ಮೈಸೂರು: ದೇಶದ ಜನರ ಧ್ವನಿಯಾಗಲು ರಾಹುಲ್ ಗಾಂಧಿ ಅವರು ಕಟಿಬದ್ಧರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
#BharathAikyataYatre ಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಲೆಏರಿಕೆ, ನಿರುದ್ಯೋಗ, ರೈತರ ಸಂಕಷ್ಟ ಮೊದಲಾದ ಸಮಸ್ಯೆಗಳ ವಿರುದ್ಧ ರಾಹುಲ್ ಗಾಂಧಿ ಈ ಐತಿಹಾಸಿಕ ಯಾತ್ರೆಯ ಮೂಲಕ ಧ್ವನಿ ಎತ್ತುತ್ತಿದ್ದಾರೆ ಎಂದರು.
ಯಾತ್ರೆಯು ಮೈಸೂರಿನ ಮಾರ್ಗವಾಗಿ ಬರುತ್ತಿದೆ. ರಾಹುಲ್ ಅವರು ತಮಗೆ ಇದೇ ಮಾರ್ಗ ಬೇಕು ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರು ಪ್ರತೀ ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸಬೇಕು. ವಿಶೇಷವಾಗಿ ನಿರುದ್ಯೋಗಿ ಯುವಕರು, ಮಹಿಳೆಯರನ್ನು ರಾಹುಲ್ ಗಾಂಧಿ ಅವರು ಯಾತ್ರೆ ವೇಳೆ ಭೇಟಿ ಮಾಡಲು ಉದ್ದೇಶಿಸಿದ್ದಾರೆ ಎಂದರು.
ರಾಹುಲ್ರನ್ನು ಭೇಟಿಯಾಗಲು ಈಗಾಗಲೇ 40,000 ನಿರುದ್ಯೋಗಿ ಯುವಕರು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ನಾಯಕರು ಪ್ರತೀ ಗ್ರಾ. ಪಂ.ಗಳಲ್ಲೂ ಸಭೆ ನಡೆಸಬೇಕು. ರಾಜ್ಯದಲ್ಲಿ ನಡೆಯಲಿರುವ ಈ ಯಾತ್ರೆಯನ್ನು ದೇಶಕ್ಕೆ ಮಾದರಿಯನ್ನಾಗಿಸಬೇಕು. ಮೇಕೆದಾಟು ಯಾತ್ರೆ, ಸ್ವಾತಂತ್ರ್ಯ ನಡಿಗೆಯಂತೆ ಈ ಯಾತ್ರೆಯನ್ನೂ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.



