50 ಲ್ಯಾಪ್ಟಾಪ್ ಕದ್ದು ಸಿಕ್ಕುಬಿದ್ದ ಕಂಪ್ಯೂಟರ್ ಇಂಜಿನಿಯರ್

2 years ago

ಬೆಂಗಳೂರು: ಟೊಮೆಟೊ ಬೆಳೆದು ದೊಡ್ಡ ಪ್ರಮಾಣದ ಹಣ ಗಳಿಸುವ ನಿರೀಕ್ಷೆಯಲ್ಲಿದ್ದ ಕಂಪ್ಯೂಟರ್ ಇಂಜಿನಿಯರ್ ಬೆಳೆ ಕೈ ಕೊಟ್ಟ ಪರಿಣಾಮ ಉಂಟಾದ ನಷ್ಟ ಭರಿಸಲು ಸಾಧ್ಯವಾಗದೆ ಕಳ್ಳತನದ ಹಾದಿ ಹಿಡಿದು ಜೈಲು ಪಾಲಾಗಿರುವ ಕತೆ ಇದು. 

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ತೋರಪಲ್ಲಿಯ ಬಿಸಿಎ, ಎಂಎಸ್ ಪದವೀಧರ ಮುರುಗೇಶ್ ಸಾಲ ಮಾಡಿ ಹೊಸೂರಿನ ಬಳಿ ಆರು ಎಕರೆಯಲ್ಲಿ ಟೊಮ್ಯಾಟೋ ಬೆಳೆದಿದ್ದು, ಬೆಳೆ ಕೈಕೊಟ್ಟಿದ್ದರಿಂದ ಸಾಕಷ್ಟು ನಷ್ಟ ಅನುಭವಿಸಿದ್ದರು. 

ನಂಬಿದ ಕೃಷಿ ಕೈಕೊಟ್ಟ ಕಾರಣದಿಂದಾಗಿ ಬೇಸರಗೊಂಡ ಆತ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ  ಟೆಲಿಕಾಲರ್ ಇಂಡಿಯಾ ಪ್ರೈ ಲಿ ನಲ್ಲಿ ಸಿಸ್ಟಂ ಅಡ್ಮಿನ್ ಆಗಿ ಕೆಲಸಕ್ಕೆ ಸೇರಿಕೊಂಡ. ಟೊಮ್ಯಾಟೊ ಬೆಳೆಯಲು ಮಾಡಿದ ಸಾಲ ತೀರಿಸಲಾಗಿರಲಿಲ್ಲ. ಸಾಲ ಕೊಟ್ಟವರು  ಹಣ ಹಿಂತಿರುಗಿಸುವಂತೆ ಪದೇಪದೇ ಕರೆ ಮಾಡುತ್ತಿದ್ದರು. ಇದರಿಂದ ಸುಲಭ ಮಾರ್ಗದಲ್ಲಿ ಹಣ ಮಾಡಬೇಕೆಂದು ಹುಡುಕಾಟ ನಡೆಸಿದ ಆತ ಇಳಿದದ್ದು ಕಳ್ಳತನ ಕೆಲಸಕ್ಕೆ.

ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಇದ್ದ ಲ್ಯಾಪ್ ಟಾಪ್ ಗಳನ್ನು ಸರ್ವಿಸ್ ನೆಪದಲ್ಲಿ ಕೊಂಡೊಯ್ಯುತ್ತಿದ್ದ ಆತ, ಅವುಗಳನ್ನು ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಮಾರುವವರಿಗೆ ಮಾರಾಟ ಮಾಡಿ ಹಣ ಗಳಿಸುವ ಕಳ್ಳ ದಾರಿಯನ್ನು ಅನುಸರಿಸಿದ. ಈ ಹಣವನ್ನು ಸಾಲ ತೀರಿಸಲು ಬಳಸಿದ ಆನಂತರ ಇದು ಹಣ ಗಳಿಸಲು ಸುಲಭ ಮಾರ್ಗ ಎಂದು ಭಾವಿಸಿ ಕಂಪನಿಯಲ್ಲಿದ್ದ ಸುಮಾರು 50 ಲ್ಯಾಪ್ ಟಾಪ್ ಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಿದ. ಕಂಪನಿ ಮಾಲೀಕರು ಸರ್ವಿಸ್ ಗೆ ತೆಗೆದುಕೊಂಡು ಹೋದ ಲ್ಯಾಪ್ ಟಾಪ್ ಗಳನ್ನು ವಾಪಸ್ ತಂದಿಲ್ಲ ಎಂದು ಆತನನ್ನು ಪ್ರಶ್ನಿಸುತ್ತಿದ್ದಂತೆ ಆತ ಕೆಲಸ ಬಿಟ್ಟು ಪರಾರಿಯಾಗಿಬಿಟ್ಟಿದ್ದ. ಈ ಬಗ್ಗೆ ಕಂಪನಿ ಪೊಲೀಸರಿಗೆ ದೂರು ಸಲ್ಲಿಕೆ ಮಾಡಿತ್ತು. 

ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಪ್ರಕರಣದ ತನಿಖೆ  ಕೈಗೊಂಡು, ಮಾಹಿತಿ ಕಲೆಹಾಕಿ, ತಮಿಳುನಾಡಿನ ಹೊಸೂರಿನಲ್ಲಿರುವ ರಾಘವೇಂದ್ರ ಚಿತ್ರಮಂದಿರದ ಬಳಿ ಸಿಸ್ಟಂ ಅಡ್ಮಿನ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ 5 ಲ್ಯಾಪ್ ಟಾಪ್ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿ ಹೊಸೂರಿನಲ್ಲಿರುವ ಹಳೆ ಲ್ಯಾಪ್ ಟ್ಯಾಪ್ ರಿಪೇರಿ ಮತ್ತು ಮಾರಾಟ ಮಾಡುವ ಅಂಗಡಿಗೆ 45 ಲ್ಯಾಪ್ ಟಾಪ್ ಗಳನ್ನು ಮಾರಾಟ ಮಾಡಿರುವ ಸಂಗತಿಯನ್ನು ಬಾಯ್ಬಿಟ್ಟಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿ ಇದೇ ಮೊದಲ ಬಾರಿ ಕಳ್ಳತನ ಮಾಡಿದ್ದು, ಸುಲಭದಲ್ಲಿ ಹಣ ಸಂಪಾದಿಸುವ ಸಲುವಾಗಿ ಇಂತಹ ಕೃತ್ಯಕ್ಕೆ ಇಳಿದಿದ್ದ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಮಾಹಿತಿ ನೀಡಿದರು.

Leave a Reply