ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ನಿಭಾಯಿಸಲಾಗಿದೆ: ಎನ್ ಶಶಿಕುಮಾ‌ರ್

12 months ago

ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿರುವ ಹಂತಕನ ಎನ್ ಕೌಂಟರ್ ಬಲಿ ಪ್ರಕರಣ ವಿವಾದದ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ಪೊಲೀಸರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ನಿಭಾಯಿಸಲಾಗಿದೆ ಎಂದು ಹುಬ್ಬಳ್ಳಿ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾ‌ರ್ ಸಮಜಾಯಿಷಿ ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರೋಪಿಯನ್ನು ಬಂಧಿಸಲು ಪೊಲೀಸರು ಹೋಗಿದ್ದಾಗ ಆತ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಹಾರಿಸಿದ ಗುಂಡು ತಗುಲಿ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇಂತಹ ಪ್ರಕರಣದಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ಇದೆ ಅದರಂತೆ ನಡೆದಿದೆ ಎಂದರು.

ಆರೋಪಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನ್ಯಾಯಾಗ ತನಿಖೆ ಮಾಡಬೇಕೆಂದಿತ್ತು. ಅದು ಕೂಡ ಆಗುತ್ತಿದೆ. ಆರೋಪಿಯ ಮಾಹಿತಿ ಪರಿಶೀಲನೆ ಮಾಡಲಾಗುತ್ತಿದೆ. ಆತ ವಾಸವಿದ್ದ ಸ್ಥಳದಲ್ಲಿ ಹಾಗೂ ಆತ ಸಂಚರಿಸಿದ ಎಲ್ಲಾ ಕಡೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.

ಮರಣೋತ್ತರ ಪರೀಕ್ಷೆ ಬಳಿಕ ಆತನಿಗೆ ಸಂಬಂಧಪಟ್ಟವರನ್ನು ಹುಡುಕುವ ಕೆಲಸ ಮಾಡುತ್ತಿದ್ದೇವೆ. ಎಲ್ಲಾ ಭಾಷೆಗಳಲ್ಲಿ ಆರೋಪಿಯ ವಿವರಗಳನ್ನು ಬೇರೆಬೇರೆ ಕಡೆ ಕಳಿಸಲಾಗಿದೆ. ಆತ ಪಾಟ್ನಾದವನಾಗಿದ್ದಾನೆ ಎಂಬ ಮಾಹಿತಿ ಇದೆ. ಆತನ ಸಂಬಂಧಿಕರು ಪತ್ತೆಯಾಗದಿದ್ದರೆ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದರು.

ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಚಾಚೂ ತಪ್ಪದೇ ಪಾಲನೆ ಮಾಡಲಾಗುತ್ತಿದೆ. ಅವರ ಕುಟುಂಬಸ್ಥರು ಬರುವತನಕ ಕೋಲ್ಡ್ ಸ್ಟೋರೇಜ್ ನಲ್ಲಿ ಕೆಲವು ದಿನಗಳ ಕಾಲ ಶವ ಇರಿಸಲಾಗುತ್ತದೆ. ಇಷ್ಟಾದರೂ ಆತನ ಸಂಬಂಧಿಕರು ಬಾರದಿದ್ದರೆ ಮಣ್ಣು ಮಾಡುವ ಪ್ರಕ್ರಿಯೆಯನ್ನ ಕಾನೂನು ತಜ್ಞರ ಸಲಹೆ ಪಡೆದು ಮುಂದುವರೆಯುತ್ತೇವೆ. ಸಾರ್ವಜನಿಕ ಹಿತಾಸಕ್ತಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯ ಆಗಿಲ್ಲ. ಏನೇ ಕೇಳಿದ್ರು ಉತ್ತರ ನೀಡಲು ಸಿದ್ಧವಿದ್ದೇವೆ ಎಂದರು.

Leave a Reply