ಬಸವಣ್ಣ, ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ

3 years ago

ಬೆಂಗಳೂರು: ಬಸವಣ್ಣನವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವೈಚಾರಿಕ ಕ್ರಾಂತಿಯೊಂದಿಗೆ ನಾಡು ಕೊಟ್ಟ ಮಹಾನ್ ನಾಯಕರು. ಊರು ಕೇರಿಗಳನ್ನು ಕಟ್ಟಿ ಮಾದರಿಯಾದ ಮಹಾನ್ ಮಹಾಪ್ರಭು ಕೆಂಪೇಗೌಡರು ನಮ್ಮ ಆದರ್ಶ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ನಾಡಪ್ರಭು ಕೆಂಪೇಗೌಡ ಹಾಗೂ ಕಾಯಕಯೋಗಿ ಬಸವಣ್ಣನವರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡು ಮೂರ್ತಿಗಳನ್ನು ವಿಧಾನಸೌದದ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ಮಾಡಲಾಗಿತ್ತು. ಅದರಂತೆ ಇಂದು ಸ್ಪೀಕರ್ ಕಾಗೇರಿ, ಬಸವರಾಜ್ ಹೊರಟ್ಟಿ ಜೊತೆ ಚರ್ಚಿಸಿ ಅಶೋಕ್‍ಗೆ ಕೊಟ್ಟಂತಹ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು.

ಒಂದೂವರೆ ಎರಡು ತಿಂಗಳಲ್ಲಿ ಈ ಪ್ರತಿಮೆಗಳ ನಿರ್ಮಾಣ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲಾ ಪರಮಪೂಜ್ಯರ ಸಾನ್ನಿಧ್ಯದಲ್ಲಿ ಶಂಕುಸ್ಥಾಪನೆ ಮಾಡಿದ್ದೇವೆ. ಈ ಮಹಾನ್ ವ್ಯಕ್ತಿಗಳ ಆಡಳಿತ, ಆಧ್ಯಾತ್ಮಿಕ ಚಿಂತನೆ ನಮ್ಮ ನಾಡಿನಲ್ಲಿ ಬೇರೂರಬೇಕು. ಕರ್ನಾಟಕ ಸಮಗ್ರ ಅಭಿವೃದ್ಧಿ ಆಗಿರುವಂತಹ ರಾಜ್ಯವಾಗಬೇಕು ಎಂದರು.

ಈ ಇಬ್ಬರು ಮಾಹಾತ್ಮರ ಪ್ರೇರಣೆ, ವಿಚಾರಗಳು ಶಾಶ್ವತವಾಗಿ ಉಳಿಯಲಿ ಎಂಬ ಸಲುವಾಗಿ ಈ ಪ್ರತಿಮೆಗಳನ್ನ ಮಾಡಿದ್ದೇವೆ. ನನಗೆ ವಿಶ್ವಾಸ ವಿದೆ. ಈ ಮಹಾತ್ಮರ ಪ್ರೇರಣೆ ಜನತೆಗೆ ಒಳ್ಳೆದಾಗುತ್ತದೆ ಎಂದರು.

ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಪುತ್ಥಳಿ ಅನಾವರಣಗೊಳಿಸಬೇಕು ಎಂಬುದು ಬಹಳ ದಿನಗಳ ಕನಸಾಗಿತ್ತು. 75 ವರ್ಷ ಗಳಿಂದ ಪುತ್ಥಳಿ ಅನಾವರಣ ಸಾಧ್ಯ ವಾಗಿರಲಿಲ್ಲ. ಇನ್ನೂ ಒಂದೂವರೆ ತಿಂಗಳಲ್ಲಿ ಅನಾವರಣಗೊಳಿಸುತ್ತೇವೆ ಎಂದರು

ವಿಧಾನಸೌಧದ ಆವರಣದಲ್ಲಿನ ರಾಷ್ಟ್ರಪಿತ ಮಹಾತ್ಮ ಗಾಂಧಿ  ಪ್ರತಿಮೆ ಪಕ್ಕ ಸುಮಾರು 8 ಕೋಟಿ ವೆಚ್ಚದಲ್ಲಿ ಸರ್ಕಾರ ಈ ಪ್ರತಿಮೆಗಳನ್ನು ನಿರ್ಮಾಣ ಮಾಡುತ್ತಿದ್ದು, ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಪ್ರತಿಮೆಗಳನ್ನು ಉದ್ಘಾಟಿಸುವ ಲೆಕ್ಕಾಚಾರದಲ್ಲಿದೆ.

ಕಳೆದ ತಿಂಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ನಾಡಪ್ರಭು ಕೆಂಪೇಗೌಡರ 108 ಅಡಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರಮೋದಿ ಅವರು ಉದ್ಘಾಟಿಸಿದ್ದರು. ಇದರ ಬೆನ್ನಲೇ ಸರ್ಕಾರ ಇದೀಗ ವಿಧಾನಸೌಧ ಮುಂಭಾಗ ರಾಜ್ಯದ ಎರಡು ಪ್ರಬಲ ಸಮುದಾಯಗಳ ಆಸ್ಮಿತೆಯಂತಿರುವ ಪ್ರತಿಮೆಗಳನ್ನು ಸ್ಥಾಪನೆ ಮಾಡುವ ಮೂಲಕ ಲಿಂಗಾಯಿತ ಮತ್ತು ಒಕ್ಕಲಿಗರ ಮತ ಬ್ಯಾಂಕ್‍ಗೆ ಲಗ್ಗೆ ಹಾಕಿದೆ.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಮಾದಾರ ಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿ, ಗುರುಗುಂಡ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ , ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತರಿದ್ದರು.

Leave a Reply