ಮಾಜಿ ಸಚಿವ ಎನ್. ಕೃಷ್ಣಯ್ಯ ಶೆಟ್ಟಿ ಹಾಗೂ ಸೋದರನಿಗೆ ಜೈಲು ಶಿಕ್ಷೆ 

1 year ago

ಬೆಂಗಳೂರು: ಮಾಜಿ ಮಂತ್ರಿ ಹಾಗೂ ಬಿಜೆಪಿ ನಾಯಕ ಮಾಲೂರು ಎನ್. ಕೃಷ್ಣಯ್ಯ ಶೆಟ್ಟಿ ಹಾಗೂ ಅವರ ಸೋದರನಿಗೆ ಕೋರ್ಟ್ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಐಟಿಐ, ಎಚ್ಎಎಲ್, ಬಿಇಎಂಎಲ್, ಸೇರಿದಂತೆ ಹಲವು ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ರಿಯಾಯಿತಿ ದರದಲ್ಲಿ ನಿವೇಶನ ಮತ್ತು ಮನೆ ಕಟ್ಟಿಸಿ ಕೊಡುವುದಾಗಿ ಹೇಳಿ ಅವರ ಹೆಸರಿನಲ್ಲಿ ಬ್ಯಾಂಕ್ ನಿಂದ ಸಾಲ ಪಡೆದು ವಂಚಿಸಿದ ಆರೋಪದಲ್ಲಿ ಮಾಜಿ ಸಚಿವ ಸಿಲುಕಿದ್ದಾರೆ.

ಕೆಎಸ್ಆರ್ಟಿಸಿ, ಬಿಎಸ್ಎನ್ಎಲ್, ಸಂಸ್ಥೆಗಳ 181 ಮಂದಿಗೆ ಮನೆ ಕಟ್ಟಿಸಿ ಕೊಡುವುದಾಗಿ ಹೇಳಿ 7.17 ಕೋಟಿ ರೂ.ಬ್ಯಾಂಕ್ ಸಾಲವನ್ನು ನಕಲಿ ದಾಖಲೆ ಸೃಷ್ಟಿಸಿ ಪಡೆದ ಆರೋಪ ಇವರ ಮೇಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3.53 ಕೋಟಿ ರೂಪಾಯಿ ಸಾಲ ಮರುಪಾವತಿಸಿಲ್ಲ ಎಂದು ಆರೋಪಿಸಿ ಅಂದಿನ ಮುಖ್ಯ ವಿಚಕ್ಷಣಾ ದಳದ ಮುಖ್ಯಸ್ಥ ಆರ್.ಡಿ.ನಾಯ್ಡು ದೂರು ನೀಡಿದ್ದರು.

ಈ ದೂರಿನನ್ವಯ ಸಿಬಿಐ ತನಿಖೆ ನಡೆಸಿ,ಬ್ಯಾಂಕ್ ಖಾತೆಗಳು, ಸಾಲ ವಿತರಣೆಯಾದ ಮಾಹಿತಿ ಕಲೆ ಹಾಕಿತ್ತು. ಇದರಲ್ಲಿ ಕೃಷ್ಣಯ್ಯಶೆಟ್ಟಿ ಶ್ರೀನಿವಾಸ್ ಮುನಿರಾಜು ಮತ್ತು ರೆಡ್ಡಿ ಎಂಟಿವಿ ತಪ್ಪಿತಸ್ಥರು ಎಂಬುದನ್ನು ಪತ್ತೆ ಹಚ್ಚಿದ ಸಿಬಿಐ ಕೋರ್ಟ್ ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿತ್ತು.

ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಎಲ್ಲಾ ಆಪಾದಿತರನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ.

Leave a Reply