ದಸರಾ ಹೆಸರಲ್ಲಿ ಜನರ ತೆರಿಗೆ ಹಣ ಲೂಟಿ: ಸುನೀಲ್‌ ಕುಮಾರ್ ಬಜಾಲ್

5 years ago

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯು ದಸರಾ ಹಬ್ಬಕ್ಕೆ ದಾರಿ ದೀಪಾಲಂಕಾರಕ್ಕಾಗಿ 38 ಲಕ್ಷ ರೂ. ಹಣವನ್ನು ಪೋಲು ಮಾಡುತ್ತಿರುವ ಹಿಂದೆ ಬಿಜೆಪಿ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣ  ಅಡಗಿದೆ; ಮಾತ್ರವಲ್ಲ ಇದು ಜನತೆಯ ತೆರಿಗೆಯ ಹಣವನ್ನು ದಸರಾ ಹೆಸರಲ್ಲಿ ಲೂಟಿ ಮಾಡಲು ಹೊರಟಿದೆ ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದರು.

ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಸಮಾನ ಮನಸ್ಕ ಸಂಘಟನೆ, ಪಕ್ಷಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದೆ ಎಂಬ ಹಲವು ನೆಪ ಮುಂದಿಟ್ಟುಕೊಂಡು ಅಭಿವೃದ್ಧಿ ಕೆಲಸವನ್ನು ಕುಂಠಿತಗೊಳಿಸಿದೆ ಎಂದರು.

ಈ ಹಿಂದೆ ಅಭಿವೃದ್ಧಿ ಕೆಲಸಗಳಿಗಾಗಿ ಎಡಿಬಿಯಿಂದ ಎರಡು ಹಂತದಲ್ಲಿ ತಂದಿರುವ ಕೋಟ್ಯಾಂತರ ರೂಪಾಯಿ ಸಾಲವನ್ನು ಸಂದಾಯ ಮಾಡಲು ಬಾಕಿ ಇರಿಸಿದೆ. ಕಳೆದ ವರುಷದ ಮೂರು ಕೋಟಿಯಷ್ಟು  ಮೆಸ್ಕಾಂನ ವಿದ್ಯುತ್ ಬಿಲ್ ಕೂಡಾ ಪಾವತಿಸಿಲ್ಲ. ಇಷ್ಟೊಂದು ಸಾಲ ಇರಿಸಿಕೊಂಡು ದಸರಾ ಹಬ್ಬದ ಹೆಸರಲ್ಲಿ ದೀಪಾಲಂಕಾರಕ್ಕಾಗಿ ಹಣ ವ್ಯಯಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಜನರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಈ ರೀತಿ‌ ಖರ್ಚು ಮಾಡಲು ಸರಕಾರಗಳ ನಿಯಮಗಳಲ್ಲಿ ಯಾವುದೇ ಅವಕಾಶಗಳಿಲ್ಲ. ಪಾಲಿಕೆಯ ಬಿಜೆಪಿ‌ ಆಡಳಿತ ಈ ಕೂಡಲೇ ಮಂಜೂರು‌ ಮಾಡಿರುವ 38 ಲಕ್ಷ ಹಣವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.

ಪ್ರತಿಭನೆ ಉದ್ದೇಶಿಸಿ ಸಿಪಿಐಎಂ ಪಕ್ಷದ ಮುಖಂಡ, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಜಯಂತಿ ಶೆಟ್ಟಿ, ಜೆಡಿಎಸ್ ನ ಸುಮತಿ ಎಸ್ ಹೆಗ್ಡೆ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ‌ಸಂತೋಷ್ ಬಜಾಲ್ ಮಾತನಾಡಿ, ಜನತೆಯ ತೆರಿಗೆಯ ಹಣ ಲಪಟಾಯಿಸಲು ಹುನ್ನಾರ ನಡೆಸುವ ಬಿಜೆಪಿ ಆಡಳಿತಕ್ಕೆ ಛೀಮಾರಿ ಹಾಕಿದರು.

ಈ ವೇಳೆ ಡಿವೈಎಫ್ಐ ಮಂಗಳೂರು ನಗರ ಮುಖಂಡ ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ಪ್ರಮೀಳಾ ಶಕ್ತಿನಗರ, ಮನೋಜ್ ಉರ್ವಾಸ್ಟೋರ್, ಸಿಪಿಐ ಪಕ್ಷದ ಮುಖಂಡ ವಿ.ಕುಕ್ಯಾನ್, ಕರುಣಾಕರ್, ದಲಿತ ಹಕ್ಕುಗಳ ಸಮಿತಿಯ ನಾಯಕ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ, ರಘುವೀರ್, CPIM ಮುಖಂಡ ಬಾಬು‌ ದೇವಾಡಿಗ, ಅಶೋಕ್ ಸಾಲ್ಯಾನ್, ಉದಯಚಂದ್ರ ರೈ, ನಾಗೇಶ್ ಕೋಟ್ಯಾನ್, ಸಾಮಾಜಿಕ ಚಿಂತಕಿ ಪ್ರಮಿಳಾ ದೇವಾಡಿಗ, ಜೆಡಿಎಸ್ ಮುಖಂಡರಾದ ಹರ್ಷಿತ, ಅಲ್ತಾಫ್ ತುಂಬೆ, ಶಾರದಾ, ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Leave a Reply