ರಾಜ್ಯದಲ್ಲಿ ಬಿಜೆಪಿ ರಾಜ್ಯಪಾಲರ ಆಡಳಿತ ಜಾರಿಗೆ ತರಲು ಸಂಚು ರೂಪಿಸಿದೆ: ಡಿ.ಕೆ.ಶಿವಕುಮಾರ್

2 years ago

ಬೆಂಗಳೂರು: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯ ಹತ್ಯೆ, ಗದಗ್ ನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಸೇರಿದಂತೆ ಹಲವು ಪ್ರಕರಣಗಳನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ತರಲು ಸಂಚು ರೂಪಿಸಿದೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಈ ಪ್ರಕರಣಗಳನ್ನು ಮುಂದಿಟ್ಟುಕೊಂಡು ವಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಡುತ್ತಿರುವ ಟೀಕೆಗಳನ್ನು ಗಮನಿಸಿದರೆ ರಾಜ್ಯದ ಚುನಾಯಿತ ಸರ್ಕಾರವನ್ನು ಅತಂತ್ರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನ ಉಂಟಾಗುತ್ತಿದೆ ಎಂದರು.

ಕೆಲವು ವೈಯಕ್ತಿಕ ನೆಲೆಗಟ್ಟಿನಲ್ಲಿ ನಡೆದ ಪ್ರಕರಣಗಳು ಮತ್ತು ಪ್ರೇಮ ವೈಫಲ್ಯ ಪ್ರಕರಣದಲ್ಲಿ ನಡೆದ ಘಟನೆಗಳಿಗೆ ಕೋಮು ಬಣ್ಣ ನೀಡಲಾಗುತ್ತಿದೆ. ಬಿಜೆಪಿ ನಾಯಕರ ವಿರುದ್ಧ ದೂರಿದರು.

ಮತ್ತೊಂದೆಡೆ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಪರಮೇಶ್ವರ್, ಗದಗಿನಲ್ಲಿ ಆಗಿರುವ ನಾಲ್ಕು ಕೊಲೆ ಕುಟುಂಬಕ್ಕೆ ಸಂಬಂಧಿಸಿರುವ ಘಟನೆ ಎಂಬ ಮಾಹಿತಿ ಇದೆ. ಇದರ ಬಗ್ಗೆ ಇನ್ನು ತನಿಖೆ ಪ್ರಗತಿಯಲ್ಲಿದೆ ಎಂದರು.

ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ, ಆ ಇಬ್ಬರು ಯುವಕ-ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಅದರಲ್ಲಿ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಾರೆ. ಹುಡುಗಿ ಪ್ರೀತಿ ನಿರಾಕರಿಸಿದ್ದನ್ನು ಸಹಿಸಲಾಗದ ಹುಡುಗ ಚಾಕುವಿನಿಂದ ಆಕೆಯನ್ನು ಇರಿದು ಕೊಲೆ ಮಾಡಿದ್ದಾನೆ. ಇನ್ನು ಬೆಂಗಳೂರಿನ ಡಬಲ್ ಮರ್ಡರ್, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆಗಿರುವುದು. ಇದಕ್ಕೆ ಬಿಜೆಪಿಯವರು ರಾಜಕೀಯ ಬಣ್ಣ ಲೇಪಿಸುವುದು ಎಷ್ಟರಮಟ್ಟಿಗೆ ಸರಿ? ಇನ್ನು ಚುನಾವಣಾ ಹೊಸ್ತಿಲಿನಲ್ಲಿ ಇಂತಹ ಘಟನೆಗಳನ್ನು ಮಾಡಿಸುವುದು ಅವರೇ ಎಂದು ಆರೋಪಿಸಿದರು.

ಇನ್ನು ಹುಬ್ಬಳ್ಳಿಯ ಯುವತಿ ಹತ್ಯೆ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಕಳೆದ ಸಂಜೆಯಿಂದ ಇಂದು ಮುಂಜಾನೆಯವರೆಗೆ ಕೊಟ್ಟು 12 ಪ್ರಕರಣಗಳು ನಡೆದಿವೆ. ಇದು ರಾಜ್ಯದ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬರು ಮೂರು ಮಕ್ಕಳಿಗೆ ವಿಷ ಉಣಿಸಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿಯಲ್ಲಿ ಗುರುವಾರ ನಡೆದಿದೆ. ಮತ್ತೊಂದೆಡೆ ಇದರ ಬೆನ್ನಲ್ಲೇ, ಕೌಟುಂಬಿಕ ಕಲಹದಿಂದ ವ್ಯಕ್ತಿಯೊಬ್ಬ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷದ ನೀರು ಕುಡಿಸಿ ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ.

ಬೆಂಗಳೂರಿನ ಸಾರಕ್ಕಿ ಬಳಿಯಿರುವ ಪಾರ್ಕ್ನಲ್ಲಿ ಸುರೇಶ್ ಮತ್ತು ಅನುಷಾ ಎನ್ನುವ ಜೋಡಿ ಗುರುವಾರ ಹತ್ಯೆಗೀಡಾಗಿದ್ದಾರೆ. ಘಟನೆಯಲ್ಲಿ ಸುರೇಶ್ ಎಂಬಾತ ಅನುಷಾಳನ್ನು ಕೊಲೆ ಮಾಡಿದ್ದರೆ, ಸುರೇಶ್ನನ್ನು ಅನುಷಾಳ ತಾಯಿ (ಗೀತಾ) ಕೊಲೆ ಮಾಡಿದ್ದರು ಎಂಬುದು ನಂತರ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು.

ಸುರೇಶ್ ಮತ್ತು ಅನುಷಾ ಇಬ್ಬರ ನಡುವೆ ಹಲವು ವರ್ಷಗಳಿಂದ ಪರಿಚಯವಿತ್ತು. ಅದು ಬೇರೆ ಸಂಬಂಧಕ್ಕೂ ತಿರುಗಿತ್ತು. ಸುರೇಶನಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದರು. ಆದರೂ ಅನುಷಾಳೊಂದಿಗೆ ಸುರೇಶ್ ಸಂಬಂಧ ಹೊಂದಿದ್ದ. ತಮ್ಮಿಬ್ಬರ ಸಂಬಂಧವನ್ನು ಮುಂದುವರೆಸುವುದು ಬೇಡ ಎಂದು ಅನುಷಾ ಹೇಳಿದ್ದಕ್ಕೆ ಸುರೇಶ್ ಕೋಪಗೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಅನುಷಾಳ ತಾಯಿ ಸುರೇಶನ ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದಿದ್ದಾಳೆ. ಪರಿಣಾಮ ಸುರೇಶ್ ಸಹ ಸಾವನ್ನಪ್ಪಿದ್ದಾನೆ.

Leave a Reply