ಕೋಟ್ಯಂತರ ವಂಚನೆ ಹಿನ್ನೆಲೆ ಕೊಲೆ: ಪೊಲೀಸರಿಗೆ ಶರಣಾದ ಕೊಲೆ ಆರೋಪಿ

3 years ago

ಬೆಂಗಳೂರು: ಕೋಟ್ಯಾಂತರ ರೂ. ವಂಚನೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಕೊಲೆಗೈದು ಮೃತದೇಹವನ್ನು ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಮೃತದೇಹ ತಂದಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ರಾಮಮೂರ್ತಿ ನಗರದ ಜಯಂತಿನಗರದ ವಾಸಿ ಮಹೇಶಪ್ಪ ಎಂಬಾತನನ್ನು ಕೊಂದು ಮೃತದೇಹವನ್ನು ಠಾಣೆಗೆ ತಂದಿದ್ದ ಆರೋಪಿ ರಾಜಶೇಖರ್ ಬಂಧಿತ ಆರೋಪಿಯಾಗಿದ್ದಾನೆ.

ನಂಜನಗೂಡು ಬಳಿಯ ಹಿಮನಗುಂಡಿ ಎಂಬ ಹಳ್ಳಿಯಿಂದ ಮಹೇಶಪ್ಪನನ್ನು ಬೆಂಗಳೂರಿಗೆ ಕರೆತಂದಿದ್ದ ರಾಜಶೇಖರ್ ಜೊತೆ ಮಹೇಶಪ್ಪಗೆ ಒಳ್ಳೆ ಸ್ನೇಹ ಇತ್ತು. ಬ್ಯಾಂಕ್ ಗಳಲ್ಲಿ ಸಾಲ ಕೊಡಿಸುವುದಾಗಿ ಹಲವರಿಂದ ಹಣ ಪಡೆದಿದ್ದ ಮಹೇಶಪ್ಪ ಎಲ್ಲಾ ವ್ಯವಹಾರಗಳಲ್ಲೂ ರಾಜಶೇಖರ ಮತ್ತು ಆತನ ತಾಯಿ ಸುವಿಧಾ ಜೊತೆಗಿದ್ದರು. ಆದರೆ ಯಾರಿಗೂ ಸಾಲ ಕೊಡಿಸದೇ ಪಡೆದ ಹಣ ವಾಪಸ್ ನೀಡದೇ ಮಹೇಶಪ್ಪ ಪರಾರಿಯಾಗಿದ್ದ.

ಇದರಿಂದಾಗಿ ಮಧ್ಯದಲ್ಲಿದ್ದ ರಾಜಶೇಖರ ತನ್ನ ಮನೆಯನ್ನೇ ಮಾರಿ ಹಲವರಿಗೆ ಕೊಟ್ಟು ಬೇಸತ್ತಿದ್ದು, ಇದರಿಂದ ಮಹೇಶಪ್ಪನ್ನನ್ನು ಹುಡುಕಿಕೊಂಡು ಹಳ್ಳಿಗೆ ಹೋಗಿದ್ದ. ಅಲ್ಲಿಂದ ಮಹೇಶಪ್ಪನನ್ನು ‌ಕಾರಿನಲ್ಲಿ ಕರೆತಂದು ಮಾರ್ಗ ಮಧ್ಯೆ ಅವಲಹಳ್ಳಿ ಬಳಿ ಹಣ ವಾಪಸ್ ನೀಡುವಂತೆ ರಾಡ್ ನಿಂದ ಹಲ್ಲೆ ಮಾಡಿದ್ದು, ಬೆಳಗ್ಗೆವರೆಗೆ ಗಾಯಾಳುವನ್ನು ಇರಿಸಿಕೊಂಡಿದ್ದನು.

ಆರೋಪಿ ಬೆಳಗ್ಗೆ ಎಚ್ಚರವಾಗಿ‌ ನೋಡಿದಾಗ ಮಹೇಶಪ್ಪ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಬೆಳಗಿನ ಜಾವ ಕಾರು, ಮೃತದೇಹ, ಹಲ್ಲೆ ಮಾಡಿದ್ದ ರಾಡ್ ಸಹಿತ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದ ರಾಜಶೇಖರ ಶರಣಾಗಿದ್ದು ಆತನನ್ನು ಬಂಧಿಸಿ ಕೇಸ್ ದಾಖಲಿಸಿರುವ ಪೊಲೀಸರು ‌ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ಆರೋಪಿ ರಾಜಶೇಖರ ವಿಚಾರಣೆಯಲ್ಲಿ ಮಹೇಶಪ್ಪ ಸುಮಾರು ಒಂದೂವರೆ ಕೋಟಿ ಹಣ ವಂಚನೆ ನಡೆಸಿದ್ದು ಅದರಿಂದಾಗಿ ಆಕ್ರೋಶಗೊಂಡು ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ.

Leave a Reply