಹಾಯಧನ ವಿತರಿಸಿದೆ ಅಲ್ಲದೆ ಮಂಡಳಿಯಲ್ಲಿ 19 ಇತರೆ ಕಲ್ಯಾಣ ಕಾರ್ಯಕ್ರಮಗಳನ್ನು ಕಟ್ಟಡ ಕಾರ್ಮಿಕರಿಗಾಗಿ ಜಾರಿಗೊಳಿಸುತ್ತಿದೆ ಆದ್ದರಿಂದ 2021 ಅಧಿಸೂಚನೆ ಅನ್ವಯ ಶೈಕ್ಷಣಿಕ ಧನಸಹಾಯ ನೀಡಲು‌ ಕಷ್ಟವಾಗಲಿದೆ ಎಂದು ವಾದಿಸಿದರು. ಆದರೆ ಅವರ ವಾದವನ್ನು ಒಪ್ಪದ ನ್ಯಾಯಮೂರ್ತಿಗಳು ರಾಜ್ಯದಲ್ಲಿ ನಿರ್ಮಾಣ ಕಾಮಗಾರಿಗಳಿಂದ ಸಂಗ್ರಹವಾಗುವ ಸೆಸ್ ಹಣ ಕಾರ್ಮಿಕರ ಕಲ್ಯಾಣ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕ್ಕಾಗಿ ಖರ್ಚು‌ಮಾಡಬೇಕಲ್ಲವೇ ? ಎಂದು ಪ್ರಶ್ನಿಸಿದ್ದರು.

ಇದಕ್ಕೆ ಪೂರಕವೆಂಬಂತೆ ಅರ್ಜಿದಾರರ ಪರವಾಗಿ ಹಾಜರಾಗಿದ್ದ ವಕೀಲ ಆದಿತ್ಯ ಚಟರ್ಜಿ 2019 ರ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ)ಯ ವರದಿಯು ಕರ್ನಾಟಕ ಕಟ್ಟಡ ನಿರ್ಮಾಣ ಕಲ್ಯಾಣ ಮಂಡಳಿಯು ತನ್ನ ಆಡಳಿತಾತ್ಮಕ ವೆಚ್ಚವನ್ನು ಕಾನೂನು ನಿಗದಿಪಡಿಸಿದ ಶೇ‌5 ರಷ್ಟನ್ನು ಮೀರಿ ಶೇ 9. ರಿಂದ ಶೇ 72 ರಷ್ಟು ಹೆಚ್ಚಾಗಿ ಖರ್ಚು ಮಾಡಿದೆ ಎಂದು ಸಿಎಜಿ ವರದಿಯ ಅಂಶವನ್ನು ಉಲ್ಲೇಖಿಸಿದರು ಅಲ್ಲದೆ ಹಿಂದೆ ಘಟನೋತ್ತರ ಅನುಮೋದನೆ‌ ಮೂಲಕ ಮಂಡಳಿಯು ಇನ್ನೋವಾ‌ ಕಾರುಗಳನ್ನು ಖರೀದಿಸುವ‌ ಮೂಲಕ ಮಂಡಳಿ ನಿಧಿಯನ್ನು ಅನಗತ್ಯವಾಗಿ ಖರ್ಚು ಮಾಡಿರುವ ಅಂಶಗಳತ್ತ ಬೆಳಕು ಚೆಲ್ಲಿದರು ಮತ್ತು ಇದುವರೆಗೂ ಮಧ್ಯಂತರ ಆದೇಶದಂತೆ ಇಬ್ಬರು ವಿದ್ಯಾರ್ಥಿನಿಯರಿಗೆ ಹಣ ಪಾವತಿ ‌ಮಾಡಿಲ್ಲ ಎನ್ನುವ ಸಂಗತಿಯನ್ನು ಪೀಠದ ಗಮನಕ್ಕೆ ತಂದಿದ್ದರು.

ಈ ಬಗ್ಗೆ ಕಲ್ಯಾಣ ಮಂಡಳಿ ಪರವಾಗಿ ಹಾಜರಿದ್ದ ವಕೀಲರು ಇಬ್ಬರು ವಿದ್ಯಾರ್ಥಿನಿಯರಿಗೆ ಕೋರ್ಟ್ ಆದೇಶದಂತೆ ರೂ 60000 ಹಾಗೂ ರೂ 55000 ಹಣ ಪಾವತಿಸಿದೆ ಎಂದು ಹೇಳಿ ಅದರ ನಕಲು ಪ್ರತಿಯನ್ನು ಅರ್ಜಿದಾರ ವಕೀಲರಿಗೆ ನೀಡಿದ್ದರು. ಆದರೆ ನೀವು ಇಬ್ಬರೂ ವಿದ್ಯಾರ್ಥಿನಿಯರಿಗೆ ಧನ‌ಸಹಾಯ ಪಾವತಿಸಿದ ಮಾತ್ರಕ್ಕೆ ಈ ವಿಚಾರಣೆ ಇಲ್ಲಿಗೆ ನಿಲ್ಲುವುದಿಲ್ಲ ಎನ್ನುವುದನ್ನು ಸ್ಷಷ್ಟಪಡಿಸಿದ  ಪೀಠ ಕಲ್ಯಾಣ‌ ಮಂಡಳಿಯಲ್ಲಿರುವ ಪ್ರತಿಯೊಂದು ರುಪಾಯಿಯು ಬಡ ಕಾರ್ಮಿಕರ ಕಲ್ಯಾಣ ಕಲ್ಯಾಣ ಮತ್ತು‌ ಮಕ್ಕಳ ಶೈಕ್ಷಣಿಕ ಬದುಕಿಗೆ ಖರ್ಚು‌ ಮಾಡಬೇಕು ಹೀಗಾಗಿ ಕಲ್ಯಾಣ ಮಂಡಳಿಯು ಮಾಡುತ್ತಿರುವ ಪ್ರತಿಯೊಂದು ಖರ್ಚಿನ ಲೆಕ್ಕವನ್ನು ನ್ಯಾಯಾಲಯದ ಮುಂದೆ ಮಂಡಿಸಲು ಆದೇಶಿಸಿ ಮುಂದಿನ ವಿಚಾರಣೆಯನ್ನು ಜುಲೈ 26 ಕ್ಕೆ ಮುಂದೂಡಿದೆ.

ಹೋರಾಟಕ್ಕೆ ಸಿಕ್ಕ ಜಯ: ಹೈಕೋರ್ಟ್ ನ‌ ಮಧ್ಯಂತರ ಆದೇಶದಂತೆ ರಿಟ್ ಅರ್ಜಿ ಸಲ್ಲಿಸಿದ ಇಬ್ಬರು ಬಡ ಕಟ್ಟಡ ಕಾರ್ಮಿಕರ ವಿದ್ಯಾರ್ಥಿನಿಯರಿಗೆ ಇಂದು ಮಂಡಳಿಯು ರಿಜಿಸ್ಟರ್ ಅಂಚೆ ಮೂಲಕ ರೂ 60000-00 ಹಾಗೂ ರೂ 55000-00 ಹಣವನ್ನು ತಲುಪಿಸಿದೆ. ಇದು ನೈಜ ಕಟ್ಟಡ ನಿರ್ಮಾಣ ಕಾರ್ಮಿಕರು ಕಾರ್ಮಿಕ ಸಂಘಟನೆ ಮೂಲಕ ನಡೆಸಿದ ಕಾನೂನು ಹೋರಾಟಕ್ಕೆ ಸಿಕ್ಕ ಮೊದಲ ಅತಿ ದೊಡ್ಡ ಗೆಲುವಾಗಿದೆ ಇದಕ್ಕೆ ಶ್ರಮಿಸಿದ ಎಲ್ಲರಿಗೂ ಕರ್ನಾಟಕ ರಾಜ್ಯ ‌ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಕೃತಜ್ಞತೆಗಳನ್ನು ಸಲ್ಲಿಸಿದೆ.

ಅದೇ ವೇಳೆಗೆ ಕಲ್ಯಾಣ‌ ಮಂಡಳಿಯ ಅಧ್ಯಕ್ಷರು ಹಾಗು  ಕಾರ್ಮಿಕ ಸಚಿವರಾಗಿರುವ ಶ್ರೀ ಸಂತೋಷ ಲಾಡ  ಅವರು ಮಂಡಳಿಯಲ್ಲಿ ಸೆಸ್ ಸಂಗ್ರಹ ಹೆಚ್ಚಳ,ನಕಲಿ ಕಾರ್ಡುದಾರರ ಹಾವಳಿ ತಡೆಗಟ್ಟಲು ನಡೆಸಿರುವ ಕ್ರಮಗಳನ್ನು ಸ್ವಾಗತಿಸುವಾಗಲೇ ಮತ್ತೊಂದು‌ ಕಡೆ ನೈಜ ಕಟ್ಟಡ ‌ಕಾರ್ಮಿಕರು ಹಾಗೂ ಅವರ ಅವಲಂಬಿತರು ಕಳೆದ ಒಂದು ವರ್ಷದಿಂದ ವಿವಿಧ ಸೌಲಭ್ಯಗಳಿಂದ ದೊಡ್ಡ‌ಸಂಖ್ಯೆಯಲ್ಲಿ ವಂಚಿತರಾಗುತ್ತಿದ್ದಾರೆ. ಈ‌ ಬಗ್ಗೆ ಕಾರ್ಮಿಕ ಸಂಘಟನೆಗಳು ಹತ್ತಾರು ಬಾರಿ ಅವರನ್ನು ಭೇಟಿಯಾಗಿ ಅಹವಾಲುಗಳನ್ನು ಸಲ್ಲಿಸಿದ್ದರೂ ಸಮಸ್ಯೆಗಳು ಇತ್ಯರ್ಥ ವಾಗಿಲ್ಲ ಎನ್ನುವ ಅಂಶಗಳತ್ತ ಗಮನಹರಿಸಲು ಆಗ್ರಹಿಸಿದೆ.

ಆದರೆ ಸಚಿವರು ಸೇರಿ ಮಂಡಳಿ ಅಧಿಕಾರಿಗಳು ದೇಶದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕ‌ರ ಕಾನೂನು ಹಾಗೂ ಕಲ್ಯಾಣ ಮಂಡಳಿ ಜಾರಿಗೆ ಪ್ರಮುಖ ಪಾತ್ರವಹಿಸಿದ ಸಂಘಟನೆಗಳನ್ನೇ ದೂರ ಮಾಡುವ  ವ್ಯವಸ್ಥಿತ ಪ್ರಯತ್ನಗಳನ್ನು ಕೈಬಿಡಬೇಕು. ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಸೌಲಭ್ಯಗಳನ್ನು ನೀಡುವಲ್ಲಿ, ವಿದ್ಯಾರ್ಥಿ ವೇತನ ವಿತರಣೆಯಲ್ಲಿ ,ವಿವಿಧ ಬಗೆಗೆ ಟೆಂಡರ್ ಗಳನ್ನು ನೀಡುವಲ್ಲಿ,ನೇಮಕಾತಿಗಳಲ್ಲಿ  ವ್ಯಾಪಕ ಭ್ರಷ್ಟಾಚಾರಗಳು ನಡೆಯುತ್ತಿದ್ದು ಅದರಲ್ಲಿ ಅಧಿಕಾರಿಗಳು ನೇರವಾಗಿ ಶಾಮೀಲಾಗಿದ್ದಾರೆ ನಿಜವಾಗಿಯೂ ಕಾರ್ಮಿಕರ ಬಗ್ಗೆ ಸಚಿವರಿಗೆ ಕಾಳಜಿ ಇದ್ದಲ್ಲಿ ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಈ ಕುರಿತಾಗಿ ನಮ್ಮ‌ಬಳಿ ಲಭ್ಯವಿರುವ ದಾಖಲಾತಿಗಳನ್ನು ಮುಂದಿನ ವಿಚಾರಣೆ ವೇಳೆಯಲ್ಲಿ ಘನ‌ ನ್ಯಾಯಾಲಯದ‌ ಮುಂದೆ ಮಂಡಿಸಲಾಗುವುದು ಆ ಮೂಲಕ ಕಲ್ಯಾಣ‌ ಮಂಡಳಿಯನ್ನು ಭ್ರಷ್ಟ‌ ಅಧಿಕಾರಿಗಳಿಂದ ರಕ್ಷಿಸಲು ಹಾಗೂ ನೈಜ ಕಾರ್ಮಿಕರಿಗೆ ನ್ಯಾಯಬದ್ದ ಹಕ್ಕುಗಳನ್ನು ದೊರಕಿಸುವ ಪ್ರಯತ್ನಗಳನ್ನು ಕರ್ನಾಟಕ ರಾಜ್ಯ ‌ಕಟ್ಟಡ‌ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಇತರೆ‌ ಕಾರ್ಮಿಕ ಸಂಘಟನೆಗಳೊಂದಿಗೆ ಸೇರಿ ‌ಮುಂದುವರೆಸಲು ನಿರ್ಧರಿಸಿದೆ.ಜತೆಗೆ ಇದೆ ಜೂನ್ 28 ರಿಂದ ಜುಲೈ 3 ರವರಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‌ಪ್ರತಿಭಟನೆ‌ ನಡೆಸಲಿದೆ ಮತ್ತು ಆಗಸ್ಯ ಮೊದಲವಾರದಲ್ಲಿ ಸಾವಿರಾರು ಕಾರ್ಮಿಕರಿಂದ ಈ ವಿಷಯವಾಗಿ ಮಧ್ಯಪ್ರವೇಶಿಸಲು ಮುಖ್ಯಮಂತ್ರಿ ಮನೆ ಚಲೋ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದೆ.

Leave a Reply