ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ಆರೋಪ ಪ್ರಕರಣ: ವಿಚಾರಣೆ ಮುಂದೂಡಿಕೆ

1 year ago

ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಶಾಸಕ ಸಿ ಟಿ ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಆರೋಪದಲ್ಲಿ ಸಲ್ಲಿಕೆಯಾಗಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ಸಿ.ಟಿ. ರವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು. ಸಿ. ಟಿ. ರವಿ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಅರ್ಜಿಯ ಸಂಬಂಧ ಲಿಖಿತ ಆಕ್ಷೇಪಣೆ ಸಲ್ಲಿಸಲಾಗಿದ್ದು, ಸದನದಲ್ಲಿ ಸದಸ್ಯರಿಗೆ ಸಂಪೂರ್ಣವಾದ ವಿನಾಯಿತಿ ಇರುತ್ತದೆ. ಸದನದಲ್ಲಿ ನಡೆದ ವಿಚಾರವನ್ನು ಆಧರಿಸಿ ಕ್ರಿಮಿನಲ್ ಅಥವಾ ಸಿವಿಲ್ ಪ್ರಕರಣ ಹೂಡಲಾಗದು. ಈ ಸಂಬಂಧ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ನೀಡಲಾಗಿದ್ದು, ಅವರು ರೂಲಿಂಗ್ ನೀಡಿದ್ದಾರೆ. ಹೀಗಾಗಿ ಎಫ್ಐಆರ್ ದಾಖಲಿಸಲು ಅವಕಾಶವಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಸದನ ನಡೆಯಲಿ, ನಡೆಯದಿರಲಿ, ಸದಸ್ಯರು ಭಾಗಿಯಾಗಲಿ ಭಾಗಿಯಾಗದಿರಲಿ ಅವರು ಸದನದಲ್ಲಿ ಮಾತನಾಡುವ ಎಲ್ಲ ಮಾತುಗಳಿಗೂ ರಕ್ಷಣೆ ಇರಲಿದೆ. ಅರ್ಜಿದಾರ ಸಿ.ಟಿ ರವಿ ಮತ್ತು ದೂರುದಾರರಾದ ಲಕ್ಷ್ಮೀ ಹೆಬ್ಬಾಳ್ಕರ್ ಸದನದ ಸದಸ್ಯರಾಗಿದ್ದಾರೆ. ಅವರ ಬಗ್ಗೆ ಅರ್ಜಿದಾರರಿಗೆ ಗೌರವ ಇದೆ ಎಂದರು.

ಸರ್ಕಾರದ ಪರ ವಾದ ಮಂಡಿಸಿದ ಎಸ್ ಟಿ ಪಿ ಬೆಳ್ಳಿಯಪ್ಪ, ಘಟನೆ ಸಂಬಂಧ ನೀಡಿರುವ ವರದಿಯಲ್ಲಿ ಸದನ ನಡೆಯುತ್ತಿರಲಿಲ್ಲ. ಆದರೆ, ಅವಹೇಳನಕಾರಿ ಪದ ಬಳಕೆ ಆಗಿದೆ ಎಂದಷ್ಟೇ ತಿಳಿಸಿದ್ದಾರೆ ಎಂದು ವಾದ ಮಂಡಿಸಿದರು.

ವಿಚಾರಣೆ ವೇಳೆ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪರ ವಕೀಲರ ಮನವಿಯ ಮೇರೆಗೆ ವಿಚಾರಣೆಯನ್ನು ಫೆ.24ಕ್ಕೆ ಮುಂದೂಡಿತು.

Leave a Reply