ತೆರಿಗೆ ವಿನಾಯಿತಿಗಳನ್ನು ನೀಡಿದ ಜನಹಿತದ ಬಜೆಟ್:  ಆರ್‌.ಅಶೋಕ

3 months ago

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ತೆರಿಗೆ ವಿನಾಯಿತಿಗಳನ್ನು ನೀಡಿ ಜನಹಿತದ ಬಜೆಟ್‌ ಕೊಟ್ಟಿದೆ. ಕಾಂಗ್ರೆಸ್‌ ಸರ್ಕಾರದಂತೆ ಎಲ್ಲೂ ಹೊಸ ತೆರಿಗೆಗಳನ್ನು ಹಾಕಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ 9 ನೇ ಬಜೆಟ್‌ ಜನಪ್ರಿಯತೆಗಿಂತ ಹೆಚ್ಚಾಗಿ ಜನಹಿತದ ಬಜೆಟ್‌ ಆಗಿದೆ. ಜನರ ಬದುಕಿನ ನಿತ್ಯದ ಸಮಸ್ಯೆಗಳಿಗೆ ಅವರು ಸ್ಪಂದಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಪ್ರತಿ ಜಿಲ್ಲೆಗಳಲ್ಲಿ ಬಾಲಕಿಯರ ಹಾಸ್ಟೆಲ್‌ ನಿರ್ಮಿಸುವುದು ಮೊದಲ ಬಾರಿಯ ಕ್ರಮವಾಗಿದ್ದು, ಇದರಿಂದ ಮಹಿಳೆಯರ ಶಿಕ್ಷಣಕ್ಕೆ ಒತ್ತು ದೊರೆತಿದೆ. ಶ್ರೀಗಂಧದ ನಾಡು ಕರ್ನಾಟಕದ ಬಗ್ಗೆ ಹಿಂದಿನ ಸರ್ಕಾರಗಳು ಹೇಳಿರಲಿಲ್ಲ. ಶ್ರೀಗಂಧವನ್ನು ಬೆಳೆಯಲು ಈ ಬಜೆಟ್‌ ಉತ್ತೇಜನ ನೀಡಲಿದೆ. ಕೋಲಾರ, ತುಮಕೂರು, ಮೈಸೂರು, ಮಲೆನಾಡು ಭಾಗಗಳಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತದೆ. ಈ ಬೆಳೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹ ಸಿಗಲಿದೆ. ಇತ್ತೀಚಿನ ವರ್ಷಗಳಲ್ಲಿ ರೈತರ ಆದಾಯ ಕುಸಿಯುತ್ತಿದೆ. ಅವರ ಆದಾಯ ಹೆಚ್ಚಿಸಲು ಹಲವು ಕ್ರಮ ವಹಿಸಲಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಬೆಂಗಳೂರಿಂದ ಹೈದರಾಬಾದ್‌ಗೆ ಬಸ್‌ ಪ್ರಯಾಣ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿ ಹೈ ಸ್ಪೀಡ್‌ ರೈಲು ಯೋಜನೆ ನೀಡಲಾಗಿದೆ. ಈ ಯೋಜನೆಯಡಿ ಹೈದರಾಬಾದ್–ಬೆಂಗಳೂರು, ಚೆನ್ನೈ–ಬೆಂಗಳೂರು ನಡುವೆ ಹೈಸ್ಪೀಡ್ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಹೈಸ್ಪೀಡ್ ರೈಲ್ವೆ ಕಾರಿಡಾರ್‌ನಿಂದ ಆರ್ಥಿಕ ಚಟುವಟಿಕೆಗಳಿಗೆ ವೇಗ ಸಿಗುತ್ತದೆ. ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಇದೇ ನಿಜವಾದ ಬ್ರ್ಯಾಂಡ್‌ ಬೆಂಗಳೂರು ಎಂದರು.

ಪ್ರವಾಸೋದ್ಯಮ ಕ್ಷೇತ್ರ ಹಿಂದಿನಿಂದಲೂ ಕಡೆಗಣನೆಯಾಗಲಿದೆ. ಅದಕ್ಕಾಗಿ ಪ್ರವಾಸಿ ಮಾರ್ಗದರ್ಶಿಗಳಿಗಾಗಿ ಶಾಲೆ ಆರಂಭಿಸಲಾಗುತ್ತಿದೆ. ವಾಹನಗಳ ಅಪಘಾತ ವಿಮೆಯ ಪರಿಹಾರಕ್ಕೆ ತೆರಿಗೆಯನ್ನು ತೆಗೆದುಹಾಕಲಾಗಿದೆ. ಕ್ಯಾನ್ಸರ್‌ ಪೀಡಿತ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಕ್ಯಾನ್ಸರ್‌ ಔಷಧಿಗಳಿಗೂ ತೆರಿಗೆ ವಿನಾಯಿತಿ ನೀಡಲಾಗಿದೆ. ಕೇಂದ್ರ ಸರ್ಕಾರ ತೆರಿಗೆ ಕಡಿಮೆ ಮಾಡಿದ್ದ ವಸ್ತುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ತೆರಿಗೆ ಹಾಕಿದ್ದಾರೆ. 56,000 ಕೋಟಿ ರೂ. ನಷ್ಟು ಹೊಸ ತೆರಿಗೆಯನ್ನು ಅವರು ಹಾಕಿದ್ದಾರೆ. ಅವರು ಮಂಡಿಸಲಿರುವ ಮುಂದಿನ ಬಜೆಟ್‌ನಲ್ಲೂ ಹೀಗೆಯೇ ಮಾಡಲಿದ್ದಾರೆ. ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ರೂ. ಹಣವನ್ನು ಸರ್ಕಾರ ನೀಡಿಲ್ಲ. ಅಂಗನವಾಡಿಗಳಿಗೆ 954 ಕೋಟಿ ರೂ. ನಷ್ಟು ಆಹಾರ ನೀಡಿಲ್ಲ. ಸಾರಿಗೆ ಇಲಾಖೆಗೆ 900 ಕೋಟಿ ರೂ. ನೀಡುವುದು ಬಾಕಿ ಇದೆ. ಗುತ್ತಿಗೆದಾರರಿಗೆ 36,000 ಕೋಟಿ ರೂ. ನೀಡುವುದು ಬಾಕಿ ಇದೆ. ರಾಜ್ಯ ಬಜೆಟ್‌ನಲ್ಲಿ ಈಗಾಗಲೇ ವೆಚ್ಚದ ಮಿತಿಯನ್ನು ದಾಟುವ ಅಪಾಯ ಕಂಡುಬಂದಿದೆ. ಇಲ್ಲಿಯವರೆಗೆ ಕರ್ನಾಟಕ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದು, ಸಿಎಂ ಸಿದ್ದರಾಮಯ್ಯ ಆರ್ಥಿಕ ಶಿಸ್ತು ಹಾಳು ಮಾಡಿದ್ದಾರೆ ಎಂದರು.

ಖಾದಿ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಮಹಾತ್ಮ ಗಾಂಧೀಜಿ ಗ್ರಾಮ ಸ್ವರಾಜ್‌ ಯೋಜನೆ ಘೋಷಣೆಯಾಗಿದೆ. ಈ ಯೋಜನೆಯಿಂದ ಖಾದಿ ಮತ್ತು ಹತ್ತಿ ಬೆಳೆಗೆ ಉತ್ತೇಜನ ಸಿಗಲಿದೆ. 2 ಮತ್ತು 3 ನೇ ಹಂತದ ನಗರಗಳ ಎಂಎಸ್‌ಎಂಇಗಳಿಗೆ ಕಾರ್ಪೊರೇಟ್‌ ಮಿತ್ರ ಯೋಜನೆ ಘೋಷಣೆಯಾಗಿದೆ. ಸೆಮಿ ಕಂಡಕ್ಟರ್‌ ವಲಯಕ್ಕೆ 40,000 ಕೋಟಿ ರೂ. ಮೀಸಲಿಡಲಾಗಿದೆ. ಹೊಸ ಐಟಿ ಕಾಯ್ದೆ ತರುತ್ತಿದ್ದು, ಆದಾಯ ತೆರಿಗೆ ಪಾವತಿ ಮಾಡುವವರಿಗೆ ಕಾನೂನಿನ ಸರಳೀಕರಣದ ಸೌಲಭ್ಯ ಸಿಗಲಿದೆ. 16 ನೇ ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ 1.43 ಲಕ್ಷ ಕೋಟಿ ರೂ. ಸಿಗಲಿದೆ ಎಂದರು.

ಉತ್ಪಾದಕತೆ ಮತ್ತು ಸ್ಪರ್ಧೆ ಹೆಚ್ಚಿಸಿ, ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು, ಜನರ ಆಶೋತ್ತರಗಳನ್ನು ನೇರವೇರಿಸುವುದು ಹಾಗೂ ಜನರು ದೇಶದ ಅಭಿವೃದ್ಧಿಯಲ್ಲಿ ಭಾಗವಹಿಸುವಂತೆ ಮಾಡುವುದು. ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌ ಮೂಲಕ, ಪ್ರತಿ ಕುಟುಂಬ, ಸಮುದಾಯ, ಧರ್ಮ, ಎಲ್ಲ ವಿಭಾಗಗಳಿಗೆ ಸಂಪನ್ಮೂಲ ಬಳಕೆಗೆ ಅವಕಾಶ ನೀಡುವ ಮೂರು ಕರ್ತವ್ಯಗಳ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಇದು ಕೇಂದ್ರ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದರು.

Leave a Reply