ಎಲ್ಲ ಜಿಲ್ಲೆಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಸ್ಥಬ್ಧಚಿತ್ರ ಮೆರವಣಿಗೆ: ಪ್ರಿಯಾಂಕ್ ಖರ್ಗೆ

2 years ago

ಬೆಂಗಳೂರು: ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಒಂದು ತಿಂಗಳ ಕಾಲ ಸಂಚರಿಸಲಿರುವ “ಸಂವಿಧಾನ ಜಾಗೃತಿ ಜಾಥಾ ಸ್ಥಬ್ಧಚಿತ್ರ” ಮೆರವಣಿಗೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸಮಾಜ ಕಲ್ಯಾಣ ಸಚಿವ  DR HC Mahadevappa  ಅವರೊಂದಿಗೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ ಸೂಕ್ತ ನಿರ್ದೇಶನ ನೀಡಿದ ಅವರು ಮಾತನಾಡಿ, ಜಿಲ್ಲಾ ಕೇಂದ್ರಗಳಿಂದ ಹೊರಡಲಿರುವ ಈ ಜಾಥಾವು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಮತ್ತು ಇತರೆ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಜಿಲ್ಲೆಯಲ್ಲಿ ಸಂಚರಿಸುವಂತೆ, ಜಿಲ್ಲಾಡಳಿತವು ಮಾರ್ಗನಕ್ಷೆ ರೂಪಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಸಂವಿಧಾನ ರೂಪಿಸಿ 75 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರ ಇಡೀ ರಾಜ್ಯದ ಬಹುತೇಕ ಗ್ರಾಮಗಳನ್ನು ಒಳಗೊಂಡಂತೆ ಕಾರ್ಯಕ್ರಮ ರೂಪಿಸಲಾಗಿದೆ. ಸಂವಿಧಾನದ ಮಹತ್ವ ಹಾಗೂ ಈ ದೇಶದ ಜನತೆಗೆ ಸಂವಿಧಾನ ನೀಡಿರುವ ಹಕ್ಕುಗಳ ಕುರಿತಂತೆ ರಾಜ್ಯದ ಮಹಿಳೆಯರು, ಯುವಜನರು ಹಾಗೂ ನಾಗರಿಕರಿಗೆ ಬಹು ಮಾಧ್ಯಮಗಳ ಮೂಲಕ ಅರಿವು ಮೂಡಿಸಲು ಈ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಸಂವಿಧಾನ ಪೀಠಿಕೆಯ ಮುದ್ರಿತ ಪ್ರತಿಗಳ ವಿತರಣೆ, ಬಸವಣ್ಣನವರ ಸಂದೇಶ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ ಅವರ ವಿಚಾರಧಾರೆಗಳ ಬಗ್ಗೆ ತಜ್ಞರಿಂದ ಭಾಷಣ, ಜಾನಪದ ನೃತ್ಯ ಪ್ರದರ್ಶನ ಹಾಗೂ  ಜಾಥದಲ್ಲಿ ಸಂಚರಿಸಲಿರುವ ಎಲ್.ಇ.ಡಿ ವಾಹನದ ಮೂಲಕ ವಿಡಿಯೋ ಪ್ರದರ್ಶಿಸುವ ಮೂಲಕ ನಮ್ಮ ಪರಂಪರೆಯನ್ನು ಅನಾವರಣಗೊಳಿಸಲಾಗುತ್ತದೆ ಎಂದು ಹೇಳಿದರು.

ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಸ್ಥಬ್ಧಚಿತ್ರಗಳನ್ನು ಸೃಜನಶೀಲವಾಗಿಸಲು ಜಿಲ್ಲಾ ಸಮಿತಿಗಳು ಯೋಚಿಸಬೇಕೆಂದು ಸೂಚಿಸಲಾಗಿದೆ. ಇನ್ನು ರಾಜ್ಯದ ಏಳು ಜಿಲ್ಲೆಗಳ ಹತ್ತು ಸ್ಥಳಗಳಿಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ಭೇಟಿ ನೀಡಿದ್ದು, ಆ ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Leave a Reply