ದುಪ್ಪಟ್ಟು ಲಾಭ ಗಳಿಕೆ ಆಮಿಷ: 2.2 ಕೋಟಿ ರೂ. ಕಳೆದುಕೊಂಡ ಉದ್ಯಮಿ

1 year ago

ಬೆಂಗಳೂರು: ಅಮೇರಿಕನ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಬಲಿಯಾದ ಉದ್ಯಮಿ, ಬರೋಬ್ಬರಿ 2.2 ಕೋಟಿ ರೂ. ಕಳೆದುಕೊಂಡು ಇಂಗು ತಿಂದ ಮಂಗನಂತಾಗಿದ್ದಾರೆ. ವಂಚಕರಿಂದ ತಾನು ಕಳೆದುಕೊಂಡಿರುವ ಹಣ ವಾಪಸ್ ಕೊಡಿಸುವಂತೆ ಕೋರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ವೆಲ್ತ್ ಕ್ರಿಯೇಟರ್ ಎ111 ಎಂಬ ಆನ್‌ಲೈನ್‌ ಕಂಪನಿಯು ಅಮೆರಿಕನ್ ಹಾಗೂ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಶೇ.200% ರಷ್ಟು ವಾಪಾಸ್ ಲಾಭ ಗಳಿಸಬಹುದು‌ ಎಂದು ಕೊಟ್ಟು ಭರವಸೆಯನ್ನು ಕೊಟ್ಟಿದ್ದನ್ನು ನಂಬಿದ ಎಚ್‌ಆರ್ ಬಿಆರ್‌ ಲೇಔಟ್ ನಿವಾಸಿ  ಮುಖೇಶ್ ತಮ್ಮಲ್ಲಿದ್ದ ಹಣವನ್ನೆಲ್ಲ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ.

ಕಳೆದ ಡಿಸೆಂಬರ್ 10 ರಂದು ಮುಕೇಶ್ ಅವರ ವಾಟ್ಸಾಪ್‌ಗೆ ಒಂದು ಸಂದೇಶ ಬಂದಿದೆ. ಅದರಲ್ಲಿ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಗ್ರೂಪ್‌ಗೆ ಸೇರುವಂತೆ ಆಹ್ವಾನ ನೀಡಲಾಗಿದೆ. ಈ ಗುಂಪು  ಷೇರು ಮಾರುಕಟ್ಟೆಯ‌ ವಿಶೇಷ ಒಳನೋಟಗಳು ಮತ್ತು ಹೆಚ್ಚಿನ ಲಾಭವನ್ನು ಪಡೆಯುವ ಬಗ್ಗೆ ತರಬೇತಿ ನೀಡುವುದಾಗಿ ತಿಳಿಸಿತ್ತು.

ಸಂದೇಶದಲ್ಲಿ ಬಂದ ವಿವರಗಳನ್ನು ಓದಿಕೊಂಡ ಮುಕೇಶ್ ಆ ಗುಂಪಿಗೆ ಸೇರಿ, ಮೊದಲ 20 ದಿನ ಕೇವಲ ಅಬ್ಸರ್ವ್ ಮಾಡಿದ್ದರು. ಹೊರತಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೆಲ್ತ್ ಕ್ರಿಯೇಟರ್ ಎ111 ವಾಟ್ಸಾಪ್ ಗುಂಪಿನಲ್ಲಿ ಸುಮಾರು 70 ಹೂಡಿಕೆದಾರರಿದ್ದರು. ಗುಂಪಿನಲ್ಲಿ ಸಾಕಷ್ಟು ಅವರು ಲಾಭ ಗಳಿಸಿರುವ ಬಗ್ಗೆ ಮಾಹಿತಿ ಹಾಗೂ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು ಮತ್ತು ವಿಶೇಷ ವ್ಯಾಪಾರ ತರಗತಿಗಳಿಗೆ ಹಾಜರಾಗುತ್ತಿದ್ದರು.

ಮೊದಲಿಗೆ, ಮುಖೇಶ್‌ಗೆ ವಾಟ್ಸಾಪ್ ಗ್ರೂಪ್ ಬಗ್ಗೆ ಸಂಶಯವಿದ್ದರೂ, ನಂತರ ಆ ಗ್ರೂಪ್‌ನಲ್ಲಿ ಇತರರು ರಿಯಲ್ ಟೈಂ ಮಾರುಕಟ್ಟೆ ಕುರಿತ ಚರ್ಚೆಗಳು, ಲಾಭ ಗಳಿಸಿರುವ ಮಾಹಿತಿಗಳು ಹಂಚಿಕೊಂಡಿದ್ದರಿಂದ ಅವರು ನಂಬುವ ಸ್ಥಿತಿ‌ ತಲುಪಿದರು.

ಅಮೆರಿಕನ್ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ನಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿ ಕೊಡುವ ಬಗ್ಗೆ ಆ ಗ್ರೂಪ್‌ನಲ್ಲಿ ಭರವಸೆ ಕೊಡಲಾಗಿತ್ತು. ಈ ವೇಳೆ ಅಮರ್ತ್ಯ ಸಿಂಗ್ ಎಂಬ ವ್ಯಕ್ತಿಯು ಕ್ವಾಲಿಫೈಡ್ ಸಂಸ್ಥೆಯ ಖರೀದಿದಾರ ಎಂದು ಹೇಳಿಕೊಂಡು ತರಬೇತಿಗಳನ್ನು ಕೊಡಲು ಆರಂಭಿಸಿದ.

ಮಾರ್ಕೆಟ್ ಟ್ರೆಂಡ್ ಗಳ ಬಗ್ಗೆ ಟ್ರೈನಿಂಗ್ ನೀಡುತ್ತಿದ್ದ. ಆತನ ಸಲಹೆಗಳು ಕೂಡಾ ಆನ್ ಲೈನ್ ಡೇಟಾಗಳಿಗೆ ಹೋಲಿಕೆ ಆಗುತ್ತಿದ್ದವು. ಹೀಗಾಗಿ ವಂಚಕನ ಮೇಲೆ ಮುಕೇಶ್‌ಗೆ ವಿಶ್ವಾಸ ಬರಲು ಆರಂಭವಾಯಿತು. ಇದರಿಂದ ಆತನನ್ನು ನಂಬಿ, ಹೂಡಿಕೆ ಮಾಡಲು ಅಲ್ಲಿ ನೋಂದಾಯಿಸಿಕೊಂಡೆ ಎಂದು ಮುಕೇಶ್ ಹೇಳಿದ್ದಾರೆ.

ಹೀಗಿರುವಾಗಲೇ ಅಮರ್ತ್ಯ ಸಿಂಗ್, ವಂಚಿಸಲು ಡಿಸೆಂಬರ್ 27 ರಂದು ಮುಖೇಶ್‌ರನ್ನು ಸಂಪರ್ಕಿಸಿ ಕಂಪನಿಯಲ್ಲಿ ಹೂಡಿಕೆ ಮೈತ್ರಿ ಇಂಟರ್ನ್‌ಶಿಪ್‌ಗೆ ಆಹ್ವಾನಿಸಿದರು. ಆ ಕಂಪನಿಯು ಸೆಬಿಯಲ್ಲಿ ನೋಂದಾಯಿತ ಸಂಸ್ಥೆ ಮತ್ತು 2009 ರಿಂದ ಅಮೆರಿಕ ಎಸ್ ಇಸಿ (ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್) ನಿಂದ ಪ್ರಮಾಣೀಕರಿಸಲ್ಪಟ್ಟಿದೆ ಎಂದು ಸುಳ್ಳು ಹೇಳಿ ನಂಬಿಸಿದ್ದ.

ಈ ವೇಳೆ ಕಂಪನಿಯ ಅಧಿಕೃತ ನೋಂದಣಿ ಲಿಂಕ್ ಅನ್ನು ಸಹ ಕೊಡಲಾಗಿದೆ. ಅದರ ಬಗ್ಗೆ ಎಸ್ ಇಸಿ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪರಿಶೀಲಿಸಲು ಮುಖೇಶ್‌ಗೆ ತಿಳಿಸಿದ್ದಾರೆ. ಮುಖೇಶ್ ನೋಂದಣಿ ಮಾಡಿಕೊಂಡು ಖಾತೆಯನ್ನು ತೆರೆದಾಗ, ಡಿಜಿಟಲ್ ಪಾವತಿ ಅಪ್ಲಿಕೇಶನ್ ಮೂಲಕ ಎಮ್‌ಬಿ ಮಸಾಲೆ ಹೆಸರಿನ ಖಾತೆಗೆ 54,000 ರೂಪಾಯಿಗಳನ್ನು ಠೇವಣಿ ಇಡಲು ಹೇಳಲಾಗಿದೆ.

ಆ ಹಣ ವರ್ಚುವಲ್ ನಿಧಿಗೆ ಸೇರಿಸಿ, ಆರಂಭದಲ್ಲಿ ಸಣ್ಣ ಮಟ್ಟದ ಲಾಭ ವಾಪಾಸ್ ಕೊಡುವಂತೆ ಮಾಡಿ ನಂಬಿಕೆ ಹುಟ್ಟಿಸಿದ್ದಾರೆ. ನಂತರ, ಈ ವಂಚಕರು ಅಮೆರಿಕ ಷೇರು ಮಾರುಕಟ್ಟೆಯಲ್ಲಿ ಯಾವುದೇ ಶುಲ್ಕವಿಲ್ಲದೆ ಹೂಡಿಕೆ ಮಾಡಲು ಹಣವನ್ನು ಠೇವಣಿ ಇಡಲು ವಿವಿಧ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಕೊಟ್ಟಿದ್ದಾರೆ.

ಬಳಿಕ ಮುಕೇಶ್ ಡಿಸೆಂಬರ್ 30 ರಿಂದ ಜನವರಿ 20 ರವರೆಗೆ, ಎರಡು ಬ್ಯಾಂಕ್ ಖಾತೆಗಳಿಂದ 16 ವಹಿವಾಟುಗಳಲ್ಲಿ ಸುಮಾರು 2.2 ಕೋಟಿ ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಅಷ್ಟರಲ್ಲಿ ಅದು ವಂಚನೆ ಎಂದು ಗೊತ್ತಾಗಿದೆ. ಆದರೆ ಆಗಲೇ 1.3 ಕೋಟಿ ರೂ. ಕಳೆದುಕೊಂಡಿದ್ದಾರೆ.

ಲಾಭವನ್ನು ಕೇಳಿದಾಗ ಶುಲ್ಕದ ಹೆಸರಲ್ಲಿ ಮತ್ತಷ್ಟು ಹಣ ಕೇಳಿ ಒತ್ತಾಯಿಸಿದ್ದಾರೆ. ಇದರಿಂದ ಮುಕೇಶ್ ಸೈಬರ್ ಹೆಲ್ಪ್‌ಲೈನ್‌ಗೆ ಮತ್ತು ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಒಟ್ಟಿನಲ್ಲಿ ಮುಕೇಶ್ ಸೈಬರ್ ಕ್ರೈಂ ವಂಚನೆ ತಿಳಿಯದೆ, ಎಲ್ಲಾ ಉಳಿತಾಯವನ್ನು ಹೂಡಿಕೆ ಮಾಡಿ, ಸ್ನೇಹಿತರಿಂದ ಹಣ ಸಾಲ ಮಾಡಿ, ಆಭರಣಗಳನ್ನು ಅಡ ಇಟ್ಟು ಸಂಪೂರ್ಣವಾಗಿ ದಿವಾಳಿಯಾಗಿದ್ದಾರೆ.

Leave a Reply