ಸಿಡಿ ಪ್ರಕರಣವೊಂದು ಸದ್ಯದಲ್ಲೇ ಬಹಿರಂಗಗೊಳ್ಳಲಿದೆ: ಬಸನಗೌಡ ಪಾಟೀಲ್ ಯತ್ನಾಳ್

2 years ago

ವಿಜಯಪುರ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಂತಹುದೇ ಸಿಡಿ ಪ್ರಕರಣವೊಂದು ಸದ್ಯದಲ್ಲೇ ಬಹಿರಂಗಗೊಳ್ಳಲಿದೆ ಎಂದು ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಸಕ್ರಿಯವಾಗಿರುವ ಸಿಡಿ ಕಾರ್ಖಾನೆಯೊಂದು ಅವಕಾಶಕ್ಕಾಗಿ ಕಾಯುತ್ತಿದೆ. ಈಗ ಲೋಕಸಭೆ ಚುನಾವಣೆ ಮುಕ್ತಾಯಗೊಂಡಿದ್ದು ಯಾವುದೇ ಕ್ಷಣದಲ್ಲಿ ಅದು ಬಹಿರಂಗವಾಗಲಿದೆ ಎಂದರು.

ಈಗ ಬಹಿರಂಗವಾಗಲಿರುವ ಸಿಡಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಲಿದೆ. ಹಲವಾರು ರಹಸ್ಯಗಳು ಇದರಿಂದ ಬಹಿರಂಗವಾಗಲಿವೆ ಎಂದರು.

ನಾನು ಯಾವುದನ್ನೂ ಬಾಯಿ ಚಪಲಕ್ಕೆ ಇಲ್ಲವೇ ಪ್ರಚಾರಕ್ಕೆ ಹೇಳುವುದಿಲ್ಲ. ಹಿಂದೆಯೇ ನಾನು ಸಿ.ಡಿ ಸ್ಫೋಟಗೊಳ್ಳಲಿದೆ ಎಂದು ಹೇಳಿದ್ದೆ. ಆದರೆ ಯಾರದ್ದು ಎಂದು ಹೇಳಿರಲಿಲ್ಲ. ನನ್ನ ಮಾತು ಈಗ ನಿಜವಾಗಿದೆ ಎಂದರು.

ಪ್ರಜ್ವಲ್ ಅಶ್ಲೀಲ ವಿಡಿಯೋ ಬಹಿರಂಗವಾಗಿದ್ದರ ಹಿಂದೆ ಡಿಸಿಎಂ ಡಿ.ಕೆ ಶಿವಕುಮಾರ್ ಕೈವಾಡವಿದೆ ಎಂದು ಆರೋಪಿಸಿದ ಅವರು, ವಕೀಲ, ಬಿಜೆಪಿ ನಾಯಕ ದೇವೇರಾಜೇ ಗೌಡರು ಆರೋಪಿಸಿದಂತೆ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಶಿವಕುಮಾರ್ ಅವರ ಕೈವಾಡ ಇರುವುದು ಸ್ಪಷ್ಟ ಎಂದರು.

ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಡಿ.ಕೆ.ಶಿವಕುಮಾರ್ ವಶದಲ್ಲಿದೆ. ಅದು ಅವರ ಆಣತಿಯಂತೆ ಕೆಲಸ ಮಾಡುತ್ತದೆ ಎಂದರು.

ಪ್ರಜ್ವಲ್ ಪ್ರಕರಣ ಉತ್ತರ ಕರ್ನಾಟಕ ಭಾಗದ ಚುನಾವಣೆಯಲ್ಲಿ ಬಿಜೆಪಿ ಮೇಲೆ ಪರಿಣಾಮ ಬೀರುವುದಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ 2019ರ ಚುನಾವಣೆಯಲ್ಲಿಯೂ ನಾವು ಉತ್ತಮ ಸಾಧನೆ ಮಾಡಿದ್ದೆವು. ಈ ಭಾಗದಲ್ಲಿ ಜೆಡಿಎಸ್ ಅಷ್ಟು ಪ್ರಬಲವಾಗಿಲ್ಲ. ಈ ಎಲ್ಲ ಕಾರಣಗಳಿಂದ ಪ್ರಜ್ವಲ್ ಪ್ರಕರಣದಿಂದ ಈ ಭಾಗದಲ್ಲಿ ಬಿಜೆಪಿಗೆ ಹಿನ್ನಡೆಯಾಗುವುದಿಲ್ಲ ಎಂದರು.

Leave a Reply