ಹುತಾತ್ಮರಾದ ತುಳುನಾಡಿನ ಸೂರ್ಯ ಭಾಸ್ಕರ ಕುಂಬಳೆ: ಡಾ.ಕೃಷ್ಣಪ್ಪ ಕೊಂಚಾಡಿ

4 years ago

ಮಂಗಳೂರು: ಎಳೆಯ ಪ್ರಾಯದಲ್ಲೇ ಎಡಪಂಥೀಯ ವಿಚಾರಧಾರೆಯನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿ ಯುವಜನ ಚಳುವಳಿಯಲ್ಲಿ ಗುರುತಿಸಿಕೊಂಡ ಭಾಸ್ಕರ ಕುಂಬ್ಳೆಯವರು ಎಲ್ಲಾ ವಿಭಾಗದ ಜನತೆಯ ಪ್ರೀತಿ ವಿಶ್ವಾಸಗಳನ್ನು ಗಳಿಸಿದ್ದರು ಎಂದು ಪ್ರಗತಿಪರ ಚಿಂತಕ ಹಾಗೂ ಭಾಸ್ಕರ ಕುಂಬಳೆಯವರ ಕಾಲೇಜ್ ಸಹಪಾಠಿ ಡಾ.ಕೃಷ್ಣಪ್ಪ ಕೊಂಚಾಡಿ ಅಭಿಪ್ರಾಯಪಟ್ಟರು.

ಕೋಮುವಾದಿ ಪಡೆಗಳ ಕರಾಳ ಖಡ್ಗಕ್ಕೆ ಬಲಿಯಾದ ತುಳುನಾಡಿನ ಹೆಮ್ಮೆಯ ಪುತ್ರ, ಯುವಜನ ಚಳುವಳಿಯ ಧ್ರುವತಾರೆ ಸಂಗಾತಿ ಭಾಸ್ಕರ ಕುಂಬಳೆಯವರ 25ನೇ ಹುತಾತ್ಮ ದಿನಾಚರಣೆ ಅಂಗವಾಗಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಮಾತಾಡಿದ ಅವರು,  ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಉತ್ತಮ ಕ್ರೀಡಾಪಟುವಾಗಿ ಆಕರ್ಷಕ ವ್ಯಕ್ತಿತ್ವದ ಭಾಸ್ಕರರವರು ಸಾವಿರಾರು ಯುವಜನತೆಯ ಸ್ಪೂರ್ತಿಯ ಚಿಲುಮೆಯಾಗಿದ್ದರು. ಇದನ್ನು ಸಹಿಸದ RSS ಗೂಂಡಾಗಳು ವ್ಯವಸ್ಥಿತ ಸಂಚು ನಡೆಸಿ ಭಾಸ್ಕರರವರನ್ನು ಮಂಗಳೂರಿನ ಎಕ್ಕೂರಿನ ಬಳಿಯಲ್ಲಿ ಬರ್ಬರವಾಗಿ ಕೊಲೆಗೈದರು ಎಂದು ಆರೋಪಿಸಿದರು.

ಚಾಕು ಚೂರಿ ಸಂಸ್ಕೃತಿಯ ಮೂಲಕ ಕೊಲೆ ರಾಜಕೀಯ ನಡೆಸುವ RSS, ಭಾಸ್ಕರರವರನ್ನು ದೈಹಿಕವಾಗಿ ಇಲ್ಲವಾಗಿಸಿದರು. ಆದರೆ ಅವರ ವಿಚಾರಧಾರೆಯನ್ನು ನಾಶ ಮಾಡಲು ಎಂದಿಗೂ ಸಾಧ್ಯವಿಲ್ಲ. ಗಡಿನಾಡ ಪ್ರದೇಶದಲ್ಲಿ ಸೌಹಾರ್ದತೆಗಾಗಿ ಪ್ರಾಣವನ್ನೇ ಸಮರ್ಪಿಸಿ ಹುತಾತ್ಮರಾದ ಮೊದಲ ಸಂಗಾತಿ ಭಾಸ್ಕರ ಕುಂಬ್ಳೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ DYFI ದ.ಕ.ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕಾಸರಗೋಡು ಜಿಲ್ಲೆಯಲ್ಲಿ ಯುವಜನ ಚಳುವಳಿಯ ಬೆಳವಣಿಗೆಗೆ ಅಪಾರ ಕೊಡುಗೆ ‌ನೀಡಿದ ಭಾಸ್ಕರ ಕುಂಬ್ಳೆಯವರು, ಅವಿನಾವಭಾವ ಸಂಬಂಧ ಹೊಂದಿದ ಮಂಗಳೂರಿನಲ್ಲಿಯೂ ಚಳುವಳಿಯ ಮುನ್ನಡೆಗೆ ಭಾರೀ ಕನಸು ಕಂಡವರು. ಮಾತ್ರವಲ್ಲ ಮಂಗಳೂರನ್ನು ಸೌಹಾರ್ದತಾ ತಾಣವನ್ನಾಗಿಸಲು ಅವಿಶ್ರಾಂತ ವಾಗಿ ಶ್ರಮಿಸಿದ್ದರು. ಕೋಮುವಾದಿ ಶಕ್ತಿಗಳ ಪ್ರಯೋಗ ಶಾಲೆಯಂತಾದ ಮಂಗಳೂರನಲ್ಲಿ ಮತ್ತೆ ಸೌಹಾರ್ದತಾ ಪರಂಪರೆಯನ್ನು ಉಳಿಸಿ ಬೆಳೆಸುವುದೇ ಭಾಸ್ಕರ ಕುಂಬಳೆಯವರಿಗೆ ನೀಡುವ ಗೌರವ ಸಮರ್ಪಣೆ ಎಂದರು.

Leave a Reply